ದೇವೇಗೌಡರ ಮೇಲೆ ಮುನಿಸು ಇಲ್ಲ ಎಂದ ಮಧು ಬಂಗಾರಪ್ಪ
ಬೆಂಗಳೂರು, ಜನವರಿ 12: ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿಜೆಪಿಯ ಬಿ.ವೈ. ರಾಘವೇಂದ್ರ ವಿರುದ್ಧ ಸೋಲು ಅನುಭವಿಸಿದ್ದ ಮಧು ಬಂಗಾರಪ್ಪ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ವಿರುದ್ಧ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.
ಉಪ ಚುನಾವಣೆಯ ಸೋಲಿನ ಬಳಿಕ ಪಕ್ಷದ ವರಿಷ್ಠರು ನೀಡಿರುವ ಹೇಳಿಕೆಗಳ ಬಗ್ಗೆ ಮಧು ಬಂಗಾರಪ್ಪ ಅವರಲ್ಲಿ ಅಸಮಾಧಾನ ಮೂಡಿದೆ. ಈ ಕಾರಣದಿಂದಾಗಿ ಪಕ್ಷದ ಸಭೆ ಹಾಗೂ ಇನ್ನಿತರೆ ಚಟುವಟಿಕೆಗಳಲ್ಲಿ ಭಾಗವಹಿಸದೆ ದೂರವೇ ಉಳಿದಿದ್ದಾರೆ ಎಂದು ಹೇಳಲಾಗಿದೆ.
ಚುನಾವಣೆಯಲ್ಲಿ ಸೋತ ಬಳಿಕವೂ ಮಧು ಬಂಗಾರಪ್ಪ ಅವರನ್ನು ವಿಧಾನಪರಿಷತ್ ಸದಸ್ಯತ್ವ ಕೊಡಿಸುವ ಮೂಲಕ ಸಂಪುಟಕ್ಕೆ ಅಥವಾ ನಿಗಮ ಮಂಡಳಿ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಈ ಬಗ್ಗೆ ಯಾವುದೇ ಚರ್ಚೆಗಳಾಗುತ್ತಿಲ್ಲ ಎಂದೂ ಮಧು ಬೇಸರಗೊಂಡಿದ್ದರು ಎನ್ನಲಾಗಿದೆ.

ಆದರೆ, ತಮಗೆ ದೇವೇಗೌಡರ ಮೇಲೆ ಯಾವುದೇ ಸಿಟ್ಟಿಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಎರಡು ಬಾರಿ ಸೊರಬದಲ್ಲಿ ಹಾಗೂ ಉಪ ಚುನಾವಣೆಯಲ್ಲಿ ಸೋತಿದ್ದೇನೆ. ಸಮ್ಮಿಶ್ರ ಸರ್ಕಾರದ ನಿರ್ಧಾರದಂತೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಇದಕ್ಕೆ ಒಪ್ಪದಿದ್ದರೆ ತಪ್ಪಾಗುತ್ತಿತ್ತು.
ಜಿಡಿಎಲ್ಪಿ ಸಭೆಗೆ ನನ್ನನ್ನು ಕರೆದಿದ್ದರು. ಆದರೆ ಹೋಗಲು ಸಾಧ್ಯವಾಗಿಲ್ಲ. ನನಗೆ ಯಾರ ಮೇಲೆಯೂ ಅಸಮಾಧಾನವಿಲ್ಲ. ಜವಾಬ್ದಾರಿ ಕೊಡುವುದನ್ನು ಅವರು ತೀರ್ಮಾನ ಮಾಡುತ್ತಾರೆ. ಸಣ್ಣಪುಟ್ಟ ಸಮಸ್ಯೆ ಇದ್ದರೂ ವರಿಷ್ಠರ ಬಳಿ ಬಗೆಹರಿಸಿಕೊಳ್ಳುತ್ತೇವೆ ಎಂದು ಮಧು ತಿಳಿಸಿದರು.
ಎಂಎಲ್ ಸಿ ಸ್ಥಾನ ಬೇಡ ಎಂದು ಹಿಂದಿನ ಬಾಗಿಲಿನಿಂದ ಹೋಗಿಲ್ಲ. ವಿಧಾನ ಪರಿಷತ್ ಸ್ಥಾನ ಕೊಡಿಸಲು ಸ್ವತಃ ಕುಮಾರಸ್ವಾಮಿ ಆಸಕ್ತಿ ತೋರಿಸಿದ್ದರು. ಆದರೆ ನಾನೇ ನಿರಾಕರಿಸಿದ್ದೆ. ಪಕ್ಷದಲ್ಲಿ ಮುಂಚೂಣಿಯಲ್ಲಿರುವುದಕ್ಕೆ ನಾನು ಬಯಸುತ್ತೇನೆ. ಯಾವ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ ಎಂದರು.












Click it and Unblock the Notifications