ಸಂಗೀತವನ್ನೇ ಉಸಿರಾಡುತ್ತಿರುವ ಸಾಫ್ಟ್ ವೇರ್ ಉದ್ಯೋಗಿ ವಿಶ್ವೇಶ ಭಟ್
ಗುಜರಾತಿನ ಸೋಮನಾಥ ದೇವಾಲಯ ಸೇರಿದಂತೆ ಭಾರತದ ಹಲವು ಪ್ರಮುಖ ದೇವಾಲಯಗಳ ಲೇಸರ್ ಶೋ ಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು, ನಮ್ಮ ಕರ್ನಾಟಕದ, ಉಡುಪಿ ಮೂಲದ ವಿಶ್ವೇಶ ಭಟ್!
ಬೆಂಗಳೂರು, ಜೂನ್ 1: ಕಾರ್ಪೋರೇಟ್ ಕಂಪೆನಿಗಳಿಗೆ ಸೇರಿಕೊಂಡರೆ ಕ್ರಿಯಾಶೀಲತೆ ಸತ್ತಂತೆ ಎಂಬುದು ಹಲವರ ಭಾವನೆ. ಅದು ನಿಜವೂ ಹೌದು. ಆದರೆ ಛಲವಿದ್ದರೆ ಆ ಬಿಡುವಿಲ್ಲದ ಕೆಲಸದ ನಡುವಲ್ಲೂ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಕ್ರಿಯಾಶೀಲತೆಯನ್ನು ಗರಿಗೆದರಿಸಬಹುದು. ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ ಸಾಫ್ಟ್ ವೇರ್ ಉದ್ಯೋಗಿ ವಿಶ್ವೇಶ ಭಟ್.
ಗಾಯಕ, ನಟ, ನಾಟಕಕಾರ, ಸಂಗೀತ ನಿರ್ದೇಶಕ, ಕಾರ್ಟೂನಿಸ್ಟ್... ಹೀಗೆ ಹತ್ತು ಹಲವು ಪಾತ್ರಗಳಲ್ಲಿ ತಮ್ಮ ವ್ಯಕ್ತಿತ್ವವನ್ನು ಹರವಿಕೊಂಡಿರುವ ವಿಶ್ವೇಶ ಭಟ್, ಕರ್ನಾಟಿಕ್ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ ಪಡೆದವರು. ಕನ್ನಡ ಸಂಗೀತ ಕ್ಷೇತ್ರದಲ್ಲಿ ವಿವಿಧ ಕ್ರಿಯಾಶೀಲ ಪ್ರಯೋಗಗಳನ್ನು ಮಾಡಿ ಗಾಯನ ಪ್ರಪಂಚಕ್ಕೆ ಹೊಸ ಮಜಲನ್ನು ತೋರಿಸಿಕೊಟ್ಟವರು.[ವಿಜಯಪುರದ ಜವಾರಿ ಕನ್ನಡಿಗನ ಮೆಚ್ಚುವಂತ ಸಾಧನೆ]
ಗುಜರಾತಿನ ಸೋಮನಾಥ ದೇವಾಲಯ ಸೇರಿದಂತೆ ಭಾರತದ ಹಲವು ಪ್ರಮುಖ ದೇವಾಲಯಗಳ ಲೇಸರ್ ಶೋ ಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು ವಿಶ್ವೇಶ ಭಟ್
ಬಾಲ್ಯದಿಂದಲೇ ಸಂಗೀತ ಮತ್ತು ನಟನೆಯ ಹವ್ಯಾಸವನ್ನು ಬೆಳೆಸಿಕೊಂಡಿದ್ದ ಬಹುಮುಖ ಪ್ರತಿಭೆ ವಿಶ್ವೇಶ ಭಟ್ ಮೂಲತಃ ಉಡುಪಿಯವರು. ದಾವಣಗೆರೆಯ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿಪಡೆದು, ವೃತ್ತಿ ಆರಂಭಿಸಿದ್ದು, ಅಮೆರಿಕದ ಮೆಂಫಿಸ್ ನಿಂದ. ಪ್ರಖ್ಯಾತ ಹಿಂದೂಸ್ತಾನಿ ಸಂಗೀತಗಾರ ಪಂ.ಪರಮೇಶ್ವರ್ ಹೆಗಡೆ ಅವರ ಶಿಷ್ಯರಾದ ವಿಶ್ವೇಶ ಭಟ್ ತನ್ನ ಬಿಡುವಿಲ್ಲದ ಐಟಿ ವೃತ್ತಿಯ ನಡುವಲ್ಲೂ ಸಂಗೀತವನ್ನು ಮಾತ್ರ ಮರೆಯಲಿಲ್ಲ.[ಆಡು ಮುಟ್ಟದ ಸೊಪ್ಪಿಲ್ಲ' ಮಂಗ್ಳೂರಿನ ಭವಾನಿ ಜೋಗಿ ಆಡದ ಕ್ರೀಡೆಗಳಿಲ್ಲ]

