ಖಾಸಗಿ ಬಸ್ಗಳು ಬೆಂಗಳೂರು ಪ್ರವೇಶಿಸುವಂತಿಲ್ಲ?
ಬೆಂಗಳೂರು, ಜುಲೈ 05 : ಖಾಸಗಿ ಬಸ್ಸುಗಳು ಇನ್ನು ಮುಂದೆ ಬೆಂಗಳೂರು ನಗರ ಪ್ರವೇಶಿಸುವಂತಿಲ್ಲ. ಕರ್ನಾಟಕ ಮತ್ತು ಹೊರ ರಾಜ್ಯದ ಖಾಸಗಿ ಬಸ್ಗಳು ನಗರ ಪ್ರವೇಶಿಸದಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಲು ಮುಂದಾಗಿದೆ.
ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯವನ್ನು ತಡೆಗಟ್ಟಲು ಖಾಸಗಿ ಬಸ್ ಸಂಚಾರ ನಿರ್ಬಂಧಿಸಲು ಚಿಂತನೆ ನಡೆಸಲಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. [ಜುಲೈ 18ರಿಂದ ಸರ್ಕಾರಿ ಬಸ್ ಸಂಚಾರವಿಲ್ಲ?]

ಸಾರಿಗೆ ಇಲಾಖೆಯ ಉದ್ದೇಶಿತ ಪ್ರಸ್ತಾವನೆಯಂತೆ ಕರ್ನಾಟಕ ಮತ್ತು ಹೊರ ರಾಜ್ಯದ ಬಸ್ಗಳು ನಗರದ ಹೊರ ಭಾಗದ ನಿಲ್ದಾಣದಲ್ಲಿಯೇ ಪ್ರಯಾಣಿಕರನ್ನು ಇಳಿಸಬೇಕು. ಯಾವುದೇ ಬಸ್ಸುಗಳು ನಗರವನ್ನು ಪ್ರವೇಶಿಸುವಂತಿಲ್ಲ. ಇನ್ನೊಂದು ಸುತ್ತಿನ ಸಭೆಯ ಬಳಿಕ ಈ ಬಗ್ಗೆ ಆದೇಶ ಹೊರಬೀಳುವ ಸಾಧ್ಯತೆ ಇದೆ. [ಐಟಿ ಉದ್ಯೋಗಿಗಳ ಸಂಚಾರಕ್ಕೆ KSRTC ಬಸ್!]
ಮಂಗಳೂರು ಕಡೆಯಿಂದ ಬರುವ ಖಾಸಗಿ ಬಸ್ಸುಗಳು ಪೀಣ್ಯ ಬಸವೇಶ್ವರ ನಿಲ್ದಾಣದಲ್ಲಿ, ಮೈಸೂರು ಕಡೆಯಿಂದ ಬರುವ ಬಸ್ಸುಗಳು ಕೆಂಗೇರಿ ಸ್ಯಾಟಲೈಟ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಬೇಕು ಎಂದು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಈ ಪ್ರಸ್ತಾವನೆ ಬಗ್ಗೆ ಬೆಂಗಳೂರು ನಗರ ಸಂಚಾರಿ ಪೊಲೀಸರ ಜೊತೆ ಅಂತಿಮ ಮಾತುಕತೆ ನಡೆಯಬೇಕಾಗಿದೆ. [ಪೀಣ್ಯದ ಬಸವೇಶ್ವರ ನಿಲ್ದಾಣ ಸ್ಥಳಾಂತರ]
ಮಾಲೀಕರ ವಿರೋಧ : ಖಾಸಗಿ ಬಸ್ ಮಾಲೀಕರು ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಿಂದ ಹೊರಗೆ ಪ್ರಯಾಣಿಕರನ್ನು ಇಳಿಸಲು ಅವರು ಒಪ್ಪಿಗೆ ನೀಡಿಲ್ಲ. ಅಲ್ಲಿಂದ ಪ್ರಯಾಣಿಕರು ನಗರ ಪ್ರವೇಶಿಸಲು ಯಾವ ವ್ಯವಸ್ಥೆ ಮಾಡುತ್ತಾರೆ? ಎಂದು ಮಾಲೀಕರು ಪ್ರಶ್ನಿಸುತ್ತಿದ್ದಾರೆ. [ಖಾಸಗಿ ಬಸ್ ಗಳಿಂದ ಅವಳಿ ನಗರದ ಜನತೆಗೆ ಉಪದ್ರವ]
ಹಿಂದೆ ನಗರದಲ್ಲಿ ಸರ್ಕಾರಿ ಬಸ್ ದಟ್ಟಣೆ ತಪ್ಪಿಸಲು ಕೆಎಸ್ಆರ್ಟಿಸಿ ಉತ್ತರ ಕರ್ನಾಟಕ ಭಾಗದ ಬಸ್ಸುಗಳನ್ನು ಪೀಣ್ಯ ನಿಲ್ದಾಣಕ್ಕೆ ಸ್ಥಳಾಂತರ ಮಾಡಿತ್ತು. ಆದರೆ, ಈ ಯೋಜನೆ ಮೂರು ತಿಂಗಳಿನಲ್ಲೇ ವಿಫಲಗೊಂಡು ಸರ್ಕಾರಿ ಬಸ್ಸುಗಳು ಪುನಃ ಮೆಜೆಸ್ಟಿಕ್ಗೆ ಬಂದು ನಿಂತಿವೆ.











Click it and Unblock the Notifications