ಕಾರ್ತಿಕ್ ಗೌಡಗೆ ಜೈಲಾ? ಬೇಲಾ? ಸೆ.6ಕ್ಕೆ ತೀರ್ಪು
ಬೆಂಗಳೂರು, ಸೆ.5: ಅತ್ಯಾಚಾರ, ವಂಚನೆ ಆರೋಪ ಹೊತ್ತಿರುವ ರೈಲ್ವೆ ಸಚಿವ ಡಿ.ವಿ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ವಿರುದ್ಧ ನಟಿ ಮೈತ್ರಿಯಾ ಗೌಡ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕಾರ್ತಿಕ್ ಗೌಡ ಅರ್ಜಿ ಹಾಕಿದ್ದಾರೆ. ಈ ಅರ್ಜಿ ವಿಚಾರಣೆ ಸೆಷನ್ಸ್ ನ್ಯಾಯಾಲಯದಲ್ಲಿ ಶುಕ್ರವಾರ ಮುಕ್ತಾಯಗೊಂಡಿದ್ದು, ಶನಿವಾರ ತೀರ್ಪು ಪ್ರಕಟವಾಗಲಿದೆ.
ಈ ನಡುವೆ ಕಾರ್ತಿಕ್ ವಿರುದ್ಧ ಬಂಧನ ವಾರೆಂಟ್ ಜಾರಿಯಲ್ಲಿರುವುದರಿಂದ ಪೊಲೀಸರ ವಿಶೇಷ ತಂಡ ತಮ್ಮ ಶೋಧ ಕಾರ್ಯ ಮುಂದುವರೆಸಿದ್ದಾರೆ. ಕಾರ್ತಿಕ್ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಪಿರ್ಯಾದುದಾರರಾದ ಮೈತ್ರಿಯಾ ಗೌಡ, ಅವರ ತಂಗಿ ಸುಪ್ರಿಯಾ ಗೌಡ ಹಾಜರಿದ್ದರು.
ಕಾರ್ತಿಕ್ ಗೌಡ ಪರ ವಕೀಲ ಬಿ.ವಿ ಆಚಾರ್ಯ ವಾದಿಸಿದರೆ, ಮೈತ್ರಿಯಾ ಪರ ವಕೀಲ ಆಕರ್ಷ್ ಅವರು ಪ್ರತಿವಾದ ಮಾಡಿದರು. ಎರಡು ಕಡೆ ವಾದ ಆಲಿಸಿದ ಸೆಷನ್ಸ್ ಕೋರ್ಟ್ ನ್ಯಾಯಾಧೀಶರು ಜಾಮೀನು ಅರ್ಜಿ ವಿಚಾರಣೆಯ ತೀರ್ಪನ್ನು ಕಾಯ್ದಿರಿಸಿದ್ದಾರೆ.

ಕಾರ್ತಿಕ್ ಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಆರ್.ಟಿ ನಗರ ಪೊಲೀಸರು ತನಿಖೆ ಕೈಗೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್ ಗೌಡ ಅವರಿಗೆ ಸೆಪ್ಟೆಂಬರ್ 1ರಂದು ನೋಟೀಸ್ ನೀಡಿದ್ದರು. ಸೆಪ್ಟೆಂಬರ್ 3ರೊಳಗೆ ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಿದ್ದರು.
ವಿಚಾರಣೆಗೆ ಹಾಜರಾಗದ ಕಾರ್ತಿಕ್ ಗೆ ಕೋರ್ಟ್ ಬಂಧನ ವಾರೆಂಟ್ ನೀಡಿತ್ತು. ನಂತರ ಮೂರು ವಿಶೇಷ ಪೊಲೀಸ್ ತಂಡ ರಚನೆ ಮಾಡಿ ಕೊಡಗು, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಕಾರ್ತಿಕ್ ಗಾಗಿ ಹುಡುಕಾಟ ನಡೆಸಲಾಗುತ್ತಿದೆ. [ಮೈತ್ರಿಯಾ ಬಗ್ಗೆ ಡಾಟಿ ಸದಾನಂದ ಗೌಡ]












Click it and Unblock the Notifications