ಗಣಪತಿ ಆತ್ಮಹತ್ಯೆ ಕೇಸ್: ಸಚಿವ ಸ್ಥಾನಕ್ಕೆ ಜಾರ್ಜ್ ರಾಜೀನಾಮೆ
ಬೆಂಗಳೂರು, ಜುಲೈ 18: ಮಂಗಳೂರಿನ ಡಿವೈಎಸ್ಪಿ ಎಂಕೆ ಗಣಪತಿ ಅವರು ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಎಫ್ ಐಆರ್ ಹಾಕುವ ಭೀತಿಗೆ ಒಳಗಾಗಿರುವ ಸಚಿವ ಕೆಜೆ ಜಾರ್ಜ್ ಅವರು ಸೋಮವಾರ ಸಂಜೆ ವೇಳೆಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ನಗರಾಭಿವೃದ್ಧಿ ಸಚಿವರು ನೀಡಿದ ರಾಜೀನಾಮೆಯನ್ನು ಅಂಗೀಕರಿಸಿಲ್ಲ.
ಮಂಗಳೂರು ಐಜಿ ಕಚೇರಿ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ಮತ್ತು ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಮಡಿಕೇರಿ ಟೌನ್ ಪೊಲೀಸರಿಗೆ ಜೆಎಂಎಫ್ಸಿ ಕೋರ್ಟ್ ಆದೇಶ ನೀಡಿತ್ತು. [ ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline]

ಮಡಿಕೇರಿ ಜೆಎಂಎಫ್ಸಿ ಕೋರ್ಟ್ ನ್ಯಾಯಾಧೀಶೆ ಅನ್ನಪೂರ್ಣೇಶ್ವರಿ ಅವರು ಸೋಮವಾರ ಮಧ್ಯಾಹ್ನ ಈ ಕುರಿತು ಆದೇಶ ನೀಡಿದ್ದಾರೆ. ಎಂ.ಕೆ.ಗಣಪತಿ ಅವರ ಪುತ್ರ ನೇಹಾಲ್ ಅವರು ಜುಲೈ 11ರಂದು ಸಲ್ಲಿಸಿದ್ದ ಖಾಸಗಿ ದೂರನ್ನು ಪರಿಗಣಿಸಿ ಈ ಆದೇಶ ಹೊರಡಿಸಲಾಗಿದೆ. [ಕೆ.ಜೆ.ಜಾರ್ಜ್ ಕಾಡಿದ 5 ಪ್ರಮುಖ ವಿವಾದಗಳು]
Bengaluru (Karnataka): BJP holds 'padyatra' against State Govt over Deputy SP Ganpathi suicide case pic.twitter.com/atnZF3NN0p
— ANI (@ANI_news) July 18, 2016
ಎ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಈ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಕಳೆದ ವಾರ ಸರ್ಕಾರ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು.
ರಾಜ್ಯ ಸರ್ಕಾರದ ವಿರುದ್ಧ ದೂರು ಸಲ್ಲಿಸಲು ಕರ್ನಾಟಕ ಬಿಜೆಪಿ ನಾಯಕರು ಸೋಮವಾರದಂದು ರಾಜಭವನದ ತನಕ ಪಾದಯಾತ್ರೆ ನಡೆಸಿ ರಾಜ್ಯಪಾಲ ವಜುಭಾಯಿ ವಾಲರಿಗೆ ದೂರು ನೀಡುತ್ತಿದೆ.
ಸೋಮವಾರದಂದು ಅಧಿವೇಶನ ಅನಿರ್ಧಿಷ್ಟ ಅವಧಿಗೆ ಮುಂದೂಡುತ್ತಿದ್ದಂತೆ ತುರ್ತು ಸಭೆ ಕರೆದ ಸಿಎಂ ಸಿದ್ದರಾಮಯ್ಯ ಅವರಿಗೆ ಕೆಜೆ ಜಾರ್ಜ್ ಅವರು ರಾಜೀನಾಮೆ ಸಲ್ಲಿಸುವಂತೆ ಎಲ್ಲಾ ಶಾಸಕರು ಒಕ್ಕೊರಲ ಅಭಿಪ್ರಾಯ ನೀಡಿದರು. ಹೀಗಾಗಿ ಜಾರ್ಜ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ವಿಚಾರಣೆ ಬಳಿಕ ಕಳಂಕಮುಕ್ತರಾದರೆ ಜಾರ್ಜ್ ರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ರಾಜೀನಾಮೆ ವಿಷಯವನ್ನು ಹೈಕಮಾಂಡ್ ಗೆ ತಿಳಿಸಲಿದ್ದಾರೆ. ನಂತರ ಅಂಗಿಕೃತವಾದ ರಾಜೀನಾಮೆಯನ್ನು ರಾಜ್ಯಪಾಲರಿಗೆ ಕಳಿಸಲಾಗುತ್ತದೆ.












Click it and Unblock the Notifications