ನಲಪಾಡ್ನನ್ನು ಮತ್ತೆ ಬಂಧಿಸಿದ ಪೊಲೀಸರು, ಈ ಬಾರಿ ಬೇರೆ ಕಾರಣಕ್ಕೆ
ಬೆಂಗಳೂರು, ಅಕ್ಟೋಬರ್ 03: ವಿದ್ವತ್ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ ಮೂರು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಮುದ್ದೆ ಮುರಿದಿದ್ದ ಮೊಹಮ್ಮದ್ ನಲಪಾಡ್ ಇಂದು ಮತ್ತೆ ಬಂಧನಕ್ಕೊಳಗಾಗಿದ್ದಾರೆ. ಆದರೆ ಗಂಭೀರ ಪ್ರಕರಣಕ್ಕಲ್ಲ.
ನಲಪಾಡ್, ಇಂದು ಯೂತ್ ಕಾಂಗ್ರೆಸ್ ಪರವಾಗಿ ಆದಾಯ ತೆರಿಗೆ ಇಲಾಖೆ ಎದುರಿಗೆ ಪ್ರತಿಭಟನೆ ಮಾಡಿದ್ದಾರೆ ಹಾಗಾಗಿ ಪೊಲೀಸರು ನಲಪಾಡ್ ಸೇರಿ ಹಲವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರಿಗೆ ಬೇಕೆಂದೇ ಕಿರುಕುಳ ನೀಡುತ್ತಿದ್ದಾರೆ ಎಂದು ನಲಪಾಡ್ ಅವರ ನೇತೃತ್ವದಲ್ಲಿ ಯೂತ್ ಕಾಂಗ್ರೆಸ್ ಇಂದು ಪ್ರತಿಭಟನೆ ಮಾಡಿತು. ಕಾಂಗ್ರೆಸ್ನಿಂದ ಉಚ್ಛಾಟಿತಗೊಂಡಿದ್ದ ನಲಪಾಡ್ ಪ್ರತಿಭಟನೆಯ ನೇತೃತ್ವ ವಹಿಸಿದ್ದಿದು ವಿಶೇಷ.
ನಲಪಾಡ್ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದಾಗ ಕೆಪಿಸಿಸಿಯು ನಲಪಾಡ್ ಅವರನ್ನು ಆರು ವರ್ಷಗಳ ಕಾಲ ಉಚ್ಛಾಟಣೆ ಮಾಡಿತ್ತು. ಆದರೆ ಉಚ್ಛಾಟಣೆ ಆಗಿ ವರ್ಷವಾಗುವ ಮೊದಲೇ ಮತ್ತೆ ಯೂತ್ ಕಾಂಗ್ರೆಸ್ನಲ್ಲಿ ನಲಪಾಡ್ ಸಕ್ರಿಯರಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್ ಅವರು ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಜೈಲು ಸೇರಿದ್ದರು. ಸತತವಾಗಿ 116 ದಿನಗಳ ಕಾಲ ಜೈಲಿನಲ್ಲಿದ್ದ ಅವರು ಇದೀಗ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಕರಣ ಇನ್ನೂ ವಿಚಾರಣೆ ನಡೆಯುತ್ತಿದೆ.












Click it and Unblock the Notifications