ಅಕ್ಕನ ಜತೆ ಜಗಳ ಮಾಡುತ್ತಿದ್ದ ಮಾವನ ಹತ್ಯೆ ಮಾಡಿದ ಬಾಮೈದ !
ಬೆಂಗಳೂರು, ಫೆಬ್ರವರಿ 15 : ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಕೃತ್ಯಗಳ ಸ್ವರೂಪವೇ ಬದಲಾಗುತ್ತಿದೆ. ಅಕ್ಕನ ಜತೆ ಪದೇ ಪದೇ ಜಗಳ ಮಾಡುತ್ತಿದ್ದ ಎಂಬ ಕಾರಣಕ್ಕೆ ಸ್ವಂತ ಬಾವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬಾಮೈದನೇ ಕೊಲೆ ಮಾಡಿದ್ದಾನೆ. ಈ ಘಟನೆ ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ನಂದಿನಿ ಬಡಾವಣೆ ಕಂಠೀರವ ನಗರ ನಿವಾಸಿ ಅಜೀಮ್ ಉಲ್ಲಾ ಕೊಲೆಯಾದ ವ್ಯಕ್ತಿ. ಖಾದರ್ ಕೊಲೆ ಮಾಡಿ ತಲೆ ಮರಸಿಕೊಂಡಿರುವ ಆರೋಪಿ. ಖಾದರ್ ನ ಅಕ್ಕ ಕೆಲ ವರ್ಷಗಳ ಹಿಂದೆ ಅಜೀಮ್ ಉಲ್ಲಾ ರನ್ನು ಮದುವೆಯಾಗಿದ್ದರು. ದಂಪತಿ ಪದೇ ಪದೇ ಜಗಳ ಮಾಡುತ್ತಿದ್ದರು.
ಖಾಸಗಿ ಟ್ರಾನ್ಸ್ ಪೋರ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಜೀಮ್ ಉಲ್ಲಾ ಭಾನುವಾರ ಕೂಡ ಪತ್ನಿ ಜತೆ ಜಗಳ ತೆಗೆದಿದ್ದಾರೆ. ಈ ವಿಷಯವನ್ನು ಅಜೀಮ್ ಉಲ್ಲಾ ಪತ್ನಿ ತನ್ನ ತಮ್ಮ ಖಾದರ್ ಗೆ ತಿಳಿಸಿದ್ದರು. ಕೂಲಿನಗರದಲ್ಲಿದ್ದ ಖಾದರ್ ತನ್ನಿಬ್ಬರು ಗೆಳೆಯರ ಸಮೇತ ಅಜೀಮ್ ಉಲ್ಲಾ ಮನೆ ಸಮೀಪ ಬಂದು ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರಿಗೂ ಮಾತು ತಾರಕ್ಕೇರಿ ಜಗಳ ನಡೆದಿದೆ. ಮಾರಕಾಸ್ತ್ರಗಳಿಂದ ಚುಚ್ಚಿ ಅಜೀಮ್ ಉಲ್ಲಾ ನನ್ನು ಬಾಮೈದ ಖಾದರ್ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳೀಯರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು, ನಂದಿನಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ.