ಬೆಂಗಳೂರು ಕೆರೆಗಳ ವರದಿ: ಸರ್ಕಾರಕ್ಕೆ ಮೂರು ವಾರಗಳ ಗಡುವು
ಬೆಂಗಳೂರು, ಜನವರಿ30 : ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳ ಪುನಶ್ಚೇತನಕ್ಕೆ ಬೇಕಾದ ಕ್ರಿಯಾ ಯೋಜನೆಯನ್ನು ಮೂರು ವಾರದೊಳಗೆ ಸಿದ್ಧಪಡಿಸಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ಕೆರೆಗಳ ಜಲಾನಯನ ಪ್ರದೇಶದ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಒತ್ತುವರಿಯನ್ನು ತೆರವುಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ವಾಸಿಸುವ ಬಡಾವಣೆಗಳು ವಾಣಿಜ್ಯ ಸಂಕೀರ್ಣಗಳಿಂದ ಮಾತ್ರವಲ್ಲದೆ, ಕೈಗಾರಿಕೆಗಳ ತ್ಯಾಜ್ಯವೂ ಕೆರೆ ಸೇರದಂತೆಯೂ ಎಚ್ಚರಿಕೆ ವಹಿಸಬೇಕು. ಈ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸುವ ಮೂಲಕ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿದ ಪೀಠವು, ಮುಂದಿನ ವಿಚಾರಣಯನ್ನು ಫೆ.28 ಕ್ಕೆ ಮುಂದೂಡಿದೆ.
ಬೆಳ್ಳಂದೂರು ಕೆರೆಯಲ್ಲಿ ಇತ್ತೀಚೆಗೆ ಮತ್ತೆ ಬೆಂಕಿ ಕಾಣಿಸಿಕೊಂಡ ಕಾರಣ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ ನ್ಯಾಯಮೂರ್ತಿ ಯು.ಡಿ. ಸಾಳ್ವಿ ನೇತೃತ್ವದ ಹಸಿರು ಪೀಠ, ಒಳಚರಂಡಿ ಸಂಸ್ಕರಣ ಘಟಕ (ಎಸ್ಟಿಪಿ) ಅಳವಡಿಸದೆ ಬೆಳ್ಳಂದೂರು ಕೆರೆಗೆ ತ್ಯಾಜ್ಯ ಹರಿಬಿಡುತ್ತಿರುವ 99 ಅಪಾರ್ಟ್ ಮೆಂಟ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.

ಈ ಮೂರೂ ಕೆರೆಗಳು ಎದುರಿಸುತ್ತಿರುವ ಬೆಂಕಿ ಮತ್ತಿತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ ಸಿ) ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ, ಖುದ್ದು ಪರಿಶೀಲನೆಗೆ ಸೂಚಿಸಬೇಕಲ್ಲದೆ, ಸಮಿತಿ ನೀಡುವ ಶಿಫಾರಸುಗಳನ್ನು ಚಾಚೂತಪ್ಪದೇ ಪಾಲಿಸಬೇಕು ಎಂದು, ಎರಡು ಗಂಟೆಗಳ ಸುದೀರ್ಘ ಅವಧಿಯ ವಿಚಾರಣೆ ನಂತರ ನ್ಯಾಯಮೂರ್ತಿ ಸಾಳ್ವಿ ಹಾಗೂ ತಜ್ಞ ಸದಸ್ಯ ನೆಗ್ಲಿನ್ ನಂದಾ ಅವರು ನಿರ್ದೇಶನ ನೀಡಿದರು.
ಕೆರೆಯ ಉತ್ತರ ಭಾಗದಲ್ಲಿ, ಅಂದಾಜು ಒಂದು ಕಿ.ಮೀ ವ್ಯಾಪ್ತಿಯಲ್ಲಿ ಅಂಬೇಡ್ಕರ್ ನಗರಕ್ಕಾಗಿ ಕೆರೆಯನ್ನು ಒತ್ತುವರಿ ಮಾಡಿರುವ ಮಾಹಿತಿ ಲಭ್ಯವಾಗಿದೆ.ಕೆರೆಯ ಆಸುಪಾಸಿನಲ್ಲಿ 746 ಅಪಾರ್ಟ್ ಮೆಂಟ್ ಗಳ ಪರಿಶೀಲನೆ ನಡೆಸಲಾಗಿದೆ. ಅವುಗಳ ಪೈಕಿ 256 ಅಪಾರ್ಟ್ ಎಂಟ್ ಗಳ ನಿವಾಸಿಗಳು ಹೊರ ಹಾಕುವ ತ್ಯಾಜ್ಯ ನೀರನ್ನು ಒಳಚರಂಡಿ ಮಂಡಳಿಯೇ ನಿರ್ವಹಣೆ ಮಾಡುತ್ತಿದೆ. ಮಿಕ್ಕಂತೆ 99ಅಪಾರ್ಟ್ ಮೆಂಟ್ ಗಳು ಎಸ್ ಟಿ ಪಿ ಅಳವಡಿಸದೇ ಇರುವುದು ಕಂಡುಬಂದಿದೆ.












Click it and Unblock the Notifications