ಉದ್ಯಾನ, ದೇವಸ್ಥಾನಗಳಲ್ಲಿಲ್ಲ ಇಂದಿರಾ ಕ್ಯಾಂಟೀನ್ : ಕೆಜೆ ಜಾರ್ಜ್
ಬೆಂಗಳೂರು, ಆಗಸ್ಟ್ 2: ದೇವಸ್ಥಾನದ ಆವರಣದಲ್ಲಿ, ಉದ್ಯಾನಗಳಲ್ಲಿ ಹಾಗೂ ಗ್ರಂಥಾಲಯಗಳನ್ನು ಕೆಡವಿ ಕಟ್ಟುತ್ತಿರುವ 'ಇಂದಿರಾ ಕ್ಯಾಂಟೀನ್' ವಿವಾದಕ್ಕೆ ಗುರಿಯಾಗಿದೆ.
ಇದರಿಂದ ಕೊನೆಗೂ ಎಚ್ಚೆತ್ತಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್, "ದೇವಸ್ಥಾನದ ಆವರಣ, ಉದ್ಯಾನ ಮತ್ತು ಆಟದ ಮೈದಾನಗಳಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟದಂತೆ ಸೂಚನೆ ನೀಡಲಾಗಿದೆ," ಎಂದು ಹೇಳಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.
"ದೇವಸ್ಥಾನ, ಉದ್ಯಾನ ಮತ್ತು ಆಟದ ಮೈದಾನಗಳನ್ನು ಕ್ಯಾಂಟೀನ್ ಉದ್ದೇಶಕ್ಕೆ ಬಳಸಬಾರದು ಎಂದು ಈಗಾಗಲೇ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಒಂದೊಮ್ಮೆ ಕ್ಯಾಂಟೀನ್ ನಿರ್ಮಾಣಕ್ಕೆ ಸೂಕ್ತ ಜಾಗ ಸಿಗದೇ ಇದ್ದರೆ ಖಾಸಗಿಯವರಿಂದ ಪಡೆಯಲು ಸಿಎಂ ಸೂಚಿಸಿದ್ದಾರೆ," ಎಂದು ಅವರು ಹೇಳಿದ್ದಾರೆ.
ಇನ್ನು ಕೆಳ ಹಂತದ ಅಧಿಕಾರಿಗಳು ತಪ್ಪು ಮಾಡುತ್ತಿದ್ದಾರೆ. ಹೀಗಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣದಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದಿರುವ ಜಾರ್ಜ್, 'ಇಂದಿರಾ ಕ್ಯಾಂಟೀನ್ ಯೋಜನೆಯ ಹೆಸರು ಕೆಡಿಸಲು ಪಟ್ಟಭದ್ರ ಹಿತಾಸಕ್ತಿಗಳು ಕೆಲ ಮಾಡುತ್ತಿವೆ," ಎಂದು ದೂರಿದ್ದಾರೆ.
ಇನ್ನು ಇದೇ ಆಗಸ್ಟ್ 15ರಂದು ಬೆಂಗಳೂರಿನ 125 ವಾರ್ಡ್ ಗಳಲ್ಲಿ ಮಿತದರದಲ್ಲಿ ಊಟ ಮತ್ತು ಉಪಹಾರ ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ 'ಇಂದಿರಾ ಕ್ಯಾಂಟೀನ್' ಆರಂಭವಾಗಲಿದೆ.












Click it and Unblock the Notifications