ಬಿನೀಶ್ ಕೋಡಿಯೇರಿಗೆ ಷರತ್ತುಬದ್ಧ ಜಾಮೀನು ನೀಡಿದ ಹೈಕೋರ್ಟ್
ಬೆಂಗಳೂರು, ಅಕ್ಟೋಬರ್ 28: ಕೇರಳದ ಮಾಜಿ ಗೃಹ ಸಚಿವ, ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ಗೆ ಶುಭ ಸುದ್ದಿ ಸಿಕ್ಕಿದೆ. ಕರ್ನಾಟಕದ ಮನಿ ಲಾಂಡ್ರಿಂಗ್ ಪ್ರಕರಣದ ಆರೋಪಿತ ಬಿನೀಶ್ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಸಿಗದಿದ್ದಾಗ, ಹೈಕೋರ್ಟಿಗೆ ಅರ್ಜಿ ಹಾಕಿದ್ದ ಬಿನೀಶ್ ಅವರಿಗೆ ಏಕ ಸದಸ್ಯ ಪೀಠದಿಂದ ಜಾಮೀನು ಸಿಕ್ಕಿದೆ. ನ್ಯಾ. ಎಂ.ಜಿ ಉಮಾ ಅವರಿದ್ದ ನ್ಯಾಯಪೀಠವು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ. ಅಕ್ಟೋಬರ್ 29, 2020ರಿಂದ ಬಿನೀಶ್ ಕಸ್ಟಡಿಯಲ್ಲಿದ್ದಾರೆ.
ಕೇರಳದ ಸಿಪಿಐ(ಎಂ) ಕಾರ್ಯದರ್ಶಿ ಕೆ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಅವರು ಬೆಂಗಳೂರಿನ ಸೆಲೆಬ್ರಿಟಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಅನಿಕಾ ಡಿ., ರವೀಂದ್ರನ್ ಆರ್. ಎ, ಅನೂಪ್ ಜೊತೆ ಸಂಪರ್ಕ ಹೊಂದಿದ್ದಾರೆ. ಕಮ್ಮನಹಳ್ಳಿಯಲ್ಲಿ ಅನೂಪ್ ಆರಂಭಿಸಿದ ರೆಸ್ಟೋರೆಂಟ್ ಮೇಲೆ ಬಿನೀಶ್ 50 ಲಕ್ಷ ಹೂಡಿಕೆ ಮಾಡಿದ್ದಾರೆ ಎಂಬುದು ಈಗ ವಿಚಾರಣೆ ಹಂತದಲ್ಲಿದೆ.

ಕಮ್ಮನಹಳ್ಳಿಯಲ್ಲಿ ಡ್ರಗ್ ಹಬ್ ಸೃಷ್ಟಿಸಿದ್ದ ಪೆಡ್ಲರ್ ಅನೂಪ್ ಹೋಟೆಲ್ ವಹಿವಾಟಿಗೆ ಬಿನೀಶ್ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಅಕ್ರಮವಾಗಿ ಹಣ ವರ್ಗಾವಣೆ, ಪಿಎಂಎಲ್ಎ ಕಾಯ್ದೆ ಉಲ್ಲಂಘನೆ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ NCB ಕಚೇರಿಯಲ್ಲಿ ಬಿನೀಶ್ ವಿಚಾರಣೆ ನಡೆಸಲಾಗಿತ್ತು.
ವಿಚಾರಣೆ ವೇಳೆಯಲ್ಲಿ ಅನೂಪ್ ನನ್ನ ಸ್ನೇಹಿತ ಆತನಿಗೆ ಹಣಕಾಸು ತೊಂದರೆ ಇತ್ತು. ಹೀಗಾಗಿ 6 ಲಕ್ಷ ನೀಡಿದ್ದೆ. ಮತ್ತೊಮ್ಮೆ ಬೆಂಗಳೂರಿನಿಂದ ಕೊಚ್ಚಿಗೆ ಬರಲು ಹಣ ಇಲ್ಲ ಎಂದಿದ್ದಾಗ 15, 000 ನೀಡಿದ್ದೆ ಎಂದು ಬಿನೀಶ್ ಹೇಳಿಕೆ ನೀಡಿದ್ದ. ಅನೂಪ್ ಹಾಗೂ ಬಿನೀಶ್ ನಡುವಿನ ಆರ್ಥಿಕ ವ್ಯವಹಾರ ವಿದೇಶಕ್ಕೂ ವ್ಯಾಪಿಸಿದ್ದು, ಈ ಬಗ್ಗೆ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ.
