ಆರ್ಆರ್ ನಗರ ಚುನಾವಣೆ ಫಲಿತಾಂಶ ತಡೆಗೆ ಹೈಕೋರ್ಟ್ಗೆ ಮನವಿ
ಬೆಂಗಳೂರು, ಮೇ 11: ಮತದಾರರ ಪಟ್ಟಿ ಅಕ್ರಮ ನಡೆದಿದೆ ಎನ್ನಲಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯ ಫಲಿತಾಂಶವನ್ನು ತಡೆಹಿಡಿಯಬೇಕು ಎಂದು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿದೆ.
ನಗರದ 'ಸಮರ್ಪಣ' ಎಂಬ ಸಮಾಜ ಸೇವಾ ಸಂಘಟನೆಯೊಂದು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಚುನಾವಣಾ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಕಾರಣ ರಾಜರಾಜೇಶ್ವರಿ ನಗರ ಕ್ಷೇತ್ರದ ಹಲವು ಅಭ್ಯರ್ಥಿಗಳು ಮತ್ತು ಕೆಲವು ಸಮಾಜ ಘಾತುಕರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ರಾಜರಾಜೇಶ್ವರಿ ನಗರದ ಅಪಾರ್ಟ್ಮೆಂಟ್ ಒಂದರಲ್ಲಿ 9000 ಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಮೊದಲಿಗೆ ಅವೆಲ್ಲಾ ನಕಲಿ ಮತದಾರರ ಚೀಟಿಗಳು ಎನ್ನಲಾಗಿತ್ತು ಆದರೆ ನಂತರ ಚುನಾವಣಾ ಆಯೋಗವು ಅವೆಲ್ಲಾ ಅಧಿಕೃತ ಮತದಾರರ ಗುರುತಿನ ಚೀಟಿಗಳು ಎಂದು ಹೇಳಿತು.

ಪ್ರಕರಣ ಸಂಬಂಧ ಈಗಾಗಲೇ ಕೆಲವರನ್ನು ಬಂಧಿಸಲಾಗಿದ್ದು, ರಾರಾ ನಗರದ ಕಾಂಗ್ರೆಸ್ ಶಾಸಕ ಮುನಿರತ್ನ ಅವರ ಮೇಲೂ ಎಫ್ಐಆರ್ ದಾಖಲಿಸಲಾಗಿದೆ.
ರಾರಾ ನಗರದಲ್ಲಿ ಗುರುತಿನ ಚೀಟಿಗಳು ಸಿಕ್ಕಿರುವುದು ಸ್ಪಷ್ಟವಾದ ಚುನಾವಣಾ ನೀತಿಗಳ ಉಲ್ಲಂಘನೆ ಮತ್ತು ಮತದಾನ ಪ್ರಕ್ರಿಯೆಯನ್ನು ಬುಡಮೇಲು ಮಾಡುವಂತಹಾ ಕಾರ್ಯ, ಜೊತೆಗೆ ಜನತಾ ಪ್ರಾತಿನಿಧ್ಯ ಕಾಯ್ದೆ-1951 ಕಲಂ 123ರ ಸ್ಪಷ್ಟ ಉಲ್ಲಂಘನೆ ಆಗಿರುವ ಕಾರಣ ಮತದಾನ ನಡೆದರೂ ಫಲಿತಾಂಶವನ್ನು ತಡೆಹಿಡಿಯಬೇಕು ಎಂದು ಮನವಿ ಮಾಡಲಾಗಿದೆ.
ರಾರಾ ನಗರದ ಎಲ್ಲಾ ಚುನಾವಣಾ ಅಕ್ರಮಗಳ ದೂರುಗಳ ಕುರಿತು ಸ್ಪಷ್ಟ ತನಿಖೆ ನಡೆದು ತೀರ್ಪು ಬರುವವರೆಗೆ ಫಲಿತಾಂಶ ತಡೆ ಹಿಡಿದು ಆ ನಂತರ ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂಬುದು 'ಸಮರ್ಪಣ' ಸಂಸ್ಥೆಯ ಮನವಿ.












Click it and Unblock the Notifications