ಮಡದಿಯೂ ಗಾಯಕಿ
ಅವರ ಸಂಗೀತಾಸಕ್ತಿಗೆ ಮತ್ತಷ್ಟು ಪುಷ್ಟಿ ನೀಡುವುದಕ್ಕೆ ಎಂಬಂತೆ ಅವರ ಕೈಹಿಡಿದ ಮಡದಿ ಅಶ್ವಿನಿ ಸಹ ಸಂಗೀತ ಪ್ರೇಮಿ, ಸ್ವತಃ ಗಾಯಕಿ, ವೀಣಾ ವಾದಕಿ. ಇವರಿಬ್ಬರ ಜೋಡಿ ಸಂಗೀತ ಕ್ಷೇತ್ರದಲ್ಲಿ ಹಲವು ಹೊಸ ಪ್ರಯೋಗಗಳನ್ನು ಮಾಡಲು ಅಣಿಯಾಯಿತು, ಯಶಸ್ವಿಯೂ ಆಯಿತು. ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿರುವ ಈ ಜೋಡಿ ತಮ್ಮ ಮನೆಯಲ್ಲೇ ಸ್ಟುಡಿಯೋ ನಿರ್ಮಿಸಿಕೊಂಡು ದಿನದ ಹೆಚ್ಚಿನ ಸಮಯವನ್ನು ಸಂಗೀತಕ್ಕಾಗಿಯೇ ಮೀಸಲಿರಿಸಿದೆ

ಕಾರ್ಟೂನಿಸ್ಟ್ ಆಗಿಯೂ ಹೆಸರು
ಸದ್ಯಕ್ಕೆ ಎನ್ ಟಿಟಿ ಡಾಟಾ ಐಟಿ ಕಂಪೆನಿಯಲ್ಲಿ ತಾಂತ್ರಿಕ ವ್ಯವಸ್ಥೆಯ ಸಹ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿರುವ ಇವರು ಇನ್ಫೋಸಿಸ್ ನ ಮಾಜಿ ಉದ್ಯೋಗಿ. ಈಗಾಗಲೇ ವಿಶ್ವದಾದ್ಯಂತ 200 ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿಸದ್ದಾರೆ. ಡೆಕ್ಕನ್ ಹೆರಾಲ್ಡ್, ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಪ್ರತಿಷ್ಟಿತ ಪತ್ರಿಕೆಗಳಲ್ಲಿ ಇವರ 1000 ಕ್ಕೂ ಹೆಚ್ಚು ಕಾರ್ಟೂನ್ ಗಳು ಪ್ರಕಟವಾಗಿವೆ.

