ಪಾದರಾಯನಪುರ ದಾಂಧಲೆ: ಪೊಲೀಸರಿಗೆ ಫ್ರೀ ಹ್ಯಾಂಡ್ ಘೋಷಿಸಿದ ಸಿಎಂ
ಬೆಂಗಳೂರು, ಏಪ್ರಿಲ್ 20: ಕೊರೊನಾ ವಾರಿಯರ್ಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪಾದರಾಯನಪುರದ ಪುಂಡರ ವಿರುದ್ಧ ಸರ್ವ ರೀತಿಯ ಶಿಸ್ತು ಕ್ರಮ ಕೈಗೊಳ್ಳಲು ಪೊಲೀಸರು ಸರ್ವ ಸ್ವತಂತ್ರರು. ಕರ್ತವ್ಯ ಮತ್ತು ಪ್ರಾಣ ರಕ್ಷಣೆಗೆ ಅಗತ್ಯ ಬಲ ಪ್ರಯೋಗಕ್ಕೆ ಹಿಂಜರೆಯಬೇಡಿ ಎಂದು ಆರಕ್ಷಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ನೀಡಿದ್ದಾರೆ.
ಬೆಂಗಳೂರಿನ ಪಾದರಾಯನಪುರದಲ್ಲಿ ನಿನ್ನೆ ರಾತ್ರಿ ನಡೆದ ಘಟನೆಯ ಹಿನ್ನಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ಟ್ವಿಟ್ಟರ್ ಮೂಲಕ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.
ಕಳೆದ ರಾತ್ರಿ ಕ್ವಾರಂಟೈನ್ ಸಲುವಾಗಿ ಪಾದರಾಯನಪುರದ 54 ಮಂದಿ ಶಂಕಿತರನ್ನು ಕರೆದುಕೊಂಡು ಹೋಗಲು ಆರೋಗ್ಯ ಕಾರ್ಯಕರ್ತರು ಮುಂದಾಗಿದ್ದರು. ಸೀಲ್ ಡೌನ್ ಏರಿಯಾದೊಳಗೆ ಈ ಪ್ರಕ್ರಿಯೆ ನಡೆಸುತ್ತಿದ್ದ ವೇಳೆ, ಏಕಾಏಕಿ ಮಹಿಳೆಯೋರ್ವಳ ನೇತೃತ್ವದಲ್ಲಿ ದಾಂಧಲೆಗಿಳಿದ ಕೆಲ ಪುಂಡ ಯುವಕರು ಕಾನೂನು ವ್ಯವಸ್ಥೆಗೆ ಧಕ್ಕೆ ತಂದಿದ್ದೂ ಅಲ್ಲದೆ, ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆಗೂ ಮುಂದಾಗಿದ್ದರು.
ಈ ಎಲ್ಲಾ ಬೆಳವಣಿಗೆಯನ್ನ ಗಮನಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ''ಕಾನೂನಾತ್ಮಕವಾಗಿ ಎಲ್ಲರೂ ನಡೆದುಕೊಳ್ಳಬೇಕು. ಐಕ್ಯತೆಯನ್ನು ಕಾಪಾಡಿಕೊಳ್ಳಬೇಕು. ಸಂಕಷ್ಟದ ಸಮಯದಲ್ಲಿ ಎಲ್ಲರೂ ಒಂದಾಗಿ ನಿಲ್ಲಬೇಕು. ಅದನ್ನು ಬಿಟ್ಟು ಈ ರೀತಿ ನಡೆದುಕೊಳ್ಳುವುದು ಶೋಭೆ ತರುವ ವಿಚಾರವಲ್ಲ'' ಎಂದು ಖಂಡಿಸಿದ್ದರು.
|
ಬಿ.ಎಸ್.ಯಡಿಯೂರಪ್ಪ ಮಾಡಿರುವ ಟ್ವೀಟ್
ಪಾದರಾಯನಪುರದ ಘಟನೆಯ ಕುರಿತು ಟ್ವೀಟ್ ಮಾಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ''ಗೂಂಡಾವರ್ತನೆ ತೋರಿದವರ ವಿಷಯದಲ್ಲಿ ಮೃದು ಧೋರಣೆಯ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸರ್ವತಂತ್ರ ಸ್ವತಂತ್ರರು. ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವವರಿಂದ, ಪ್ರಾಣ ರಕ್ಷಣೆ ಮಾಡಿಕೊಳ್ಳಲು ಲಭ್ಯವಿರುವ ಎಲ್ಲ ರೀತಿಯ ಬಲಪ್ರಯೋಗ ಮಾಡಲು ಪೊಲೀಸರಿಗೆ ಮುಕ್ತ ಅವಕಾಶ ಇದೆ'' ಎಂದು ತಿಳಿಸಿದ್ದಾರೆ.

