ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿ ಕೊಲೆ
ಬೆಂಗಳೂರು, ಸೆಪ್ಟೆಂಬರ್, 18 : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಗಲಾಟೆ ನಡೆದಿದ್ದು, ಒಬ್ಬ ಕೈದಿ ಮೃತಪಟ್ಟಿದ್ದಾನೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟ ಕೈದಿಯನ್ನು ಗಣೇಶ (21) ಎಂದು ಗುರುತಿಸಲಾಗಿದೆ. ಪ್ರಶಾಂತ್, ಸತೀಶ್, ಪ್ರಭು ಮತ್ತು ಭರತ್ ಎಂಬ ಕೈದಿಗಳು ಶುಕ್ರವಾರ ಬೆಳಗ್ಗೆ ಗಣೇಶನಿಗೆ ಥಳಿಸಿದ್ದಾರೆ. ಗಾಯಗೊಂಡ ಗಣೇಶನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಘಟನೆಯ ವಿವರ : ಶುಕ್ರವಾರ ಬೆಳಗ್ಗೆ ಉಪಹಾರದ ನಂತರ ಬ್ಯಾರಕ್ ಒಂದರಲ್ಲಿ ಕೊಠಡಿಯನ್ನು ಶುಚಿಗೊಳಿಸಲು ಫಿನಾಯಿಲ್ ತರುವಂತೆ ಸಹ ಕೈದಿಗಳು ಗಣೇಶನಿಗೆ ಹೇಳಿದರು. ಆಗ ಗಣೇಶ ಇದಕ್ಕೆ ನಿರಾಕರಿಸಿದ್ದಾನೆ. [ಜೈಲಿನಿಂದ ಕೈದಿ ಎಸ್ಕೇಪ್]
ಇದರಿಂದ ಕೋಪಗೊಂಡ ಪ್ರಶಾಂತ್, ಸತೀಶ್, ಪ್ರಭು ಮತ್ತು ಭರತ್ ಗಣೇಶನಿಗೆ ಮನಬಂದಂತೆ ಥಳಿಸಿದ್ದಾರೆ. ಈ ಗಲಾಟೆ ಸಂದರ್ಭದಲ್ಲಿ ಗಣೇಶ ಹಿಮ್ಮುಖವಾಗಿ ನೆಲಕ್ಕೆ ಬಿದ್ದಿದ್ದು, ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. [ಪರಪ್ಪನ ಅಗ್ರಹಾರದಲ್ಲಿ ಯಾರು ಮಾಡುತ್ತಿದ್ದಾರೆ ಕಿತಾಪತಿ?]
ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ನಾಲ್ವರು ಕೈದಿಗಳ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಾಗಿದೆ. ಡಿಸಿಪಿ ರೋಹಿಣಿ ಅವರು ಕಾರಾಗೃಹಕ್ಕೆ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications