ಕುಮಾರಸ್ವಾಮಿ ಅಚಾನಕ್ ಭೇಟಿ ಬಗ್ಗೆ ಮಾಹಿತಿ ನೀಡಿದ ಖರ್ಗೆ
Recommended Video
ಬೆಂಗಳೂರು, ಜೂನ್ 19: ಇಂದು ಬೆಳಿಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ಕುಮಾರಸ್ವಾಮಿ ಭೇಟಿ ರಾಜ್ಯ ರಾಝಕಾರಣದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಈ ಭೇಟಿಯ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇಂದು ಬೆಳಿಗ್ಗೆ ಕುಮಾರಸ್ವಾಮಿ ಅವರು ಖರ್ಗೆ ಅವರ ಮನೆಗೆ ಬಂದು ಮಾತುಕತೆ ನಡೆಸಿದರು. ಭೇಟಿ ಬಳಿಕ ಮಾತನಾಡಿದ ಖರ್ಗೆ ಅವರು, ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.
ಲೋಕಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ಸಿಎಂ ಅವರು ಭೇಟಿಗೆ ಬಂದಿದ್ದರು. ನನ್ನ ಕ್ಷೇತ್ರದಲ್ಲಿನ ಗುರ್ಮಿಟ್ಕಲ್ನಲ್ಲಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಪ್ರಾರಂಭಿಸುತ್ತಿದ್ದಾರೆ, ಹಾಗಾಗಿ ಅಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಸಿಎಂ ಅವರ ಗಮನಕ್ಕೆ ತಂದೆ ಅಷ್ಟೆ ಎಂದು ಖರ್ಗೆ ಹೇಳಿದರು.
ಸರ್ಕಾರ ನಡೆಸಲು ಸಲಹೆಗಳನ್ನೇನಾದರೂ ನೀಡಿದಿರಾ? ಎಂಬುದಕ್ಕೆ ಉತ್ತರಿಸಿದ ಖರ್ಗೆ, ನನ್ನ ಚುನಾವಣೆಯನ್ನೇ ನಾನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ, ಇಂತಹಾ ಸಮಯದಲ್ಲಿ ನಾನು ಸಲಹೆ ಕೊಡುವುದು ಸೂಕ್ತವಲ್ಲ ಎಂದು ಹೇಳಿದರು.

'ಸಮ್ಮಿಶ್ರ ಸರ್ಕಾರದಲ್ಲಿ ವ್ಯತ್ಯಾಸಗಳಿರುವುದು ನಿಜ'
ಸಮ್ಮಿಶ್ರ ಸರ್ಕಾರದಲ್ಲಿ ಕೆಲವು ವ್ಯತ್ಯಾಸಗಳಿರುವುದು ನಿಜ, ಆದರೆ ಕಾರ್ಯಕರ್ತರು, ಮುಖಂಡರು ಅದನ್ನೆಲ್ಲಾ ಮರೆತು ಮುಂದುವರೆಯಬೇಕು, ಕೆಲವು ಕಾರ್ಯಕರ್ತರು ನಮ್ಮ ಬಳಿ ಬಂದು ಸಮಸ್ಯೆ ಹೇಳಿಕೊಳ್ಳುತ್ತಾರೆ. ಇದಕ್ಕೆ ಅಂತ್ಯ ಹಾಡುವಂತೆ ಕುಮಾರಸ್ವಾಮಿ ಅವರಿಗೆ ಕೇಳಿದ್ದೇನೆ ಎಂದು ಖರ್ಗೆ ಹೇಳಿದರು.

ರೋಶನ್ ಬೇಗ್ ಅಮಾನತ್ತಿನ ಬಗ್ಗೆ ಹೇಳಿಕೆ
ರೋಶನ್ ಬೇಗ್ ಅಮಾನತ್ತಿನ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಅಮಾನತ್ತಿನ ಬಗ್ಗೆ ಸಂಬಂಧಪಟ್ಟವರು ಪ್ರತಿಕ್ರಿಯೆ ಕೊಟ್ಟಿದ್ದಾರೆ, ಯಾರೇ ಆದರೂ ಪಕ್ಷದ ವಿರುದ್ಧ ಮಾತನಾಡಬಾರದು, ಮಾಧ್ಯಮಗಳ ಮುಂದೆ ಹೋದರೆ ಪಕ್ಷಕ್ಕೆ ಧಕ್ಕೆ ಆಗುತ್ತದೆ ಎಂದು ಖರ್ಗೆ ಹೇಳಿದರು.

ಎಲ್ಲ ನಾಯಕರಿಗೂ ನೋವು ಇರುತ್ತೆ: ಖರ್ಗೆ
ಮುಂದುವರೆದು, ಎಲ್ಲ ನಾಯಕರಿಗೆ ನೋವು ಇದ್ದೇ ಇರುತ್ತದೆ, ಆದರೆ ಪಕ್ಷದ ವಿರುದ್ಧ ಹೋಗುವುದು ತಪ್ಪು, ಯಾರೇ ಆಗಲಿ ಎಐಸಿಸಿ ನಾಯಕತ್ವದ ವಿರುದ್ಧವಾಗಲಿ, ಪಕ್ಷದ ವಿರುದ್ಧವಾಗಲಿ ಹೋಗಬಾರದು, ಅದು ಶಿಸ್ತಲ್ಲ ಎಂದು ಖರ್ಗೆ ಅವರು ಹೇಳಿದರು.

'ಖರ್ಗೆ ಸಿಎಂ ಆಗಬೇಕಿತ್ತು ಎಂಬುದು ಮುಗಿದ ಅಧ್ಯಾಯ'
ಖರ್ಗೆ ಅವರು ಸಿಎಂ ಆಗಬೇಕಿತ್ತು ಎಂಬ ಮಾತು ಹರಿದಾಡುತ್ತಿದೆಯಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಅದೆಲ್ಲಾ ಮುಗಿದು ಹೋದ ಮಾತು, ಈಗ ಆ ಮಾತೆಲ್ಲಾ ಬೇಡ ಎಂದು ನುಣುಚಿಕೊಂಡರು.

ಸಿದ್ದರಾಮಯ್ಯ ಹೈಕಮಾಂಡ್ ಭೇಟಿ ಬಗ್ಗೆ ಗೊತ್ತಿಲ್ಲ
ಸಿದ್ದರಾಮಯ್ಯ ಅವರ ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ನಾನು ಮುಂಬೈಗೆ ಹೋಗಿದ್ದೆ, ಅಲ್ಲಿ ಪಕ್ಷದಲ್ಲಿ ಕೆಲವು ಬದಲಾವಣೆಗಳು ಮಾಡಬೇಕಿತ್ತು, ಹಾಗಾಗಿ ಹೋಗಿದ್ದೆ ಸಿದ್ದರಾಮಯ್ಯ ಹೈಕಮಾಂಡ್ ಭೇಟಿ ಮಾಡಿರುವುದು ನನಗೆ ಗೊತ್ತಿಲ್ಲ. ಯಾವ ಕಾರಣಕ್ಕೆ ಭೇಟಿ ಆಗಿದ್ದಾರೆ ಎಂಬುದೂ ಗೊತ್ತಿಲ್ಲ ಎಂದು ಅವರು ಹೇಳಿದರು.












Click it and Unblock the Notifications