ಛತ್ರಿ ಹಿಡಿಯಿರಿ; ಬೆಂಗಳೂರಲ್ಲಿ ಹೆಚ್ಚಾಗಲಿದೆ ಬಿಸಿಲು
ಬೆಂಗಳೂರು, ಮಾರ್ಚ್ 01 : ಶಿವರಾತ್ರಿ ಮುಗಿದಿದೆ ಚಳಿಗಾಲ ಮರೆಯಾಗಿ ಬೇಸಿಗೆ ಆರಂಭವಾಗಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಬೇಸಿಗೆಯ ಆರಂಭದಲ್ಲೇ ಬಿಸಿಲು ನೆತ್ತಿ ಸುಡುತ್ತಿದೆ. ನಗರದ ಜನರಿಗೆ ಮತ್ತಷ್ಟು ಸಂಕಷ್ಟ ತರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಉದ್ಯಾನ ನಗರಿ ಬೆಂಗಳೂರಿನಲ್ಲಿ ಮುಂದಿನ ಮೂರು ತಿಂಗಳ ಬಿಸಿಲಿನ ಝಳ ವಾಡಿಕೆಗಿಂತ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೇಸಿಗೆಯಲ್ಲಿ ಬೆಂಗಳೂರು ನಗರದಲ್ಲಿ ಬಿಸಿಲು ಹೆಚ್ಚಿರಲಿದ್ದು ಛತ್ರಿ ಹಿಡಿಯಲು ಜನರು ಸಿದ್ಧವಾಗಬೇಕಿದೆ.
ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಗರದಲ್ಲಿ ವಾಡಿಕೆಗಿಂತ 2 ರಿಂದ 3 ಡಿಗ್ರಿ ತಾಪಮಾನ ಹೆಚ್ಚಿರಲಿದೆ ಎಂಬುದು ಹವಾಮಾನ ಇಲಾಖೆ ಮುನ್ಸೂಚನೆಯಾಗಿದೆ. ಬೆಂಗಳೂರಿನ ಜನರನ್ನು ಈ ಬಾರಿ ಚಳಿ ಹೆಚ್ಚಾಗಿ ಕಾಡಲಿಲ್ಲ.

ಮರಗಳ ನಾಶ, ಹೆಚ್ಚಾಗುತ್ತಿರುವ ಕಾಂಕ್ರೀಟ್ ಕಟ್ಟಡಗಳ ಪರಿಣಾಮ ನಗರದಲ್ಲಿ ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚಾಗುತ್ತಲೇ ಇದೆ. ಬೇಸಿಗೆಯಲ್ಲಿ ಕರಾವಳಿ, ದಕ್ಷಿಣ ಒಳನಾಡು ಮತ್ತು ಬೆಂಗಳೂರಲ್ಲಿ ಬಿಸಿಲ ಧಗೆ ಹೆಚ್ಚಿರಲಿದೆ.
ದೇಶದ ವಿವಿಧ ನಗರಗಳು ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ವಾಡಿಕೆಗಿಂತ ಹೆಚ್ಚಿನ ತಾಪಮಾನ ಈ ಬಾರಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರು ನಗರದಲ್ಲಿ ಈಗಾಗಲೇ ಬಿಸಿಲಿನ ಝಳ ಹೆಚ್ಚಿದೆ. ಜನರು ಕಬ್ಬಿನ ಕಾಲು, ಜ್ಯೂಸ್ ಸೆಂಟರ್ಗಳ ಮುಂದೆ ನಿಲ್ಲುತ್ತಿದ್ದಾರೆ. ಎಳನೀರಿನ ದರ 35 ರೂ. ಮುಟ್ಟಿದೆ, ಕಲ್ಲಂಗಡಿ ಹಣ್ಣಿನ ಅಂಗಡಿಗಳು ರಸ್ತೆ-ರಸ್ತೆಯಲ್ಲಿ ತೆರೆಯುತ್ತಿವೆ.











Click it and Unblock the Notifications