ಅ.29ರಿಂದ ಮಾಧ್ಯಮ ಮತ್ತು ಮನರಂಜನಾ ಸಮಾವೇಶ
ಅ.29ರ ಮಂಗಳವಾರ ಬೆಳಗ್ಗೆ ನಗರದ ಐಟಿಸಿ ಗಾರ್ಡಿನಿಯಾ ಹೋಟೆಲ್ ನಲ್ಲಿ ಸಮಾವೇಶಕ್ಕೆ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಕಾರ್ಯದರ್ಶಿ ಬಿಮಲ್ ಜುಲ್ಕಾ ವಿಶೇಷ ಉಪನ್ಯಾಸ ನೀಡಿಲಿದ್ದು, ಮಾಧ್ಯಮ ಮತ್ತು ಮನರಂಜನಾ ವಾಣಿಜ್ಯ ಸಮಾವೇಶದ ಅಧ್ಯಕ್ಷರಾದ ನಟ ಕಮಲಹಾಸನ್ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ಸರ್ಕಾರದ ವಾರ್ತಾ ಸಚಿವರಾದ ಸಂತೋಷ್ ಲಾಡ್, ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ಮುಂತಾದವರು ಸಮಾವೇಶದ ಉದ್ಘಾಟನಾ ಕಾರ್ಯಕ್ರದಲ್ಲಿ ಭಾಗವಹಿಸಲಿದ್ದಾರೆ.
ಡಿಜಿಟಲ್ ತಂತ್ರಜ್ಞಾನ ಹಾಗೂ ಮಾಧ್ಯಮದ ನೂತನ ವ್ಯೂಹದ ಹಿನ್ನೆಲೆಯಲ್ಲಿ ಅರ್ಥಪೂರ್ಣ ವಿಚಾರಗಳ ಪರಿಣಾಮಕಾರಿ ಪ್ರಸಾರ ಎಂಬುದು ಈ ಬಾರಿ ಸಮಾವೇಶ ಪ್ರಮುಖ ಉದ್ದೇಶವಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಸಾಂಪ್ರದಾಯಿಕ ವೇದಿಕೆಗಳು ಭಗ್ನಗೊಂಡಿದ್ದು, ಭವಿಷ್ಯದ ಅಗತ್ಯದ ದೃಷ್ಟಿಯಿಂದ ಪರ್ಯಾಯ ಮಾದರಿಗಳ ಹುಡುಕಾಟಕ ಬಗ್ಗೆ ಎರಡು ದಿನಗಳ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ.
ಭಾರತೀಯ ಚಿತ್ರರಂಗ ಒಂದು ಶತಮಾನ ಮುಗಿಸಿದ್ದು, ಮುಂದಿನ ಶತಮಾನದಲ್ಲಿ ಅದರ ರೂಪುರೇಷೆ ಹೇಗಿರಬೇಕು ಮತ್ತು ಆಗಬೇಕಾದ ಬದಲಾವಣೆಗಳ ಕುರಿತ ಚರ್ಚೆ ಮಾತ್ರವಲ್ಲದೇ ಮಾಧ್ಯಮ ಹಾಗೂ ಮನರಂಜನೆ ಕುರಿತ ಎಲ್ಲ ವಿಷಯಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಲಿದೆ. ದಕ್ಷಿಣ ಭಾರತದಲ್ಲಿ ಇದು 5ನೇ ಸಮಾವೇಶವಾಗಿದ್ದು, ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