ಅಂದು ಎಚ್ಚರಿಕೆ ಕೊಟ್ಟಿದ್ದ ಬಿ.ಎಸ್.ವೈ
ಈ ಹಿಂದೆ ತಬ್ಲಿಘಿ ವಿಚಾರದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ''ರೋಗ ಹರಡುವವರಿವರು'' ಎನ್ನುವ ಆಪಾದನೆಯನ್ನು ಹೊರಿಸಲಾಗಿತ್ತು. ಈ ವೇಳೆ ಸಮುದಾಯದ ಪರ ನಿಂತಿದ್ದ ಬಿ.ಎಸ್.ಯಡಿಯೂರಪ್ಪ ''ಮುಸ್ಲಿಮರ ವಿರುದ್ಧ ವಿನಾಕಾರಣ ಆರೋಪ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ'' ಎಂದು ಎಚ್ಚರಿಕೆ ಕೊಟ್ಟಿದ್ದರು.

ಟೀಕಾಕಾರರ ಬಾಯಿ ಮುಚ್ಚಿಸಿದ ಬಿ.ಎಸ್.ವೈ
ನಿನ್ನೆಯ ಪಾದರಾಯನಪುರದ ಘಟನೆಯನ್ನು ಉಲ್ಲೇಖಿಸಿ, ಯಡಿಯೂರಪ್ಪ ನವರ 'ತಬ್ಲಿಘಿ ಹೇಳಿಕೆ'ಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿತ್ತು. ಇವೆಲ್ಲದಕ್ಕೂ ಟ್ವೀಟ್ ಮೂಲಕ ಉತ್ತರ ನೀಡಿರುವ ಸಿಎಂ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದನ್ನು ಸಾರಿ ಟೀಕಾಕಾರರ ಬಾಯಿಗೆ ಬೀಗ ಹಾಕಿದ್ದಾರೆ.
|
ಆರೋಗ್ಯ ಸೈನಿಕರಿಗೆ ಸಿಎಂ ಯಡಿಯೂರಪ್ಪ ಅಭಯ
ತಪಾಸಣೆಗೆ ಹೋಗುವ ವೈದ್ಯರು, ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಭದ್ರತೆ ಕೊಡಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ. ''ಆರೋಗ್ಯ ಸೈನಿಕರ ಮೇಲೆ ಹಲ್ಲೆ ಪ್ರಕರಣಗಳನ್ನು ಸಹಿಸಲ್ಲ. ಹಲ್ಲೆಗೆ ಮುಂದಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ'' ಎಂದು ಸಿಎಂ ಸೂಚಿಸಿದ್ದಾರೆ.

ಸಚಿವ ಸಂಪುಟ ಸಭೆ
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಸಭೆಯಲ್ಲಿ ಪಾದರಾಯನಪುರದ ಘಟನೆ ಬಗ್ಗೆ ಹಾಗೂ ಲಾಕ್ ಡೌನ್ ನಿಯಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.












Click it and Unblock the Notifications