ಉದಾಸಿ, ಬಿಎವೈ ರಾಘವೇಂದ್ರಗೆ ಬಿಜೆಪಿಯಿಂದ ಮಾಫಿ

ಆದರೆ, ಈ ಬಗ್ಗೆ ಇದ್ದ ಗೊಂದಲಗಳನ್ನು ನಿವಾರಿಸಲು ಸುದ್ದಿಗೋಷ್ಠಿ ಕರೆದ ಬಿಜೆಪಿ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರು ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಹಾವೇರಿ ಸಂಸದ ಶಿವಕುಮಾರ ಉದಾಸಿ ಅವರ ಅಮಾನತು ಆದೇಶ ಸದ್ಯದಲ್ಲೇ ಹಿಂಪಡೆಯಲಾಗುತ್ತದೆ. ಇಬ್ಬರಿಗೂ ಬಿಜೆಪಿ ಪುನರ್ ಪ್ರವೇಶಕ್ಕೆ ರತ್ನಗಂಬಳಿ ಹಾಸಲಾಗುತ್ತದೆ ಎಂದಿದ್ದಾರೆ.
ಅಲ್ಲದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿರುವುದರಿಂದ ಈ ಸಂಸದರು ಮತ್ತೆ ಬಿಜೆಪಿಗೆ ವಾಪಾಸಾಗಿದ್ದಾರೆ. ಆದ್ದರಿಂದ ಇವರಿಬ್ಬರ ಮೇಲಿನ ಅಮಾನತು ಆದೇಶ ಹಿಂದಕ್ಕೆ ಪಡೆಯಲಾಗುವುದು ಎಂದಿದ್ದಾರೆ. ಕೆಜೆಪಿ ವಕ್ತಾರ ಧನಂಜಯ್ ಕುಮಾರ್ ಅವರು ಬಿಜೆಪಿ ಪುನರ್ ಪ್ರವೇಶದ ಬಗ್ಗೆ ಸ್ಪಷ್ಟನೆ ಹೊರಬಿದ್ದಿಲ್ಲ. ಬಿಜೆಪಿ ಮತ್ತೆ ಸೇರ್ಪಡೆಗೊಳ್ಳಲು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ಕ್ಷಮೆಯಾಚನೆಗೂ ಸಿದ್ಧ ಎಂದು ಧನಂಜಯ್ ಕುಮಾರ್ ಅವರು ಬಹಿರಂಗವಾಗಿ ಘೋಷಿಸಿದ್ದಾರೆ. ಆದರೂ, ಬಿಜೆಪಿ ನಾಯಕರಿಂದ ಇನ್ನೂ ಧನಂಜಯ್ ಅವರಿಗೆ ಆಹ್ವಾನ ಪತ್ರಿಕೆ ತಲುಪಿಲ್ಲ.
ಹಾವೇರಿ ಸಂಸದ ಶಿವಕುಮಾರ ಉದಾಸಿ ಅವರು ಬೆಳಗಾವಿ ಸುವರ್ಣ ವಿಧಾನಸೌಧ ನಿರ್ಮಾಣ, ಸೇರಿದಂತೆ ಲೋಕೋಪಯೋಗಿ ಇಲಾಖೆಯಲ್ಲಿ ನಡೆದ ಅನೇಕ ಅವ್ಯವಹಾರಗಳ ಆರೋಪ ಹೊತ್ತಿದ್ದಾರೆ. ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಅವರು ಅನೇಕ ಭೂ ಹಗರಣಗಳ ಆರೋಪದಿಂದ ಇನ್ನೂ ಮುಕ್ತರಾಗಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಯಡಿಯೂರಪ್ಪ ಬೆಂಬಲಿತ ಶಾಸಕ(ವಿಧಾನಪರಿಷತ್ ಸದಸ್ಯ) ಲೆಹರ್ ಸಿಂಗ್ ಅವರು ತಮ್ಮ ಭವಿಷ್ಯದ ಬಗ್ಗೆ ಮಾತನಾಡಿ, ಕೆಜೆಪಿ ಹಾಗೂ ಬಿಜೆಪಿ ವಿಲೀನವಾದ ಮೇಲೆ ನಾನು ಬಿಜೆಪಿ ಪರ ಎಂದರ್ಥ. ಹೀಗಾಗಿ ಅಮಾನತು ಆದೇಶ ಹಿಂಪಡೆಯುವ ಪ್ರಶ್ನೆ ನಿರರ್ಥಕ ಎಂದಿದ್ದಾರೆ.
ಈ ನಡುವ ಅಳಂದದ ಕೆಜೆಪಿ ಶಾಸಕ ಬಿಆರ್ ಪಾಟೀಲ್ ಅವರು ಇನ್ನೂ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧರಿಸಿಲ್ಲ. ಜ.16ರ ನಂತರ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಒಂದು ಕಾಲದಲ್ಲಿ ಯಡಿಯೂರಪ್ಪ ಬಣದಲ್ಲಿದ್ದ ತುಮಕೂರು ಸಂಸದ ಜಿಎಸ್ ಬಸವರಾಜ್ ಅವರು ಕೆಜೆಪಿ ಹಾಗೂ ಬಿಕೆಪಿ ಸಹವಾಸ ಸಾಕು ಎಂದು ಹೇಳಿ ಕಾಂಗ್ರೆಸ್ ಕಚೇರಿ ಕದ ತಟ್ಟುತ್ತಿದ್ದಾರೆ. ಈ ನಡುವೆ ಬಿಎಸ್ಸಾರ್ ಕಾಂಗ್ರೆಸ್ ದ ಬಗ್ಗೆ ಬಿಜೆಪಿ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಶ್ರೀರಾಮುಲು ಅವರ ಪಕ್ಷ ನಾಲ್ಕು ಶಾಸಕರನ್ನು ಹೊಂದಿದೆ.












Click it and Unblock the Notifications