ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ
ಬೆಂಗಳೂರು, ಡಿಸೆಂಬರ್ 16; ಕಳೆದ ಒಂದು ವರ್ಷದಲ್ಲಿ ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. 2019-20ರಲ್ಲಿ ಬಿಎಂಆರ್ಸಿಎಲ್ ಪ್ರತಿದಿನ 15 ಲಕ್ಷ ಜನರು ಪ್ರಯಾಣಿಸಲಿದ್ದಾರೆ ಎಂದು ಅಂದಾಜಿಸಿತ್ತು.
ಪೂರ್ವ-ಪಶ್ಚಿಮ ಕಾರಿಡಾರ್ ಮತ್ತು ಉತ್ತರ-ದಕ್ಷಿಣ ಕಾರಿಡಾರ್ ಸೇರಿ ನಮ್ಮ ಮೆಟ್ರೋ ರೈಲು 42 ಕಿ. ಮೀ. ಸಂಚಾರ ನಡೆಸುವಾಗ ಪ್ರತಿದಿನ ಸುಮಾರು 4 ಲಕ್ಷ ಜನರು ಸಂಚಾರ ನಡೆಸುತ್ತಿದ್ದರು. ಈಗ ಮಾರ್ಗ 56 ಕಿ. ಮೀ.ಗೆ ವಿಸ್ತರಣೆಯಾಗಿದ್ದು, ಪ್ರತಿದಿನ ಸಂಚಾರ ನಡೆಸುವ ಜನರ ಸಂಖ್ಯೆ 3 ಲಕ್ಷದ ಗಡಿ ದಾಟುತ್ತಿಲ್ಲ.
ಬಿಎಂಆರ್ಸಿಎಲ್ 2019-20ರಲ್ಲಿ ಪ್ರತಿದಿನ 15 ಲಕ್ಷ ಜನರು ಸಂಚಾರ ನಡೆಸಲಿದ್ದಾರೆ ಎಂದು ಅಂದಾಜಿಸಿತ್ತು. ಆದರೆ ಗುರಿಯ ಶೇ 27ರಷ್ಟು ಜನರು ಮಾತ್ರ ಸಂಚಾರ ನಡೆಸಿದ್ದಾರೆ. ಕೋವಿಡ್ ಪರಿಸ್ಥಿತಿ ಬಳಿಕ ಮತ್ತೆ ರೈಲು ಸಂಚಾರ ಆರಂಭವಾದರೂ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ.

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಮನೆಯಿಂದಲೇ ಕೆಲಸ ಮಾಡಲು ಕಂಪನಿಗಳು ಸೂಚನೆ ನೀಡಿದವು. ಈಗ ಕೋವಿಡ್ ಪರಿಸ್ಥಿತಿ ಬಳಿಕ ವಿವಿಧ ಉದ್ಯಮಗಳು ಚೇತರಿಸಿಕೊಳ್ಳುತ್ತಿವೆ. ಶಾಲಾ-ಕಾಲೇಜುಗಳು ಆರಂಭವಾಗಿವೆ. ಹಲವು ಕಚೇರಿಗಳು ಬಾಗಿಲು ತೆರೆದಿವೆ. ಆದರ ಹಲವಾರು ಕಂಪನಿಗಳು ಇನ್ನೂ ಆರಂಭವಾಗಿಲ್ಲ. ಆದ್ದರಿಂದ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಐಎಪಿಟಿ ದೇಶದ ವಿವಿಧ ನಗರದಲ್ಲಿ ಮೆಟ್ರೋದಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಕುರಿತು ಸಮೀಕ್ಷೆ ನಡೆಸಿದೆ. 2019-20ರಲ್ಲಿ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋದಲ್ಲಿ ಪ್ರತಿ ಕಿ. ಮೀ.ಗೆ ಸಂಚಾರ ನಡೆಸಿದ ಜನರ ಸಂಖ್ಯೆ 9,456. ಮುಂಬೈನಲ್ಲಿ 40,650, ದೆಹಲಿಯಲ್ಲಿ 14,653, ಚೆನ್ನೈ ಮೆಟ್ರೋದಲ್ಲಿ 2,553 ಜನರು ಸಂಚಾರ ನಡೆಸಿದ್ದಾರೆ.
