ಮೊಹಮ್ಮದ್ ನಲಪಾಡ್ಗೆ ಇಂದು ಜಾಮೀನು ಭಾಗ್ಯವಿಲ್ಲ!
ಬೆಂಗಳೂರು, ಫೆಬ್ರವರಿ 26 : ಮೊಹಮ್ಮದ್ ನಲಪಾಡ್ಗೆ ಸೋಮವಾರವೂ ಜಾಮೀನು ಸಿಕ್ಕಿಲ್ಲ. ಆರೋಪಿಗಳ ಪರ ವಕೀಲರ ಮನವಿಯಂತೆ ಅರ್ಜಿ ವಿಚಾರಣೆಯನ್ನು ಫೆ.27ಕ್ಕೆ ಮುಂದೂಡಲಾಗಿದೆ.
ಬೆಂಗಳೂರಿನ 63ನೇ ಸೆಷನ್ಸ್ ನ್ಯಾಯಾಲಯದಲ್ಲಿ ಸೋಮವಾರ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಎಸ್ಪಿಪಿ ಶ್ಯಾಮ್ ಸುಂದರ್ ಅವರು 22 ಪುಟಗಳ ಆಕ್ಷೇಪಣೆಯನ್ನು ಸಲ್ಲಿಸಿದರು. ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.
ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಅವರು ಎಸ್ಪಿಪಿ ಶ್ಯಾಮ ಸುಂದರ್ ಮತ್ತು ಮೊಹಮ್ಮದ್ ನಲಪಾಡ್ ಪರ ವಕೀಲರಾದ ಮೊಹಮ್ಮದ್ ಸೆಬಾಸ್ಟಿಯನ್ ವಾದವನ್ನು ಆಲಿಸಿದರು. ನಂತರ ಆರೋಪಿಗಳ ಪರ ವಕೀಲರು ಹೆಚ್ಚಿನ ವಾದ ಮಂಡನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಜಾಮೀನು ಅರ್ಜಿಯ ವಿಚಾರಣೆಯನ್ನು ಫೆ.27ರ ಮಂಗಳವಾರಕ್ಕೆ ಮುಂದೂಡಿತು. ಇದರಿಂದಾಗಿ ಮೊಹಮ್ಮದ್ ನಲಪಾಡ್ ಇಂದು ಸಹ ಜೈಲಿನಲ್ಲಿಯೇ ಕಾಲ ಕಳೆಯಬೇಕಾಗಿದೆ.
ನ್ಯಾಯಾಲಯದಲ್ಲಿ ನಡೆದಿದ್ದೇನು?
* ಎಸ್ಪಿಪಿ ಶ್ಯಾಮ್ ಸುಂದರ್ ಅವರಿಂದ 22 ಪುಟಗಳ ಆಕ್ಷೇಪಣೆ ಸಲ್ಲಿಕೆ. ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಕೋರ್ಟ್ಗೆ ಮನವಿ.
* ಆರೋಪಿ ಪ್ರಭಾವಿ, ರಾಜಕೀಯ ಶಕ್ತಿ ಇದೆ. ಜಾಮೀನಿನ ಮೇಲೆ ಹೊರಬಂದರೆ ವಿದ್ವತ್ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ವಾದ ಮಂಡನೆ
* ನಲಪಾಡ್ ಪರವಾಗಿ ಸೆಬಾಸ್ಟಿಯನ್ರಿಂದ ವಾದ ಮಂಡನೆ. ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಗ್ಯವೂ ಚೇತರಿಕೆಯಾಗಿದೆ. ಆದ್ದರಿಂದ ಜಾಮೀನು ನೀಡಬೇಕು ಎಂದು ಮನವಿ
* ಪೊಲೀಸರು ಹೇಳಿಕೆ ವಿದ್ವತ್ ಹೇಳಿಕೆ ದಾಖಲಿಸಿಕೊಂಡಿಲ್ಲ. ತನಿಖೆ ಈಗ ತಾನೇ ಆರಂಭವಾಗಿದೆ. ಎಂಟೇ ದಿನಕ್ಕೆ ಜಾಮೀನು ಕೇಳಿದರೆ ಹೇಗೆ? ವಿದ್ವತ್ ಸುಧಾರಿಸಿಕೊಳ್ಳಲು ಎಂಟು ತಿಂಗಳು ಬೇಕಾಗಬಹುದು ಎಂದು ಎಸ್ಪಿಪಿಯಿಂದ ವಾದ ಮಂಡನೆ
* ಹೆಚ್ಚಿನ ವಾದ ಮಂಡನೆಗೆ ಕಾಲಾವಕಾಶ ಬೇಕು. ವಿಚಾರಣೆಯನ್ನು ನಾಳೆಗೆ ಮುಂದೂಡಿ ಎಂದು ಆರೋಪಿಗಳ ಪರ ವಕೀಲರಿಂದ ನ್ಯಾಯಾಲಯಕ್ಕೆ ಮನವಿ. ವಿಚಾರಣೆ ಫೆ.27ಕ್ಕೆ ಮುಂದೂಡಿಕೆ.
ಮೊಹಮ್ಮದ್ ನಲಪಾಡ್ ಮತ್ತು ಇತರ 6 ಆರೋಪಿಗಳನ್ನು ಮಾರ್ಚ್ 7ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.











Click it and Unblock the Notifications