ನಮ್ಮ ಮೆಟ್ರೋಗೆ ಮೂರು ವರ್ಷ: ಜನ ಏನಂತಾರೆ?
ಬೆಂಗಳೂರು, ಅ.21: ಎಲ್ಲೆಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ? ಯಾವ ಯಾವ ಸುರಂಗ ಮಾರ್ಗಗಳು ಪ್ರಗತಿಯಲ್ಲಿವೆ? ಯೋಜನಾ ವಚ್ಚ ಎಷ್ಟು? ಇನ್ನೆಷ್ಟು ಹಣ ಬೇಕಾಗುವುದು? ಸಂಪೂರ್ಣ ಮುಗಿಯಲು ಎಷ್ಟು ದಿನ ತಗುಲುತ್ತೆ? ಈ ಎಲ್ಲ ಮಾಹಿತಿಗಳನ್ನು ಒಂದಿಲ್ಲೊಂದು ಮಾಧ್ಯಮಗಳು ನಿಮಗೆ ನೀಡಿರುತ್ತವೆ. ಆದರೆ ಬೆಂಗಳೂರು ಮೆಟ್ರೋ ಬಗ್ಗೆ ಸಾಮಾನ್ಯ ಜನ ಏನಂತಾರೆ? ಪ್ರಯಾಣಿಕರ ಅಭಿಪ್ರಾಯವೇನು ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ನಮ್ಮದು.
ನಗರದ ಪ್ರತಿಷ್ಠಿತ ಮತ್ತು ಜನರಿಗೆ ಅತಿ ಇಷ್ಟವಾದ ಸಾರಿಗೆ ವ್ಯವಸ್ಥೆಯಾಗಿ ಬೆಳೆದಿರುವ ಮೆಟ್ರೋಗೆ ಮೂರು ವರ್ಷದ ಹರೆಯ. ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕಾಣಿಸಲು ಮೆಟ್ರೋ ಪರಿಹಾರ ಎಂಬ ಅರ್ಥದಲ್ಲಿ ಆರಂಭವಾದ ಯೋಜನೆಗೆ ಅಂದಿನ ಮುಖ್ಯಮಂತ್ರಿ ಸದಾನಂದ ಗೌಡ ಚಾಲನೆ ನೀಡಿದ್ದರು. ಯೋಜನೆ ಆರಂಭ ಶೂರತ್ವ ತೋರಿತ್ತೆ ವಿನಃ ಅನುಷ್ಠಾನ ನಿಗದಿತ ವೇಗದಲ್ಲಿ ಸಾಗುತ್ತಿಲ್ಲ ಎಂಬ ಮಾತು ಈಗ ಎಲ್ಲೆಡೆ ಕೇಳಿ ಬರುತ್ತಿದೆ.['ನಮ್ಮ ಮೆಟ್ರೋ ಬೇಗ ಕಟ್ರೋಗೆ' 3 ವರ್ಷ]

ಬೆಂಗಳೂರಿನ ಯಾವ ಮೂಲೆಗೆ ತೆರಳಿದೂ ಧೂಳು ಹೊಂಡ ಸಾಮಾನ್ಯ ಅದರಲ್ಲಿ ಮೆಟ್ರೋದ ಪಾಲೇ ದೊಡ್ಡದಿದೆ ಬಿಡಿ. ಸುರಂಗ ಮಾರ್ಗ ನಿರ್ಮಾಣವೂ ಸುಲಭ ಕೆಲಸವಲ್ಲ. ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ಮೆಟ್ರೋ ಮೇಲೆ ಜನರ ಆಪಾದನೆಗಳು, ವಿನಂತಿಗಳು ಸಾಕಷ್ಟು ಇವೆ. ಇಷ್ಟೆಲ್ಲಾ ಎಡರು ತೊಡರುಗಳ ನಡುವೆಯೂ ಮೆಟ್ರೋ ಕಾಮಗಾರಿಯನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುತ್ತಿರುವುದು ಒಂದು ಸಾಧನೆಯೇ ಸರಿ.