5 ಆಲ್ಬಂಗಳ ಕೊಡುಗೆ
ಕನ್ನಡ ಸಂಗೀತ ಕ್ಷೇತ್ರಕ್ಕೆ ಐದು ಆಲ್ಬಂಗಳನ್ನು ಕೊಡುಗೆಯಾಗಿ ನೀಡಿದ ಕೀರ್ತಿ ವಿಶ್ವೇಶ ಅವರಿಗೆ ಸಲ್ಲುತ್ತದೆ. ಘಮಘಮ(2004)- KAN - FUSION ಎಂಬ ಪಾಶ್ಚಿಮಾತ್ಯ ಮತ್ತು ಭಾರತೀಯ ಸಂಗೀತದ ಮಿಶ್ರಣದ ಹೊಸವಿಧದ ಸಂಗೀತ ಸಂಯೋಜನೆಯೇ ಘಮಘಮ ಎಂಬ ಆಲ್ಬಂ ರೂಪದಲ್ಲಿ ಹೊರಬಂದಿದೆ. ರಿಸರ್ಜನ್ಸ್(2006), ನಿಕಾಯತ್(2011), ಜರ್ನಿ (2013), 100/4 (2015) ಇವು ವಿಶ್ವೇಶ ಭಟ್ಟರ ಐದು ಪ್ರಮುಖ ಆಲ್ಬಂಗಳು.

ಲೇಸರ್ ಶೋ ಗಳಿಗೆ ಸಂಗೀತ ಸಂಯೋಜನೆ
ಅಹ್ಮದಾಬಾದ್, ಕಾನ್ಪುರ, ಬೋಧಗಯಾ, ಬಿಹಾರ್, ಸೋಮನಾಥ್ ದೇವಾಲಯ ಗುಜರಾತ್, ಕದ್ರಿ ಪಾರ್ಕ್ ಮಂಗಳೂರಿನಲ್ಲಿ ಪ್ರಸಿದ್ಧ ಲೇಸರ್ ಶೋಗಳ ಹಿಂದಿರುವ ಅಪೂರ್ವ ಸಂಗೀತ ಕೌಶಲ್ಯದ ರೂವಾರಿ ಉಡುಪಿ ಮೂಲದ ವಿಶ್ವೇಶ ಭಟ್!

ಕಿರುಚಿತ್ರ ಮತ್ತು ಜಾಹೀರಾತು
ಆಕ್ಸಿಡೆಂಟ್, ಜರ್ನಿ, ಫೊಟೋಗ್ರಾಫ್, ಸೆವೆನ್ ಟಿನ್, ಮೀನು, ಡೆ ಇನ್ ದ ಲೈಫ್ ಎಂಬ ಕಿರುಚಿತ್ರಗಳಿಗೆ ಮತ್ತು ಮೈಸೂರ್ ಡಿಟರ್ಜೆಂಟ್ ಸೋಪ್, ಮಿಂಟ್ ನ್ಯೂಸ್ ಪೇಪರ್, ಪೆಪ್ಸಿ ಐಪೆಲ್ ಸ್ಪರ್ಧೆ, ಇನ್ ಲುಕ್ ಕಲೆಕ್ಷನ್ಸ್ ಜಾಹೀರಾತುಗಳಿಗೆ ಸಂಗೀತ ಸಂಯೋಜನೆ ಮಾಡಿದ ಅನುಭವ ವಿಶ್ವೇಶ್ ಅವರಿಗಿದೆ.

ಪ್ರಶಸ್ತಿಯ ಗರಿ
ಉತ್ತಮ ಭಕ್ತಿ ಗೀತೆ ಗಾಯನಕ್ಕಾಗಿ ಕನ್ನಡ ಅಂತಾರಾಷ್ಟ್ರೀಯ ಸಂಗೀತ ಪ್ರಶಸ್ತಿ (KIMA)- 2014, ಕಿರುಚಿತ್ರಕ್ಕಾಗಿ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ- (KIMA)- 2014, ಕಿರುಚಿತ್ರಕ್ಕಾಗಿ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ-ರಂಗಾಯಣ, ಮೈಸೂರು. ನಾಟಕ, ಸ್ಕಿಟ್ ಗಳಲ್ಲಿ ಉತ್ತಮ ನಟ ಪ್ರಶಸ್ತಿ.












Click it and Unblock the Notifications