ಪೋಟೊ ವೈರಲ್: ಪ್ರಧಾನಿ ರೋಡ್ ಶೋ ವೇಳೆ ಬಿಜೆಪಿ ನಾಯಕರ ಮಾದರಿ ನಡೆ: ಬೊಮ್ಮಾಯಿ
ಬೆಂಗಳೂರು, ಆಗಸ್ಟ್ 27: ಚಂದ್ರಯಾನ 3 ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೊ ವಿಜ್ಞಾನಿಗಳನ್ನು ಸನ್ಮಾನಿಸಲು ಬೆಂಗಳೂರಿಗೆ ಆಗಮಿಸಿದಾಗ ನಮ್ಮ ಬಿಜೆಪಿ ನಾಯಕರು ಸಾರ್ವಜನಿಕರೊಂದಿಗೆ ನಿಂತು ಮಾದರಿಯ ನಡೆ ಅನುಸರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾನುವಾರ ಶೋಭಾ ನಾಗಸಂದ್ರ ಅಪಾರ್ಟ್ಮೆಂಟ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಂದ್ರಯಾನ 3 ಯಶಸ್ವಿ ಉಡಾವಣೆಗೆ ಕಾರಣರಾದ ವಿಜ್ಞಾನಿಗಳಿಗೆ ಸನ್ಮಾನ ಮಾಡಿ ಅವರು ಮಾತನಾಡಿದರು.

ಪ್ರಧಾನಮಂತ್ರಿಗಳ ಬಂದಾಗ ಶಿಷ್ಟಾಚಾರ ಪಾಲನೆಯಲ್ಲಿ ರಾಜ್ಯ ಬಿಜೆಪಿ ನಾಯಕರು ರಸ್ತೆಯ ಮಧ್ಯ ಜನರ ಜೊತೆ ನಿಂತ ಕೈ ಬೀಸಿರುವುದಕ್ಕೆ ಕಾಂಗ್ರೆಸ್ ಟೀಕೆ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಶಿಷ್ಟಾಚಾರ (ಪ್ರೋಟೋಕಾಲ್) ಪಾಲನೆಯಲ್ಲಿ ಯಾವುದೇ ಗೊಂದಲ ಇರಲಿಲ್ಲ. ನಾವೆಲ್ಲ ಸಾರ್ವಜನಿಕ ಜೀವನಕ್ಕೆ ಬಂದಿರುವುದು ಸೇವೆ ಮಾಡಲು ಎಂದು ಕಾಂಗ್ರೆಸ್ ಟೀಕೆಗೆ ಅವರು ತಿರುಗೇಟು ನೀಡಿದರು.
ಹೊಗಳುವ ಮನಸ್ಸುಗಳು ಬೇಕು
ಇಸ್ರೋದಂಥ ಸಂಸ್ಥೆ, ವಿಜ್ಞಾನಿಗಳು ಇಂಥ ದೊಡ್ಡ ಸಾಧನೆ ಮಾಡಿದಾಗ ನಾವು ಒಂದು ಹೆಜ್ಜೆ ಹಿಂದೆ ಸರಿಯಬೇಕು. ನಾವು ಹಿಂದೆ ಸರಿದು ಅವರಿಗೆ ಮಹತ್ವ ಕೊಡಬೇಕು. ಸೇವಾ ಮನೋಭಾವದಿಂದ ಸಾಮಾನ್ಯ ಜನರ ನಡುವೆ ನಮ ನಾಯಕರು ಇದ್ದು ಆ ಕೆಲಸ ಮಾಡಿದ್ದಾರೆ. ಅದನ್ನು ತಿಳಿದುಕೊಳ್ಳುವ, ಹೊಗಳುವ ಮನಸುಗಳು ಬೇಕಷ್ಟೇ ಎಂದು ಕುಟುಕಿದರು.
ಇಸ್ರೋ ಅಧ್ಯಕ್ಷರು ಮೊದಲು ಮೂರು ನಿಮಿಷ ಮಾತನಾಡಿ ಸಾಧನೆಗೆ ಕಾರಣರಾದವರನ್ನು ಮುಂದೆ ಬಿಟ್ಟರು. ಇದರರ್ಥ ಇಸ್ರೋ ಅಧ್ಯಕ್ಷರು ಹಿಂದೆ ಸರಿದರು ಅಂತಲ್ಲ. ನಮ್ಮ ನಾಯಕರು ಹಿಂದೆ ಸರಿದು ನಿಂತು ಜನರನ್ನು ಮುಂದೆ ಬಿಟ್ಟಿದ್ದಾರೆ ಎಂದು ಬೊಮ್ಮಾಯಿ ಸಮರ್ಥಿಸಿಕೊಂಡರು.