ಕಠಿಣ ನಿಯಮಗಳು; ಲಾಕ್ಡೌನ್ ಬಳಿಕ ನಮ್ಮ ಮೆಟ್ರೋ ಸಂಚಾರ ಮತ್ತೆ ಆರಂಭವಾರೂ ಬಿಎಂಆರ್ಸಿಎಲ್ ಕಠಿಣ ನಿಯಮಗಳನ್ನು ಜಾರಿಗೆ ತಂದಿತು. ಸ್ಮಾರ್ಟ್ ಕಾರ್ಡ್ ಇದ್ದವರು ಮಾತ್ರ ಸಂಚಾರ ನಡೆಸಬೇಕು ಎಂದು ಹೇಳಿತು. ಇದರಿಂದಾಗಿ ಟೋಕನ್ ಪಡೆದು ಪ್ರಯಾಣಿಸುತ್ತಿದ್ದ ಜನರು ಮೆಟ್ರೋ ಬಳಕೆ ಕಡಿಮೆ ಮಾಡಿದರು.
ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಕೊರತೆ, ಪಾರ್ಕಿಂಗ್ ಶುಲ್ಕ, ಸ್ಮಾರ್ಟ್ ಕಾರ್ಡ್ ದರ ಮುಂತಾದ ಕಾರಣಗಳಿಂದ ನಮ್ಮ ಮೆಟ್ರೋಗೆ ಪ್ರಯಾಣಿಕರ ಕೊರತೆ ಎದುರಾಯಿತು. ಪೆಟ್ರೋಲ್ ಮತ್ತು ಡೀಸಲ್ ಬೆಲೆಯಲ್ಲಿ ಏರಿಕೆಯಾದಾಗಲೂ ಜನರು ಮೆಟ್ರೋ ರೈಲು ಹತ್ತಲಿಲ್ಲ.
ಏರಿಕೆಯಾಗುತ್ತಿದೆ ವೆಚ್ಚ; ಬಿಎಂಆರ್ಸಿಎಲ್ ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಮೆಟ್ರೋ ಕಾಮಗಾರಿ ಕೈಗೊಳ್ಳುತ್ತಿದೆ. ಆದರೆ ಭೂ ಸ್ವಾಧೀನ ಸೇರಿದಂತೆ ಕಾಮಗಾರಿಗಳಿಗೆ ವೆಚ್ಚ ಅಧಿಕವಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ಕೊರತೆ ಹಿನ್ನಲೆಯಲ್ಲಿ ಆರ್ಥಿಕ ನಷ್ಟವೂ ಉಂಟಾಗುತ್ತಿದೆ.
ನಗರದಲ್ಲಿ 132.63 ಕಿ. ಮೀ.ಗಳ 91 ನಿಲ್ದಾಣಗಳ ವಿವಿಧ ಕಾಮಗಾರಿ ನಡೆಯುತ್ತಿದೆ. 2024ಕ್ಕೆ ಎಲ್ಲಾ ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರಿ ನೀಡಿದ್ದಾರೆ. ಆದರೆ ಕಾಮಗಾರಿಯ ವೇಗ ನೋಡಿದರೆ ಗುರಿಯನ್ನು ತಲುಪುದು ಅಸಾಧ್ಯವಾಗಿದೆ.
ಕೆಂಗೇರಿ-ಚಲ್ಲಘಟ್ಟ ಮಾರ್ಗ 2023ರ ಮಾರ್ಚ್ನಲ್ಲಿ ಪೂರ್ಣವಾಗಲಿದೆ. ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಮಾರ್ಗ 2022ರ ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ. ರಾಷ್ಟ್ರೀಯ ವಿದ್ಯಾಲಯ ರಸ್ತೆ- ಬೊಮ್ಮಸಂದ್ರ 2022ರ ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಗೊಟ್ಟಿಗೆರೆ-ನಾಗವಾರ ಮಾರ್ಗ ಮಾರ್ಚ್ 2025. ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ. ಆರ್. ಪುರಂ 2027ರ ಸೆಪ್ಟೆಂಬರ್ ಮತ್ತು ಕೆ. ಆರ್. ಪುರಂ-ಕೆಂಪೇಗೌಡ ಏರ್ ಪೋರ್ಟ್ ಮಾರ್ಗ 2027ರ ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications