ವಿದೇಶ ವ್ಯಾಸಂಗಕ್ಕೆ ತೆರಳುವ ಅಲ್ಪಸಂಖ್ಯಾತರಿಗೆ ಶಿಷ್ಯವೇತನ
ಬೆಂಗಳೂರು, ಅಕ್ಟೋಬರ್, 31: ಟಿಪ್ಪು ಸುಲ್ತಾನ ಜಯಂತಿಯ ಅಂಗವಾಗಿ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ತೆರಳುವ ರಾಜ್ಯದ ಅಲ್ಪಸಂಖ್ಯಾತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರೂ. 20ಲಕ್ಷ ಶಿಷ್ಯ ವೇತನ ನೀಡುವ ಮಹತ್ವಪೂರ್ಣ ಯೋಜನೆಗೆ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಸಚಿವ ಖಮರುಲ್ ಇಸ್ಲಾಂ ಚಾಲನೆ ನೀಡಿದರು.
ಟಿಪ್ಪು ಸುಲ್ತಾನ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಪೌರಾಡಳಿತ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮುಂದಾಗಿದ್ದು, ಪ್ರಪ್ರಥಮ ಬಾರಿಗೆ ಸರ್ಕಾರದ ವತಿಯಿಂದ ನಡೆಯುವ ಈ ವಿಶೇಷ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 10 ರಂದು ಬೆಂಗಳೂರಿನ ವಿಧಾನಸೌಧದ ಔತಣ ಸಭಾಂಗಣದಲ್ಲಿ ಉದ್ಘಾಟಿಸಲಿದ್ದಾರೆ.[ಟಿಪ್ಪು ಸುಲ್ತಾನ್ ವಿವಿ ರಾಜ್ಯದಲ್ಲೆಲ್ಲೂ ಸ್ಥಾಪಿಸುವಂತಿಲ್ಲ]

ಟಿಪ್ಪು ಕೇವಲ ಒಂದು ಸಮುದಾಯದ ಸೊತ್ತಲ್ಲ. ಇಡೀ ರಾಷ್ಟ್ರದ ಆಸ್ತಿ. ಆದಕಾರಣ, ಇತರೆ ರಾಷ್ಟ್ರ ನಾಯಕರ ಜಯಂತಿಯಂತೆಯೇ ಟಿಪ್ಪೂ ಜಯಂತಿಯನ್ನೂ ರಾಜ್ಯದ ರಾಜಧಾನಿಯ ಜೊತೆ ಜೊತೆಗೆ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲೂ ಆಯೋಜಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.[ಆಲೂರ್ ವೆಂಕಟರಾವ್ ರಸ್ತೆಗೆ ಟಿಪ್ಪು ಹೆಸರೇಕೆ?]
ಮುಂದಿನ ದಿನಗಳಲ್ಲಿ ಟಿಪ್ಪು ಸುಲ್ತಾನ್ ಅವರ ಹುಟ್ಟೂರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲೂ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಸಭೆ ಚಿಂತನೆ ನಡೆಸಿದೆ. ಮೆಟ್ರೋ ಕಾಮಗಾರಿ ವೇಳೆ ನಗರದ ಮಾರುಕಟ್ಟೆ ಪ್ರದೇಶದಲ್ಲಿ ದೊರೆತ ಪಿರಂಗಿಗಳನ್ನು ಬೆಂಗಳೂರಿನ ಟಿಪ್ಪು ಬೇಸಿಗೆ ಅರಮನೆ ಆವರಣದಲ್ಲಿ ಸ್ಥಾಪಿಸುವ ಹಾಗೂ ಸಂರಕ್ಷಿಸುವ ಕೇಂದ್ರವನ್ನು ಮತ್ತಷ್ಟು ಜನಾಕರ್ಷಣೀಯ ತಾಣವಾಗಿ ರೂಪಿಸಲು ಯೋಜಿಸಿದೆ ಎಂದು ಖಮರುಲ್ ಇಸ್ಲಾಂ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷೆ ಬಲ್ಕೀಸ್ ಬಾನು, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಸೂದ್ ವೈ ಫೌಜ್ ದಾರ್, ಕಾರ್ಯದರ್ಶಿ ಅದೋನಿ ಸಯ್ಯದ್ ಸಲೀಂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕ ಅಕ್ರಂಪಾಷಾ, ಇತಿಹಾಸ ತಜ್ಞ ಪ್ರೊ ಎಂ.ವಿ. ನರಸಿಂಹಪ್ಪ, ಟಿಪ್ಪು ಅಭಿಮಾನ ಬಳಗದ ತಲಕಾಡು ಚಿಕ್ಕರಂಗೇಗೌಡ ಅವರೂ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.












Click it and Unblock the Notifications