ಹೊಸಕೋಟೆ ವ್ಯಾಪ್ತಿ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡರಿಗೆ ಆಹ್ವಾನವಿಲ್ಲ
ಬೆಂಗಳೂರು, ಜುಲೈ 09: ಹೊಸಕೋಟೆ ವ್ಯಾಪ್ತಿಯ ಸರ್ಕಾರಿ ಅಧಿಕಾರಿಗಳ ವಿರುದ್ಧ ಸ್ವತಃ ಶಾಸಕ ಶರತ್ ಬಚ್ಚೇಗೌಡರೇ ಪ್ರತಿಭಟನೆಗೆ ಇಳಿದು ಬಿಟ್ಟಿದ್ದರು. ತಮ್ಮದೇ ಕ್ಷೇತ್ರದ ಶಾಸಕರಿಗೆ ಮಾಹಿತಿ ನೀಡದೇ ಆಹ್ವಾನ ನೀಡದೇ ಶಾಸಕರ ಅನುದಾನದಲ್ಲೇ ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ನಿಗಿನಿಗಿ ಕೆಂಡವಾಗಿದ್ದರು.
ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಹೊಸಕೋಟೆ ಕ್ಷೇತ್ರದಲ್ಲಿ ಆಗಿದ್ದು ಇಷ್ಟೇ. ಶಾಸಕರ ನಿಧಿಯಲ್ಲಿ ವಿಕಲಚೇತರನಿಗೆ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ಶಾಸಕರ ಅನುದಾನದಲ್ಲೇ ನಡೆದ ಕಾರ್ಯಕ್ರಮಕ್ಕೆ ಶಾಸಕರಿಗೇ ಆಹ್ವಾನ ನೀಡಿರಲಿಲ್ಲ. ಸರ್ಕಾರಿ ಅಧಿಕಾರಿಗಳು ತೋರಿದ ಈ ನಿರ್ಲಕ್ಷ್ಯಕ್ಕೆ ಶರತ್ ಬಚ್ಚೇಗೌಡ ಕಿಡಿ ಕಾರಿದರು.
ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಕಾರ್ಯಕ್ರಮ ಆಯೋಜನೆ ಸ್ಥಳಕ್ಕೆ ಧಾವಿಸಿದ ಶಾಸಕ ಶರತ್ ಬಚ್ಚೇಗೌಡ ತಮಗೆ ಆಹ್ವಾನ ನೀಡದೇ ಹೇಗೆ ಕಾರ್ಯಕ್ರಮ ಆಯೋಜನೆ ಮಾಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಶಾಸಕರನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘನೆ:
ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಿಸುವ ಕಾರ್ಯಕ್ರಮಕ್ಕೆ ಶಾಸಕರನ್ನು ಆಹ್ವಾನಿಸದೇ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಶರತ್ ಬಚ್ಚೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳ ಸಾಂವಿಧಾನಿಕ ಶಿಷ್ಟಾಚಾರದ ಉಲ್ಲಂಘನೆ ಈ ತಾಲೂಕಿನ ಜನರು ಮುಂದಿನ ದಿನಗಳಲ್ಲಿ ಸರಿಯಾದ ಉತ್ತರ ನೀಡುತ್ತಾರೆ. ನಾವು ಸದಾ ಶರತ್ ಬಚ್ಚೇಗೌಡರ ಜೊತೆ ಬೆನ್ನೆಲುಬಾಗಿ ನಿಂತು ಜನರ ಪರವಾಗಿ ಹೋರಾಡುವ ಶಕ್ತಿ ತುಂಬೋಣ ಎಂದು ಬೆಂಬಲಿಗರು ಘೋಷಣೆ ಕೂಗಿದರು.












Click it and Unblock the Notifications