ನೋಟು ಬದಲಿಸಿಕೊಳ್ಳಲು ಬ್ಯಾಂಕ್ ಮುಂದೆ ಬೆಳ್ ಬೆಳಗ್ಗೆ ಜನವೋ ಜನ
ಹೊಸ ನೋಟು ಹೇಗಿರಬಹುದು ಎಂಬ ಕುತೂಹಲದಿಂದ ಮೊದಲುಗೊಂಡು, ಇನ್ನು ಮುಂದೆ ಮತ್ತಿನ್ನೇನು ಹೊಸ ನಿಯಮ ತರುತ್ತಾರೋ ಎಂಬ ಗಾಬರಿಯವರೆಗೆ ಎಲ್ಲವೂ ಸೇರಿ ನಗರದ ಬಹುತೇಕ ಬ್ಯಾಂಕ್ ಗಳ ಎದುರು ಜನವೋ ಜನ.
ಬೆಂಗಳೂರು, ನವೆಂಬರ್ 10: ಬ್ಯಾಂಕ್ ಗಳ ಸಿಬ್ಬಂದಿಗೆ ಗುರುವಾರ, ನವೆಂಬರ್ 10 ಮರೆಯಲಾಗದ ದಿನವಾಗುವ ಎಲ್ಲ ಸಾಧ್ಯತೆಗಳಿವೆ. ವರ್ಷದಲ್ಲಿ ಮಾಡಿದ್ದ ಎಲ್ಲ ಕೆಲಸದ ಹೊರೆ ಒಂದೇ ದಿನದಲ್ಲಿ ಆಗುವ ಎಲ್ಲ ಲಕ್ಷಣವೂ ಗೋಚರಿಸಿತು. 500, 1000 ರುಪಾಯಿ ನೋಟಿಗೆ ಬದಲಿಯಾಗಿ ಪಡೆಯಲು ಇಂದಿನಿಂದ ಪ್ರಕ್ರಿಯೆ ಆರಂಭವಾಗಿದೆ.
ಹೊಸ ನೋಟು ಹೇಗಿರಬಹುದು ಎಂಬ ಕುತೂಹಲದಿಂದ ಮೊದಲುಗೊಂಡು, ಇನ್ನು ಮುಂದೆ ಮತ್ತಿನ್ನೇನು ಹೊಸ ನಿಯಮ ತರುತ್ತಾರೋ ಎಂಬ ಗಾಬರಿಯವರೆಗೆ ಎಲ್ಲವೂ ಸೇರಿ ನಗರದ ಬಹುತೇಕ ಬ್ಯಾಂಕ್ ಗಳ ಎದುರು ಜನವೋ ಜನ. ಇನ್ನು ಗ್ರಾಹಕರ ಪ್ರಶ್ನೆಗಳು, ಗೊಂದಲ, ಕೆಲವು ದಾಖಲೆ ಪರಿಶೀಲನೆ ಹೀಗೆ ಎಲ್ಲ ಜವಾಬ್ದಾರಿಯೂ ಸೇರಿ ಬ್ಯಾಂಕ್ ಸಿಬ್ಬಂದಿ ಬೆಳ್ ಬೆಳಗ್ಗೆಯೇ ಗಾಬರಿಯಾಗಿದ್ದಾರೆ.

ಇನ್ನು ಅಂಚೆ ಕಚೇರಿಗಳಲ್ಲಿ ಕೆಲವು ಕಡೆ ಅಲ್ಲಿ ಖಾತೆ ಇದ್ದರಷ್ಟೇ ನೋಟು ಬದಲಾವಣೆ ಸಾಧ್ಯ ಎಂದು ತಿಳಿಸಿರುವ ಬಗ್ಗೆ ಮಾಹಿತಿಗಳು ಬರುತ್ತಿವೆ. ಈ ರೀತಿ ಸನ್ನಿವೇಶಗಳು ಇತ್ತೀಚೆಗೆ ಅಪರೂಪ ಎಲ್ಲ ಬ್ಯಾಂಕ್ ಗಳಲ್ಲೂ ಎಟಿಎಂ ಸೌಲಭ್ಯ, ಇಂಟರ್ ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಅಂತ ಇರುವಾಗ ಜನರು, ಅದರಲ್ಲೂ ಈ ಎಲ್ಲ ವ್ಯವಸ್ಥೆ ಬಗ್ಗೆ ಅಷ್ಟಾಗಿ ಪರಿಚಯ ಇಲ್ಲದವರು ಬರುತ್ತಿದ್ದರು.
'ಇಂದು ಬ್ಯಾಂಕ್ ಗೆ ಬಂದಿರುವ ಎಷ್ಟೋ ಜನರನ್ನು ಮೊದಲ ಸಲ ನೋಡ್ತಿದೀನಿ. ಎರಡು ವರ್ಷದಿಂದ ಇದೇ ಶಾಖೆಯಲ್ಲಿದ್ದೀನಿ. ಎಟಿಎಂ ಕಾರ್ಡ್ ತಗೊಳ್ಳೋಕೋ, ಆಧಾರ್ ಲಿಂಕ್ ಮಾಡಿಸೋಕೆ ಬಂದಿದ್ದು ಬಿಟ್ಟರೆ ಈಗಲೇ ಇಷ್ಟು ಜನ ಬ್ಯಾಂಕ್ ಗೆ ಬರ್ತಿರೋದು. ಇನ್ನೂ ಕೆಲವು ದಿನ ಭಾರೀ ಕೆಲಸ ಇರುತ್ತೆ. ಮತ್ತೆ ಇನ್ನೇನು ಕೂಗಾಟ-ಕಿರುಚಾಟ ಕೇಳಬೇಕೋ ಏನೋ?' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡವರು ಜಯನಗರದ ಬ್ಯಾಂಕ್ ವೊಂದರ ನೌಕರರು.
ಬೆಳಗ್ಗೆ 7 ಗಂಟೆಗೆ ಬಂದಿದ್ದೀನಿ. ಡೆಬಿಟ್ -ಕ್ರೆಡಿಟ್ ಕಾರ್ಡ್ ಬಳಸಬಹುದು ಅಂದಿದ್ದಾರೆ. ಬೆಂಕಿ ಪೊಟ್ಟಣ, ಅರ್ಧ ಕೆ.ಜಿ ಈರುಳ್ಳಿ ತಗೊಳ್ಳೋಕೆ ಯಾವ ಕಾರ್ಡ್ ಕೊಡೋಣ. ಎಟಿಎಂನಲ್ಲಿ ದುಡ್ಡಿದ್ದರೂ ಪ್ರಯೋಜನವಿಲ್ಲ. ಎಅರಡು ದಿನದಿಂದ ನಮ್ಮ ಸ್ಥಿತಿ ಹೇಳೋದೇ ಬೇಡ. ಮನೆ ಮುಂದೆ ಕಸ ಎತ್ತೋಕೆ ಬರೋರಿಗೆ ನೂರು ರುಪಾಯಿ ತಿಂಗಳು-ತಿಂಗಳು ಕೊಡ್ತೀವಿ. ಅವರಿಗೆ ಕೂಡ ನಾಡಿದ್ದು ಬನ್ನಿ ಅಂದಿದ್ದೀವಿ' ಅಂತ ಹೇಳಿಕೊಂಡವರು ಬನಶಂಕರಿಯ ಉಮೇಶ್.











Click it and Unblock the Notifications