Namma Metro Blue Line: ನಿಲ್ದಾಣಕ್ಕಾಗಿ 41 ಮರ ಕಡಿಯಲು ಹೈಕೋರ್ಟ್ ಗ್ರೀನ್ ಸಿಗ್ನಲ್
ಬೆಂಗಳೂರು, ಸೆಪ್ಟಂಬರ್ 05: ಬೆಂಗಳೂರು ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ಭರದಿಂದ ಸಾಗಿದೆ. ಸಿಲ್ಕ್ಬೋರ್ಡ್ನಿಂದ ಕೆಆರ್ ಪುರಂ ಮಾರ್ಗವಾಗಿ ದೇವನಹಳ್ಳಿ ಏರ್ಪೋರ್ಟ್ ವರೆಗೆ ಮಾರ್ಗ ನಿರ್ಮಾಗೊಳ್ಳುತ್ತಿದೆ. ಇದೀಗ ಈ ಮಾರ್ಗದಲ್ಲಿ ನಿಲ್ದಾಣ ನಿರ್ಮಾಣಕ್ಕೆ ಉಂಟಾಗಿದ್ದ ಅಡಚಣೆಯನ್ನು ಹೈಕೋರ್ಟ್ ನಿವಾರಣೆ ಮಾಡಿ ಆದೇಶ ಹೊರಡಿಸಿದೆ ಎಂದು 'ಕನ್ನಡಪ್ರಭ ಪತ್ರಿಕೆ' ವರದಿ ಮಾಡಿದೆ.
ಬೆಂಗಳೂರಿನ ಮಟ್ಟಿಗೆ ವಿವಿಧ ಮೆಟ್ರೋ ಮಾರ್ಗಗಳಂತೆ ಈ ಎರಡನೇ ಹಂತದ ಯೋಜನೆ ವ್ಯಾಪ್ತಿಯಲ್ಲಿ ತಲೆ ಎತ್ತಲಿರುವ ಈ ನೀಲಿ ಮಾರ್ಗವು ಪ್ರಮುಖವಾಗಿದೆ. ಈ ಮಾರ್ಗದಲ್ಲಿ ಸಿಲ್ಕ್ ಬೋರ್ಡ್ನಿಂದ ಆಗರ ಕೆರೆ, ಇಬ್ಬಲೂರು, ಎಚ್ಆರ್ ಲೇಔಟ್ ಹೀಗೆ 30ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.

ಈ ಪೈಕಿ ಇಬ್ಬಲೂರು ಮತ್ತು ಎಚ್ಎಸ್ಆರ್ ಬಡಾವಣೆ ಮೆಟ್ರೋ ರೈಲು ನಿಲ್ದಾಣ ನಿರ್ಮಾಣಕ್ಕಾಗಿ 41ಮರಗಳನ್ನು ಕತ್ತರಿಸಲು ಹಾಗೂ 20 ಮರಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಬಿಎಂಆರ್ಸಿಎಲ್ಗೆ ಹೈಕೋರ್ಟ್ ಒಪ್ಪಿಗೆ ನೀಡಿದೆ. ಈ ಮೂಲಕ ಅಭಿವೃದ್ಧಿ ಕಾಮಗಾರಿಗೆ ಎದುರಾಗಿದ್ದ ಸಮಸ್ಯೆ ನಿವಾರಣೆ ಆದಂತಾಗಿದೆ.
ಪಿಐಎಲ್ ಅರ್ಜಿ ವಿಚಾರಣೆ
ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕತ್ತರಿಸುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ದತ್ತಾತ್ರೇಯ ದೇವರ ಮತ್ತು ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ ಮರಗಳನ್ನು ಕತ್ತರಿಸಲು ಒಪ್ಪಿಗೆ ನೀಡಿ ಆದೇಶ ನೀಡಿತು.

ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪರ ವಕೀಲರು ವಾದ ಮಂಡನೆ ಮಾಡಿ, ಇಬ್ಬಲೂರು ಮತ್ತು ಎಚ್ಎಸ್ಆರ್ ಬಡಾವಣೆ ಮಾರ್ಗದಲ್ಲಿ ನಿಲ್ದಾಣ ನಿರ್ಮಿಸಬೇಕಾಗಿದೆ. ಇದಕ್ಕಾಗಿ ಮರಗಳ ಕಡಿಯುವುದು ಅನಿವಾರ್ಯವಾಗಿದ್ದು, 20 ಮರಗಳ ಸ್ಥಳಾಂತರ ಸಹ ಮಾಡಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಸರಂಕ್ಷಣಾ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದರು. ಈ ಸಂಬಂಧ ಅನುಮತಿ ನೀಡುವಂತೆ ಕೋರ್ಟ್ಗೆ ಅವರು ಮನವಿ ಮಾಡಿದರು.
ಬಿಎಂಆರ್ಸಿಎಲ್ಗೆ ಹೈಕೋರ್ಟ್ ಸೂಚನೆ ಏನು?
ವಾದ ವಿವಾದ ಆಲಿಸಿ ನ್ಯಾಯಪೀಠವು ಬಿಎಂಆರ್ಸಿಎಲ್ಗೆ ಅನುಮತಿ ನೀಡಿದೆ ಜೊತೆಗೆ ಒಂದು ಕತ್ತರಿಸುವ ಒಂದು ಮರಕ್ಕೆ ಪಯಾರ್ಯವಾಗಿ ಹತ್ತು ಮರಗಳನ್ನು ನೆಡುವಂತೆ ಹೈಕೋರ್ಟ್ ಹೇಳಿದೆ. ಅಲ್ಲದೇ ಸ್ಥಳಾಂತರಿಸಿದ ಮರಗಳ ಬಾಳಿಕೆ, ವಸ್ತುಸ್ಥಿತಿ ಬಗ್ಗೆ ಮೂರು ತಿಂಗಳಿಗೆ ಒಮ್ಮೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿ ಮರ ಕಡಿಯಲು ಒಪ್ಪಿಗೆ ನೀಡಿದೆ.
ಈ ವರ್ಷಾಂತ್ಯಕ್ಕೆ ಮಾರ್ಗ ಓಪನ್
ಸದ್ಯ ಬೆಂಗಳೂರಿನಲ್ಲಿ ಗುಲಾಬಿ ಮಾರ್ಗದಲ್ಲಿ ಸುರಂಗ ಕಾಮಗಾರಿ ನಡೆಯುತ್ತಿದೆ. ಈ ಕೆಲಸ ಇದೇ ವರ್ಷ ನೆವೆಂಬರ್ಗೆ ಪೂರ್ಣಗೊಳ್ಳಲಿದೆ. ಮುಂದಿನ ಒಂದು ವರ್ಷದಲ್ಲಿ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.
ಮೆಟ್ರೋ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ, ಸಿಗ್ನಲಿಂಗ್ ಟೆಸ್ಟ್ ಪೂರ್ಣಗೊಂಡಿದೆ. ಹೀಗಿದ್ದರೂ ಡ್ರೈವರ್ಲೆಸ್ ಮೆಟ್ರೋ ಆಗಿದ್ದರಿಂದ ಹಾಗೂ ಮೆಟ್ರೋ ಬೋಗಿ ಕೊರತೆ ಇರುವ ಕಾರಣ ವಾಣಿಜ್ಯ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಇದೇ ಡಿಸೆಂಬರ್ಗೆ ಸಾರ್ವಜನಿಕರಿಗೆ ಈ ಮಾರ್ಗ ಮುಕ್ತಗೊಳ್ಳಲಿದೆ.












Click it and Unblock the Notifications