ಮಂಡ್ಯಕ್ಕೆ ನೆಟ್ ಬೇಕೇಬೇಕೆಂದ ರಮ್ಯಾಗೆ ಗೂಗಲ್ ಪ್ರಶಂಸೆ
ಬೆಂಗಳೂರು, ಏ.18: ಮಂಡ್ಯದಂತಹ ಅಪ್ಪಟ ಕನ್ನಡ ನಾಡಿನಲ್ಲಿ ಟ್ವಿಟ್ಟರ್, ಫೇಸ್ ಬುಕ್, ವಾಟ್ಸ್ ಅಪ್ ಬಳಸುವ ವಿಷಯದಲ್ಲಿ ಅಂಬರೀಷ್ ಅಂಕಲ್ ಅವರಿಂದ ಬೈಗುಳ ತಿಂದಿದ್ದರೂ ನಮ್ಮ ನಾಡಿನ ಜನತೆಗೆ ಇಂಟರ್ನೆಟ್ ಬೇಕೇ ಬೇಕು ಎಂದು ತಿಳಿಯಹೇಳಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾಗೆ ಗೂಗಲ್ ಸಂಸ್ಥೆಯಿಂದ ಬಹುಪರಾಕ್ ಬಂದಿದೆ.
ಏನಪ್ಪಾ ಅಂದರೆ ರಮ್ಯಾ ಅವರೇ ಹೇಳಿದಂತೆ ಕಳೆದ 7 ತಿಂಗಳಿಂದ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದಾದ್ಯಂತ ಕೆಲಸ ಮಾಡುತ್ತಿದ್ದಾರೆ. ಮಧ್ಯೆ ಮಧ್ಯೆ ಇಂಟರ್ನೆಟ್ ಮೂಲಕವೂ ತಮ್ಮ ಚಿಂತನೆ/ ಭಾನವೆಗಳನ್ನು ಹೊರಹಾಕುತ್ತಿದ್ದರು. ಅದು ಉದ್ದೇಶಿತ ಸಮುದಾಯಕ್ಕೆ ತಲುಪಿದೆ ಎಂಬುದಕ್ಕೆ Google search rankings ವರದಿಯೇ ಸಾಕ್ಷಿಯಾಗಿದೆ.

16ನೇ ಲೋಕಸಭಾ ಚುನಾವಣೆ ನಿಮಿತ್ತ netizenಗಳು ಈ ಬಾರಿ ಭಾರಿ ಪ್ರಮಾಣದಲ್ಲಿ ಇಂಟರ್ನೆಟ್ ಬಳಕೆ ಮಾಡಿದ್ದಾರೆ. ಅದರಲ್ಲಿ ಕೊನೆಯ ಘಳಿಗೆಯಲ್ಲಿ ಜನಸೇನಾ ಎಂಬ ಪಕ್ಷವನ್ನು ಸ್ಥಾಪಿಸಿ ರಾಜಕೀಯಕ್ಕೆ ಧುಮುಕಿದ ಚಿರಂಜೀವಿಯ ತಮ್ಮ ತೆಲುಗು ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ ಅವರಿಗಾಗಿ ನೆಟಿಜನ್ ಗಳು ಸಿಕ್ಕಾಪಟ್ಟೆ ಜಾಲಾಡಿಬಿಟ್ಟಿದ್ದಾರೆ ಎಂದು Google Inc ಸಂಸ್ಥೆ ಹೇಳಿದೆ. (ಮಂಡ್ಯದ ವೆರೈಟಿ ಜನಕ್ಕೆ ಐಟಿನೂ ಬೇಕು: ಅಂಬಿಗೆ ರಮ್ಯಾ)
ಎರಡನೆಯ ಸ್ಥಾನದಲ್ಲಿ ನಮ್ಮ ಕನ್ನಡತಿ ರಮ್ಯಾ (Divya Spandana) ಅವರು ರಾರಾಜಿಸುತ್ತಿದ್ದಾರೆ. ಬಹುಶಃ ಗೂಗಲ್ ವರದಿಯನ್ನು ನೋಡಿದ ಬಳಿಕ ರಮ್ಯಾ, ಚುನಾವಣಾ ದಣಿವಾರಿಸಿಕೊಂಡು ಈ ಬಾರಿ ಅಂಬಿ ಅಂಕಲ್ ಅನ್ನು ಮೀಟ್ ಮಾಡಿದರೆ ನೋಡಿ ಅಂಕಲ್ ಇಂಟರ್ನೆಟ್ ಪ್ರಭಾವ ಎಂದು ಬೀಗಬಹುದು.
ಇನ್ನು ಉತ್ತರಪ್ರದೇಶದ ಅಮೇಠಿಯಲ್ಲಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಕಣಕ್ಕಿಳಿದಿರುವ ಎಎಪಿ ಅಭ್ಯರ್ಥಿ ಕುಮಾರ್ ವಿಶ್ವಾಸ್ ಅವರ ಬಗ್ಗೆಯೂ ಜನ ಕುತೂಹಲಿಗಳಾಗಿ ನೆಟ್ ನಲ್ಲಿ ಜಾಲಾಡಿದ್ದಾರೆ. ಮುಂದಿನ ಸ್ಥಾನದಲ್ಲಿ ನಟಿ, ಮೀರತ್ ಕಾಂಗ್ರೆಸ್ ಅಭ್ಯರ್ಥಿ ನಗ್ಮಾ, ರಾಖಿ ಸಾವಂತ್ ಮುಂತಾದವರು ರಾರಾಜಿಸುತ್ತಿದ್ದಾರೆ.












Click it and Unblock the Notifications