ಟೀಕೆಯಿಂದ ಕಾಂಗ್ರೆಸ್ನ ಮನಸ್ಥಿತಿ ಪ್ರದರ್ಶನ
ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸಲು ಪ್ರಧಾನಿಯವರು ಬಂದಾಗ ಜನರ ಮಧ್ಯೆ ನಮ್ಮ ನಾಯಕರು ನಿಂತಿದ್ದಾರೆ. ನಮ್ಮ ನಾಯಕರು ಅತ್ಯಂತ ಮಾದರಿಯಾದ ಅನುಕರಣೀಯ ನಡವಳಿಕೆ ತೋರಿದ್ದಾರೆ. ಇವತ್ತಿನ ದಿನ ಎಲ್ಲರೂ ತಮ್ಮ ಸ್ಥಾನಮಾನಕ್ಕೆ ಪೈಪೋಟಿ ಮಾಡುತ್ತಾರೆ. ನಮ್ಮ ನಾಯಕರು ಅತ್ಯಂತ ಅನುಕರಣನೀಯ ಮಾದರಿ ಅನುಸರಿಸಿದ್ದಾರೆ. ಬಿಜೆಪಿ ನಾಯಕರು ಬೀದಿ ಪಾಲಾದರು, ಬ್ಯಾರಿಕೇಡ್ ಬಂಧಿ ಆದರು ಎಂದು ಕಾಂಗ್ರೆಸ್ ನವರು ಹೇಳಿರುವುದು ಅವರ ಮನಸ್ಥಿತಿ ತೋರಿಸುತ್ತದೆ ಎಂದು ಗುಡುಗಿದರು.
ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಶಾಸಕ ಎಸ್.ಟಿ.ಸೋಮಶೇಖರ್ ಬಾರದೇ ಇರದಿರುವ ಕುರಿತು ಕೇಳಿದ ಪ್ರಶ್ನೆಗೆ ಅವರ ಜೊತೆ ಮಾತನಾಡಿದ್ದೇನೆ ಎಂದರು.
40% ನಿರ್ಧಿಷ್ಟ ಪ್ರಕರಣ ಇಲ್ಲ
ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿ 40% ಕಮೀಷನ್, ಕೋವಿಡ್ ಅಕ್ರಮಗಳ ತನಿಖೆಗೆ ವಿಚಾರಣಾ ಆಯೋಗಗಳ ರಚನೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ವಿಚಾರಣೆ ಆಗಲಿ, ತನಿಖೆ ಆಗಲಿ ಇದರಲ್ಲಿ ಆಶ್ಚರ್ಯ ಏನಿಲ್ಲ. ಈಗಾಗಲೇ ಪಿಎಸ್ಐ ನೇಮಕಾತಿ ಕೇಸ್ ತನಿಖೆ ನಡೆದು ಚಾರ್ಜ್ಶೀಟ್ ಆಗಿದೆ. ಇವರು ಚಾರ್ಜ್ಶೀಟ್ ನಲ್ಲಿರುವವರ ರಕ್ಷಣೆ ಮಾಡುತ್ತಾರಾ ಅಥವಾ ಇನ್ನೊಂದು ಆಯಾಮದಲ್ಲಿ ತನಿಖೆ ಮಾಡುತ್ತಾರಾ? ಪಿಎಸ್ಐ ಕೇಸ್ ನ ತನಿಖೆಯೂ ಪೊಲೀಸರೇ ಮಾಡಬೇಕು ಯಾವ ರೀತಿ ತನಿಖೆ ಮಾಡುತ್ತಾರೆ ಎಂದು ಕಾದು ನೋಡೋಣ ಎಂದು ತಿಳಿಸಿದರು.
ಕಾಂಗ್ರೆಸ್ಗೆ ಬೊಮ್ಮಾಯಿ ಮುಂದಿಟ್ಟ ಪ್ರಶ್ನೆಗಳು
40ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರ ಆರೋಪದಲ್ಲಿ ನಿರ್ದಿಷ್ಟ ಪ್ರಕರಣ ಇಲ್ಲ, ದಾಖಲೆ ಇಲ್ಲ. ಎರಡು ವರ್ಷವಾದರೂ ಅವರು ದಾಖಲೆ ಕೊಟ್ಟಿಲ್ಲ. ಲೋಕಾಯುಕ್ತ ಎದುರು ಹೆಚ್ಚು ಟೆಂಡರ್ ಕೊಟ್ಟ ಹಲವು ಪ್ರಕರಣಗಳು ಇವೆ. ಇವುಗಳನ್ನು ತನಿಖೆಗೆ ಕೊಡುತ್ತಾರಾ? ಹೊಸ ದೂರು ಕೊಟ್ಟರೆ ಇವರು ಸೇರಿಸಿಕೊಳ್ಳುವರೇ? ಭ್ರಷ್ಟಾಚಾರ ಯಾವತ್ತಿದ್ದರೂ ಭ್ರಷ್ಟಾಚಾರವೇ, ಅವರ ಕಾಲದ ಆರೋಪಗಳನ್ನು ತನಿಖೆ ಮಾಡುತ್ತಾರೆಯೇ? ಅಂದು ಪ್ರಶ್ನಿಸಿದ ಅವರು, ನಮ್ಮ ಕಾಲದ ಆರೋಪಗಳನ್ನು ತನಿಖೆ ಮಾಡಿ ಅಂತ ಮುಕ್ತವಾಗಿ ಹೇಳಿದ್ದೇವೆ.
ಆದರೆ, ಅವರ ಕಾಲದ ಆರೋಪಗಳ ಬಗ್ಗೆಯೂ ತನಿಖೆ ಮಾಡಲಿ ಅದಕ್ಕೆ ಯಾಕೇ ಹಿಂದೇಟು ಹಾಕುತ್ತಿದ್ದಾರೆ?. ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ, ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುವ ಹುನ್ನಾರ ಇದರ ಹಿಂದೆ. ಇದೇ ವೇಳೆ ಸೋಮವಾರ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರು ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಾರೆ ಎಂದು ತಿಳಿಸಿದರು.












Click it and Unblock the Notifications