Breaking news; ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗ ಉದ್ಘಾಟನೆ
ಬೆಂಗಳೂರು, ಆಗಸ್ಟ್ 29; ಬೆಂಗಳೂರು ನಗರದ ನಮ್ಮ ಮೆಟ್ರೋ ನೇರಳೆ ಮಾರ್ಗದ ವಿಸ್ತರಿತ ರೈಲು ಮಾರ್ಗ ಉದ್ಘಾಟನೆಗೊಂಡಿದೆ. ನೇರಳೆ ಮಾರ್ಗದ ಮೈಸೂರು ರಸ್ತೆ-ಕೆಂಗೇರಿ ನಡುವಿನ 7.5 ಕಿ. ಮೀ. ಮಾರ್ಗದಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ.
ಭಾನುವಾರ ಮೈಸೂರು ರಸ್ತೆ (ನಾಯಂಡಹಳ್ಳಿ) ರೈಲು ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ 7.5 ಕಿ. ಮೀ. ಮಾರ್ಗದಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.
ನಮ್ಮ ಮೆಟ್ರೋ ನೇರಳೆ ಮಾರ್ಗದ ವಿಸ್ತರಿತ ಮಾರ್ಗ ಇದಾಗಿದೆ. ಬೈಯಪ್ಪನಹಳ್ಳಿಯಿಂದ ಹೊರಡುವ ರೈಲು ಇನ್ನು ಮುಂದೆ ಕೆಂಗೇರಿ ಬಸ್ ನಿಲ್ದಾಣದ ತನಕ ಸಂಚಾರ ನಡೆಸಲಿದೆ. ಇಷ್ಟು ದಿನ ಮೈಸೂರು ರಸ್ತೆ (ನಾಯಂಡಹಳ್ಳಿ) ಕೊನೆಯ ನಿಲ್ದಾಣವಾಗಿತ್ತು.

7.5 ಕಿ. ಮೀ. ವಿಸ್ತರಿತ ಮಾರ್ಗದಲ್ಲಿ ನಾಯಂಡಹಳ್ಳಿಯಿಂದ ಹೊರಡುವ ರೈಲು ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ, ಪಟ್ಟಣಗೆರೆ, ಕೆಂಗೇರಿ, ಕೆಂಗೇರಿ ಬಸ್ ಟರ್ಮಿನಲ್ ಮತ್ತು ಚಲ್ಲಘಟ್ಟ ನಿಲ್ದಾಣಗಳಿವೆ. ಪ್ರಸ್ತುತ ಕೆಂಗೇರಿ ಬಸ್ ಟರ್ಮಿನಲ್ ತನಕ ಮಾತ್ರ ರೈಲು ಸಂಚಾರ ನಡೆಸಲಿವೆ. ಚೆಲ್ಲಘಟ್ಟ ನಿಲ್ದಾಣದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ನಮ್ಮ ಮೆಟ್ರೋ ವಿಸ್ತರಿತ ರೈಲು ಮಾರ್ಗದ ನಿರ್ಮಾಣ, ನಿಲ್ದಾಣಗಳ ಮೂಲ ಸೌಕರ್ಯಕ್ಕಾಗಿ ಸುಮಾರು 1,560 ಕೋಟಿ ವೆಚ್ಚ ಮಾಡಲಾಗಿದೆ. ಭೂ ಸ್ವಾಧೀನಕ್ಕಾಗಿಯೇ 360 ಕೋಟಿ ವೆಚ್ಚಾಗಿದೆ. ನಾಯಂಡಹಳ್ಳಿಯಿಂದ ಹೊರಡುವ ರೈಲು 12 ನಿಮಿಷದಲ್ಲಿ ಕೆಂಗೇರಿಯನ್ನು ತಲುಪಲಿದೆ. ಪ್ರತಿ 10 ನಿಮಿಷಕ್ಕೊಂದು ರೈಲು ಓಡಿಸಲು ಬಿಎಂಆರ್ಸಿಎಲ್ ತೀರ್ಮಾನಿಸಿದೆ.
ಮೆಟ್ರೋ ರೈಲು ಸಂಚಾರಕ್ಕೆ ಇಂದು ಹಸಿರು ನಿಶಾನೆ ತೋರಿಸಲಾಗಿದೆ. ಸೋಮವಾರದಿಂದ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ. ಪೀಕ್ ಅವರ್ನಲ್ಲಿ 7 ರಿಂದ 8 ನಿಮಿಷಕ್ಕೆ ಒಂದು ರೈಲು, ಉಳಿದ ಅವಧಿಯಲ್ಲಿ 10 ರಿಂದ 12 ನಿಮಿಷಕ್ಕೊಂದು ರೈಲು ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ನಡುವೆ ಸಂಚಾರ ನಡೆಸಲಿವೆ.
56 ರೂ. ದರ; ಬೈಯಪ್ಪನಹಳ್ಳಿಯಿಂದ ಕೆಂಗೇರಿ ತನಕ ಪ್ರಯಾಣ ನಡೆಸಲು 56 ರೂ. ಪ್ರಯಾಣ ದರ ನಿಗದಿ ಮಾಡಲಾಗಿದೆ. ಪ್ರಸ್ತುತ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಪ್ರಯಾಣ ದರ 45 ರೂ. ಇದೆ.












Click it and Unblock the Notifications