ಭೈಯಪ್ಪನಹಳ್ಳಿಯಿಂದ ಮಹಾತ್ಮಗಾಂಧಿ ರಸ್ತೆ ಸಂಚಾರ ಮತ್ತು ಸಂಪಿಗೆ ರಸ್ತೆಯಿಂದ ಪೀಣ್ಯ ಸದ್ಯ ಚಾಲ್ತಿಯಲ್ಲಿರುವ ಮಾರ್ಗಗಳು. ಪ್ರತಿದಿನ ಸುಮಾರು 45,000 ಪ್ರಯಾಣಿಕರನ್ನು ಮೆಟ್ರೋ ಹೊತ್ತೊಯ್ಯುತ್ತಿದೆ.[ಮೆಟ್ರೋ : ಚಿಕ್ಕಪೇಟೆಗೆ ತಲುಪಿದ 'ಕಾವೇರಿ']

ಮೂರು ವರ್ಷದ ಹಿಂದೆ ಮೆಟ್ರೋ ಆರಂಭವಾದಾಗ ಜನ ಖುಷಿಯಿಂದಲೇ ರೈಲು ಏರಿದ್ದರು. ಆದರೆ ಈಗ ಅವರ ವರ್ತನೆಯಲ್ಲಿ ಸಂಪೂರ್ಣ ಬದಲಾವಣೆಯಾಗಿದೆ. ರೈಲು ಹಿಡಿಯಲು ಎಂಜಿ ರಸ್ತೆಯ ಸ್ಟೇಶನ್ ಏರುವುದು ಅಲ್ಲಿಂದ ಮತ್ತೆ ಭೈಯಪ್ಪನಹಳ್ಳಿ ನಿಲ್ದಾಣದಲ್ಲಿ ಇಳಿಯುವುದು ಎಲ್ಲಾ ತ್ರಾಸದಾಯಕವಾಗಿ ಪರಿಣಮಿಸಿದೆ. ಎಂಜಿ ರಸ್ತೆ ನಿಲ್ದಾಣದವರೆಗೆ ಬಸ್ ಮತ್ತೆ ಆ ಕಡೆ ತೆರಳಲು ಬಸ್ ಹಿಡಿಯಬೇಕಾದ್ದು ಅನಿವಾರ್ಯ. ಇಲ್ಲಿ ಸಮಯದ ಉಳಿಯತಾಯ ಎಲ್ಲಿ ಬಂತು? ಎಂದು ಪ್ರಯಾಣಿಕ ಪ್ರಜ್ವಲ್ ಪ್ರಶ್ನಿಸುತ್ತಾರೆ.
ಆದಷ್ಟೂ ಬೇಗ ಮೆಜೆಸ್ಟಿಕ್ ಗೆ ಸಂಪರ್ಕ ಕಲ್ಪಿಸಿದರೆ ಉತ್ತಮ. ಆಗ ಇನ್ನಷ್ಟು ಜನರಿಗೆ ಅನುಕೂಲವಾಗುತ್ತದೆ. ಸಮಯದ ಉಳಿತಾಯ ಎಂದುಕೊಂಡರೆ ಸುಮ್ಮನೆ ಹಣ ತೆರಬೇಕಾಗಿದೆ. ಇತ್ತ ಬಿಎಂಟಿಸಿ ಪಾಸನ್ನು ಪಡೆದುಕೊಳ್ಳಬೇಕು, ಅತ್ತ ಮೆಟ್ರೋ ಪಾಸನ್ನು ಪಡೆದುಕೊಳ್ಳಬೇಕು. ನಗರದ ಎಲ್ಲ ಭಾಗಕ್ಕೂ ಶೀಘ್ರ ಆಗದಿದ್ದರೂ ಕೊನೆ ಪಕ್ಷ ಕೆಂಪೇಗೌಡ ಬಸ್ ನಿಲ್ದಾಣಕ್ಕಾದರೂ ಸಂಪರ್ಕ ಕಲ್ಪಿಸಬೇಕೆಂದು ಖಾಸಗಿ ಕಂಪನಿಯೊಂದರ ಉದ್ಯೋಗಿ ಸುಜಾತಾ ಒತ್ತಾಯಿಸುತ್ತಾರೆ.

