ಪೇ ಸಿಎಂ, ಪೇ ಸೋನಿಯಾ, ಪೇ ಹೈಕಮಾಂಡಗೆ ಹಂಚಿದರೆ 40% ಅಲ್ಲ 60% ಆಗುತ್ತೆ- ಯತ್ನಾಳ್
ಬೆಂಗಳೂರು ಜುಲೈ 3: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮಾಡಿದ ಆರೋಪ ಸರಿಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮೊದಲು 40% ಇರಲಿಲ್ಲ ಕಾಂಗ್ರೆಸ್ ಸರ್ಕಾರದಲ್ಲಿ ಈಗ ಶುರುವಾಗಿದೆ. ಸುರ್ಜೇವಾಲ, ವೇಣುಗೋಪಾಲ್, ಡಿಸಿಎಂ, ಸಿಎಂ ಸಿದ್ದರಾಮಯ್ಯ ಎಲ್ಲರಿಗೂ ಹಣ ತಲುಪುತ್ತದೆ. 40% ಅಲ್ಲ ಪೇ ಸಿಎಂ, ಪೇ ಸೋನಿಯಾ, ಪೇ ಹೈಕಮಾಂಡ ಎಲ್ಲ ಕಡೆ ಹರಿದು ಹಂಚಿ ಹೋಗಿ 60% ಆಗುತ್ತದೆ' ಎಂದು ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಡಿಸಿಎಂ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಯತ್ನಾಳ, 'ನೀವು ಲಂಚ ತಿನ್ನಬೇಡಿ, ನಾವು ತಿನ್ನೋದಿಲ್ಲ ಅಂತ(ಡಿಕೆ ಶಿವಕುಮಾರ್) ಸತ್ಯ ಹರಿಶ್ಚಂದ್ರರ ಮೇಲೆ ಹೊಡೆದಂಗೆ ಹೇಳ್ತಾರೆ. ಲಂಚ ಎಲ್ಲರೂ ತಿಂತಾರೆ' ಎಂದು ಆಕ್ರೋಶ ಹೊರಹಾಕಿದರು.

ಕುಮಾರಸ್ವಾಮಿ ಹೇಳಿದ್ದೇನು?
ವೈಎಸ್ಟಿ ಹಾಗೂ ವಿಎಸ್ಟಿ ಟ್ಯಾಕ್ಸ್ ಆರೋಪದ ಬೆನ್ನಲ್ಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಆರೋಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಿಂದೆ ಮುಂದೆ ಓಡಾಡುವ ಶಾಸಕರೊಬ್ಬರು 30 ಲಕ್ಷ ಕೊಟ್ರೆ ಕೆಲಸ ಆಗುತ್ತೆ ಅಂತ ಕೃಷ್ಣಾದಲ್ಲಿ ಹೇಳಿದ್ದಾರೆ. ಆದರೆ ದುಡ್ಡು ಕೊಟ್ಟವನು ಸಾಕ್ಷಿ ಹೇಳ್ತಾನಾ, ಅವನ ಕೆಲಸ ಆಗಬೇಕಲ್ವಾ? ಅದಕ್ಕೆ ಆತ ಹೇಳಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ನವೆಂಬರ್ ಡಿಸೆಂಬರ್ಗೆ ಬದಲಾವಣೆ ಅಂತ ಬಿಜೆಪಿ ನಾಯಕರೇ ಹೇಳ್ತಿದ್ದಾರೆ. ಹೀಗಾಗಿ ಕರ್ನಾಟಕದಲ್ಲೂ ಮತ್ತೊಬ್ಬ ಅಜಿತ್ ಪವಾರ್ ಹುಟ್ಟಿಕೊಂಡರೂ ಆಶ್ಚರ್ಯಪಡಬೇಕಾಗಿಲ್ಲ. ನಾನು ಯಾರಿಗೂ ಹೆದರಲ್ಲ ಹೇಳಬೇಕಾದದನ್ನೆಲ್ಲ ಹೇಳ್ತೀನಿ. ಸದನದಲ್ಲೇ ಮಾತನಾಡುತ್ತೇನೆ ಎಂದು ಗುಡುಗಿದರು.
ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್ ಅವರು ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಅವರು ಫೋರ್ ಬಾರಿಸಿದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಕ್ಸಿ ಬಾರಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ
ಇನ್ನೂ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, 'ದಾಖಲೆ ಇಟ್ಟು ಮಾತನಾಡಲಿ. ಮತ್ತೊಮ್ಮೆ ಮನವಿ ಮಾಡುತ್ತೇನೆ. ಈ ತರ ಹೇಳಿಕೆ ಕೊಡೋದು ಅವರ ಘನತೆಗೆ ಒಳ್ಳೆಯದಲ್ಲ. ಅವರು ದಾಖಲೆ ಮುಂದೆ ಇಟ್ಟು ಮಾತನಾಡಿದರೆ ಎಲ್ಲರಿಗೂ ಅರ್ಥವಾಗುತ್ತದೆ' ಎಂದು ಹೇಳಿದ್ದಾರೆ.












Click it and Unblock the Notifications