ಶಾಂತಕುಮಾರಿ ಬಿಬಿಎಂಪಿಯ ನೂತನ ಮೇಯರ್
ಬೆಂಗಳೂರು, ಸೆ.5 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ನೂತನ ಮೇಯರ್ ಆಗಿ ಮೂಡಲಪಾಳ್ಯ ಕಾರ್ಪೊರೇಟರ್ ಎನ್. ಶಾಂತಕುಮಾರಿ ಹಾಗೂ ಉಪ ಮೇಯರ್ ಆಗಿ ಕಾಮಾಕ್ಷಿಪಾಳ್ಯ ಕಾರ್ಪೊರೇಟರ್ ಕೆ.ರಂಗಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಸುದ್ದಿ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಪಟ್ಟಕ್ಕಾಗಿ ಶುಕ್ರವಾರ ಚುನಾವಣೆ ನಡೆಯಲಿದೆ. ಮೂಡಲಪಾಳ್ಯ ವಾರ್ಡ್ ಕಾರ್ಪೊರೇಟರ್ ಎನ್.ಶಾಂತಕುಮಾರಿ ಅವರು ಮೇಯರ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಮೇಯರ್ ಮತ್ತು ಉಪಮೇಯರ್ ಆಯ್ಕೆಯಾಗಿ ಇಂದು ಮಧ್ಯಾಹ್ನ ಚುನಾವಣೆ ನಡೆಯಲಿದೆ. ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಅವರ ಬೆಂಗಳೂರಿನ ನಿವಾಸದಲ್ಲಿ ನಡೆದ ಸಭೆಯಲ್ಲಿ ಎನ್.ಶಾಂತಕುಮಾರಿ ಅವರನ್ನು ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.
ಅನಂತ್ ಕುಮಾರ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಮುಂತಾದ ನಾಯಕರು ಪಾಲ್ಗೊಂಡಿದ್ದರು. ಗುರುವಾರ ವಿಜಯನಗರ ವಾರ್ಡ್ ಕಾರ್ಪೊರೇಟರ್ ರವೀಂದ್ರ ಅವರ ಹೆಸರು ಮೇಯರ್ ಪಟ್ಟಕ್ಕೆ ಕೇಳಿಬಂದಿತ್ತು. ರಾತ್ರಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಶಾಂತಕುಮಾರಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. [ಸೆ.5ರಂದು ಬಿಬಿಎಂಪಿಗೆ ಹೊಸ ಮೇಯರ್ ಆಯ್ಕೆ]
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಮೇಯರ್ ಮತ್ತು ಉಪ ಮೇಯರ್ ಪಟ್ಟವನ್ನು ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿಡಲಾಗಿದ್ದು, ಎರಡು ಹುದ್ದೆಗಳಿಗೆ ಭಾರೀ ಲಾಬಿ ನಡೆಯುತ್ತಿತ್ತು. ಮೇಯರ್ ಕಟ್ಟೆ ಸತ್ಯನಾರಾಯಣ ಮತ್ತು ಉಪ ಮೇಯರ್ ಇಂದಿರಾ ಅವರ ಅವಧಿ ಸೆ.3ರಂದು ಕೊನೆಗೊಂಡಿತ್ತು.
ಬಿಬಿಎಂಪಿ ಚುನಾವಣೆಯ ಅಧಿಸೂಚನೆಯನ್ನು ಈಗಾಗಲೇ ಪ್ರಾದೇಶಿಕ ಆಯುಕ್ತ ಗೌರವ ಗುಪ್ತ ಅವರು ಪ್ರಕಟಿಸಿದ್ದು, ಸೆ.5ರ ಶುಕ್ರವಾರ ಚುನಾವಣೆ ನಡೆಸುವಂತೆ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ. ಸೆ.5ರಂದು ಬೆಳಗ್ಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಅಗತ್ಯಬಿದ್ದರೆ, ಮಧ್ಯಾಹ್ನ ಚುನಾವಣೆ ನಡೆಯಲಿದೆ.
ಏಳು ತಿಂಗಳ ಅವಧಿ ಇದೆ : ಮಹಾನಗರ ಪಾಲಿಕೆಯ ಕೌನ್ಸಿಲ್ನ ಕೊನೆಯ ಅವಧಿ ಇದಾಗಿದ್ದು, 2015ರ ಏಪ್ರಿಲ್ನಲ್ಲಿ ಮತ್ತೆ ಪಾಲಿಕೆಗೆ ಚುನಾವಣೆ ನಡೆಯಲಿದೆ. ಆದ್ದರಿಂದ ಆಯ್ಕೆಯಾಗುವ ಮೇಯರ್ ಮತ್ತು ಉಪ ಮೇಯರ್ ಅಧಿಕಾರಾವಧಿ ಏಳು ತಿಂಗಳಾಗಿರುತ್ತದೆ.
ಶಾಂತಕುಮಾರಿ ಅವರ ಪ್ರತಿಕ್ರಿಯೆ : ಮೇಯರ್ ಅಭ್ಯರ್ಥಿಯಾಗಿ ಆಯ್ಕೆಯಾದ ಶಾಂತ ಕುಮಾರಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ಅಧಿಕಾರಾವಧಿ ಕಡಿಮೆ ಇದೆ. ಬಾಕಿ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ಆರ್ಥಿಕ ಸಂಪನ್ಮೂಲ ಕ್ರೋಢಿಕರಣಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದ್ದಾರೆ.
ಕಸದ ಸಮಸ್ಯೆ ನಿವಾರಣೆ ಮಾಡುವುದು ಪಾಲಿಕೆ ಮುಂದಿರುವ ಕಠಿಣ ಸವಾಲಾಗಿದೆ. ಡಿಸೆಂಬರ್ನಿಂದ ಮಂಡೂರಿಗೆ ಕಸದ ಸಾಗಾಟವನ್ನು ನಿಲ್ಲಿಸಬೇಕಾಗಿದೆ. ಆದ್ದರಿಂದ ಕಸದ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡುವುದಾಗಿಯೂ ಶಾಂತ ಕುಮಾರಿ ಅವರು ಹೇಳಿದ್ದಾರೆ.
ರಂಗಣ್ಣ ಉಪ ಮೇಯರ್ : ಇನ್ನು ಬಿಬಿಎಂಪಿಯ ಉಪ ಮೇಯರ್ ಆಗಿ ಕಾಮಾಕ್ಷಿ ಪಾಳ್ಯ ವಾರ್ಡ್ನ ಕೆ.ರಂಗಣ್ಣ ಅವರು ಆಯ್ಕೆ ಆಗುವುದು ಖಚಿತವಾಗಿದೆ. ರಂಗಣ್ಣ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.












Click it and Unblock the Notifications