ಎಂಜಿ ರಸ್ತೆಯಲ್ಲಿಳಿದರೆ ಬಸ್ ಏರಲು ಚಿನ್ನಸ್ವಾಮಿ ಕ್ರೀಡಾಂಗಣದ ಕಡೆ ಸಾಗಬೇಕು. ಟ್ರಿನಿಟಿ ನಿಲ್ದಾಣದಲ್ಲಿಳಿದರೂ ಅರ್ಧ ಕಿಮೀ ನಡೆಯಬೇಕಾದ್ದು ಅನಿವಾರ್ಯ. ರೈಲು ನಿಲ್ದಾಣಕ್ಕೆ ಇನ್ನು ಹೆಚ್ಚಿನ ಬಸ್ ಸಂಪರ್ಕ ಅಗತ್ಯ ಎಂಬುದು ಪ್ರಯಾಣಿಕ ಹೇಮಂತ್ ಮಾತು. ಹಲಸೂರು , ಇಂದಿರಾನಗರ ನಿಲ್ದಾಣಗಳ ಸಮೀಪವೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಬಿಎಂಟಿಸಿ ಬಸ್ ಗೆ ಓಡುವುದು ತಪ್ಪಿಲ್ಲ ಎಂದು ಇಂದಿರಾನಗರದಿಂದ ಎಂಜಿ ರಸ್ತೆ ನಿಲ್ದಾಣಕ್ಕೆ ಬಂದಿಳಿದ ರಾಜೇಶ್ ಹೇಳುತ್ತಾರೆ.
ಭದ್ರತೆಗೆ ಎಣೆ ಇಲ್ಲ
ಎಲ್ಲಾ ಮಟ್ರೋ ನಿಲ್ದಾಣಗಗಳು ಭದ್ರತೆಗೆ ವಿಶೇಷ ಒತ್ತು ನೀಡಿವೆ. ಸ್ಟೇಶನ್ ಒಳಗೆ ಮತ್ತು ಟ್ರೇನ್ ಫೋಟೊ ತೆಗೆಯುವುದು ನಿಷಿದ್ಧ. ಪ್ರಯಾಣಿಕರು ಕೊಂಡುಯ್ಯುವ ಸಾಮಗ್ರಿಗಳನ್ನು ಕಟ್ಟು ನಿಟ್ಟಿನ ತಪಾಸಣೆಗೆ ಒಳಪಡಿಸಲಾಗುತ್ತದೆ. ಪ್ರವೇಶ ಮತ್ತು ನಿರ್ಗಮನ ಕೂಡಾ ಅಷ್ಟೇ ಬಿಗಿಯಾಗಿದ್ದು ಎಲೆಕ್ಟ್ರಾನಿಕ್ ಯಂತ್ರಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿವೆ.
ಕಡಿಮೆಯಾದ ಜನಸಂಖ್ಯೆ
ಕಳೆದ ವರ್ಷಕ್ಕೆ ಹೋಲಿಸಿದರೆ ಮೆಟ್ರೊ ಈ ಬಾರಿ ಸ್ವಲ್ಪ ಹೊಳಪು ಕಳೆದುಕೊಂಡಿದೆ ಎಂದೇ ಹೇಳಬಹುದು. ಜನರಲ್ಲಿ ಮೊದಲಿದ್ದ ಉತ್ಸಾಹ ಈಗಿಲ್ಲ. ಅಲ್ಲದೇ ಮೆಟ್ರೊ ಸಿಬ್ಬಂದಿ ವರ್ತನೆಯೂ ಒಮ್ಮೊಮ್ಮೆ ಕಿರಿಕಿರಿ ತರುತ್ತದೆ ಎಂದು ಭೈಯಪ್ಪನಹಳ್ಳಿಯಿಂದ ಟ್ರಿನಿಟಿ ವೃತ್ತಕ್ಕೆ ಆಗಮಿಸಿದ ನಾರಯಣರಾಜು ಹೇಳುತ್ತಾರೆ. ಕಳೆದ ಏಳು ತಿಂಗಳಿಂದ ಕೆಲಸ ಮಾಡುತ್ತಿದ್ದು ನಾಗರಿಕರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದೇನೆ. ಬೆಂಗಳೂರು ಮೆಟ್ರೋದಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮ ತಂದಿದೆ ಎಂದು ಸೆಕ್ಯೂರಿಟಿ ತಂಡದಲ್ಲಿ ಕೆಲಸ ಮಾಡುತ್ತಿರುವ ಕೊಟ್ಟಿಗೆಪಾಳ್ಯದ ಸಾವಿತ್ರಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.[ಪೀಣ್ಯ ಮೆಟ್ರೋ ರೈಲು ವೇಳಾಪಟ್ಟಿ ಬದಲಾವಣೆ]













Click it and Unblock the Notifications