ಸಬ್ ಅರ್ಬನ್ ರೈಲು ಯೋಜನೆ ಬದಲಾವಣೆ, 62 ನಿಲ್ದಾಣ
ಬೆಂಗಳೂರು, ಜುಲೈ 24 : ಬೆಂಗಳೂರು ನಗರದಲ್ಲಿ ಸಬ್ ಅರ್ಬನ್ ರೈಲು ಯೋಜನೆ ಜಾರಿಗೊಳಿಸಲು ಹೊಸ ಡಿಪಿಆರ್ ಸಿದ್ಧಗೊಳಿಸಲಾಗಿದೆ. ಯೋಜನೆಯ ವೆಚ್ಚವನ್ನು ಕಡಿತಗೊಳಿಸಲಾಗಿದ್ದು, ಕೆಲವು ನಿಲ್ದಾಣಗಳಿಗೂ ಕತ್ತರಿ ಹಾಕಲಾಗಿದೆ.
ಬೆಂಗಳೂರು ರೈಲು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ (ಬಿ-ರೈಡ್) ಪ್ರಧಾನಿ ಕಚೇರಿಯ ಸೂಚನೆಯಂತೆ ಹೊಸ ವಿಸ್ರ್ತೃತ ಯೋಜನಾ ವರದಿಯನ್ನು ತಯಾರು ಮಾಡಿದೆ. ಈ ವರದಿ ಪ್ರಕಾರ 148 ಕಿ.ಮೀ. ಉದ್ದ ಮಾರ್ಗಕ್ಕೆ 5000 ಕೋಟಿ ವೆಚ್ಚವಾಗಲಿದೆ.
ಸಬ್ ಅರ್ಬನ್ ರೈಲು ಯೋಜನೆ ನಿಲ್ದಾಣಗಳ ಸಂಖ್ಯೆಯನ್ನು 86 ರಿಂದ 62ಕ್ಕೆ ಕಡಿತಗೊಳಿಸಲಾಗಿದೆ. 12.33 ಕಿ.ಮೀ. ಮಾರ್ಗ ಕಡಿತವಾಗಿದೆ. ಪ್ರಧಾನಮಂತ್ರಿಗಳ ಕಾರ್ಯಾಲಯದ ಸೂಚನೆ ಅನ್ವಯ ಯೋಜನೆಯಲ್ಲಿ ಬದಲಾವಣೆ ಮಾಡಿ ಹೊಸ ಡಿಪಿಆರ್ ರಚಿಸಲಾಗಿದೆ.

ನೆಲಮಂಗಲವನ್ನು ಸಂಪರ್ಕಿಸುವ ಹಳೆಯ ಯೋಜನಾ ವರದಿಯನ್ನು ಬದಲಾವಣೆ ಮಾಡಲಾಗಿದ್ದು ಚಿಕ್ಕಬಣಾವರದ ತನಕ ಮಾತ್ರ ಯೋಜನೆ ಇರಲಿದೆ. ನಗರದಿಂದ ಐದು ಕಾರಿಡಾರ್ ಮೂಲಕ ಹೊರವಲಯವನ್ನು ಸಂಪರ್ಕಿಸಲಾಗುತ್ತದೆ. ನಗರದೊಳಗೆ ಬರುವ ನಿಲ್ದಾಣಗಳನ್ನು ಯೋಜನೆಯಿಂದ ಕೈ ಬಿಡಲಾಗಿದೆ.
ಹೊಸ ವರದಿಯ ಅಂಶಗಳು : ಹೊಸ ಡಿಪಿಆರ್ನಂತೆ ಕೆಎಸ್ಆರ್-ದೇವನಹಳ್ಳಿ, ಬೈಯಪ್ಪನಹಳ್ಳಿ-ಚಿಕ್ಕಬಣಾವರ, ಕೆಂಗೇರಿ-ಕಂಟೋನ್ಮೆಂಟ್ , ಕಂಟೋನ್ಮೆಂಟ್-ವೈಟ್ಫೀಲ್ಡ್, ಹೀಲಲಿಗೆ-ರಾಜನಕುಂಟೆ ಸಂಪರ್ಕಿಸಲಾಗುತ್ತದೆ.
ವಿಮಾನ ನಿಲ್ದಾಣಕ್ಕಿಲ್ಲ ಸಂಪರ್ಕ : ಕೆಎಸ್ಆರ್ನಿಂದ ಕೆಂಪೇಗೌಡ ವಿಮಾನ ನಿಲ್ದಾಣ ಸಂಪರ್ಕಿಸುವ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ವರದಿ ಪ್ರಕಾರ ದೇವನಹಳ್ಳಿ ತನಕ ಮಾತ್ರ ಸಬ್ ಅರ್ಬನ್ ಯೋಜನೆ ಜಾರಿಗೊಳ್ಳಲಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ರೈಲು ಸಂಪರ್ಕಕ್ಕೆ ಯೋಜನೆ ತಯಾರಿಸಲಾಗಿದೆ. ಆದ್ದರಿಂದ, ಸಬ್ ಅರ್ಬನ್ ರೈಲು ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ.












Click it and Unblock the Notifications