ಏನಿದು ಪ್ರಕರಣ?: 2020ರ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲಿ 60 ಗ್ರಾಂ ಎಂಡಿಎಂಎ ಹೊಂದಿದ್ದ ಆರೋಪದ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಿಂದ ಹಲವಾರು ವ್ಯಕ್ತಿಗಳನ್ನು ಬಂಧಿಸಿದ್ದರು. ಸ್ಯಾಂಡಲ್ ವುಡ್ ಡ್ರಗ್ಸ್ ಕೇಸಿಗೆ ಸಂಬಂಧಿಸಿದಂತೆ ಮುಂದುವರೆದ ತನಿಖೆ ಇದಾಗಿತ್ತು. ಆರೋಪಿಗಳ ಪೈಕಿ ಮೊಹಮ್ಮದ್ ಅನೂಪ್ ಎಂಬಾತನ ಜೊತೆ ಬಿನೀಶ್ ಹಣಕಾಸು ವ್ಯವಹಾರ ಹೊಂದಿರುವುದು ತನಿಖೆ ವೇಳೆ ಜಾರಿ ನಿರ್ದೇಶನಾಲಯ (ಇಡಿ) ಕ್ಕೆ ಕಂಡು ಬಂದಿತ್ತು.
ಬಿನೀಶ್ ಅವರ ರೆಸ್ಟೊರೆಂಟ್ ನಿರ್ಮಾಣಕ್ಕೆ ತನ್ನನ್ನು ಬೇನಾಮಿದಾರನನ್ನಾಗಿ ಮಾಡಲಾಗಿದೆ ಮತ್ತು ಬಿನೀಶ್ ತನ್ನ ಬಾಸ್ ಎಂದು ಅನೂಪ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಬೆಂಗಳೂರಿನ ವ್ಯವಹಾರಗಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದ. ಈತನ ಹೇಳಿಕೆ ಆಧಾರದ ಮೇಲೆ ಬಿನೀಶ್ ನನ್ನು ವಿಚಾರಣೆಗೆ ಕರೆ ತರಲಾಯಿತು.
ವಿಚಾರಣೆ ವೇಳೆ ಬಿನೀಶ್ ಅವರು ಕೂಡಾ ಅನೂಪ್ ಅವರ ಪರಿಚಯವಿತ್ತು ಎಂದು ಇಡಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದ. ಆದರೆ ರೆಸ್ಟೋರೆಂಟ್ ತೆರೆಯಲು ಮಾತ್ರ ಹಣವನ್ನು ನೀಡಿದ್ದೆ ಎಂದು ಹೇಳಿದ್ದ.
ಆದರೆ, ಇಡಿ ತನಿಖೆಯಿಂದ ಹಲವಾರು ಬ್ಯಾಂಕ್ ಖಾತೆಗಳಿದ್ದು, ಬಿನೀಶ್ ಹಾಗೂ ಅನೂಪ್ ನಡುವೆ ನಿರಂತರವಾಗಿ ವ್ಯವಹಾರ ನಡೆದಿರುವುದು ಪತ್ತೆಯಾಯಿತು. ಬಿನೀಶ್ ಅವರು ಅಕ್ರಮವಾಗಿ ಬೃಹತ್ ಮೊತ್ತದ ಹಣವನ್ನು ವರ್ಗಾಯಿಸಿದ್ದಾರೆ ಎಂದು ತಿಳಿದು ಬಂದಿತ್ತು.
ಆದ್ದರಿಂದ, ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಸೆಕ್ಷನ್ 3 ರ ಅಡಿಯಲ್ಲಿ ಹಣ ವರ್ಗಾವಣೆಯ ಅಪರಾಧದಲ್ಲಿ ಬಿನೀಶ್ ತಪ್ಪಿತಸ್ಥನೆಂದು ಸ್ಥಾಪಿಸಲು ಸಾಕ್ಷ್ಯಗಳನ್ನು ಸಂಗ್ರಹಿಸಲು ಹೆಚ್ಚಿನ ತನಿಖೆ ಅಗತ್ಯ ಎಂದು ಇಡಿ ವಾದಿಸಿತ್ತು. ಇದಾದ ಬಳಿಕ ಬಿನೀಶ್ ಬಂಧಿಸಿ, ಜೈಲಿಗೆ ಕಳಿಸಲಾಗಿತ್ತು. ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದ ಬಿನೀಶ್ ಈಗ ಜಾಮೀನು ಪಡೆದುಕೊಂಡಿದ್ದಾರೆ.












Click it and Unblock the Notifications