ಖರ್ಗೆ ವಿಪಕ್ಷ ನಾಯಕ: ಸಿದ್ದರಾಮಯ್ಯ ಹಾಫ್ ಖುಷ್!
ಬೆಂಗಳೂರು, ಜೂನ್ 3: ಕರ್ನಾಟಕ ಕಾಂಗ್ರೆಸ್ಸಿನ ಅತ್ಯಂತ ನಿಷ್ಠಾವಂತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಖರ್ಗೆ ಅವರು ವಿರೋಧ ಪಕ್ಷದ ನಾಯಕರಾಗಲು ಇನ್ನು ಒಂದೇ ಮೆಟ್ಟಿಲು ಬಾಕಿಯಿದೆ. ಈ ಬೆಳವಣಿಗೆಗಳಿಂದ ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಫ್ ಖುಷ್ ಆಗಿದ್ದು, ನಿರಾಳರಾಗಿದ್ದಾರೆ.
ಪಕ್ಷವು ರಾಹುಲ್ ನಾಯಕತ್ವದಲ್ಲಿ ಹೀನಾಯವಾಗಿ ಸೋತ ಬಳಿಕ ಖರ್ಗೆ ಅವರನ್ನು ವಿರೋಧ ಪಕ್ಷದ ಕುರ್ಚಿಯತ್ತ ಬಿಟ್ಟು ಬಂದಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡಿಗೆ ರಾಜಕೀಯ ಕಾರಣಗಳು ಏನೇ ಇರಬಹುದು ಆದರೆ ಇತ್ತ ಕರ್ನಾಟಕದ ಮಟ್ಟಿಗಂತೂ ಸಿಎಂ ಸಿದ್ದು ಸೇಫ್ ಆಗಿದ್ದಾರೆ, ಜತೆಗೆ ಪಕ್ಷವೂ ಸೇಫ್ ಆಗಿದೆ. (ಕಾಂಗ್ರೆಸ್ಸಿಗೆ ವಿರೋಧ ಪಕ್ಷದ ಸ್ಥಾನಮಾನವೂ ಇಲ್ಲ!)
ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಮೋಘ ಗೆಲುವು ಸಾಧಿಸುತ್ತಿದ್ದಂತೆ ಅದಕ್ಕೆ ಅನೇಕ ಮಂದಿ ತಾವೇ ಕಾರಣಕರ್ತರು ಎಂದು ಬಿಂಬಿಸಿಕೊಂಡರು. ಅದರಲ್ಲಿ ಖರ್ಗೆ ಸಹ ಪ್ರಮುಖರು. ಆದರೆ ಹೈಕಮಾಂಡ್ ಮಣೆ ಹಾಕಿದ್ದು ಮಾತ್ರ ಸಿದ್ದರಾಮಯ್ಯ ಅವರಿಗೇ. ಅಲ್ಲಿಂದಲೇ ಶುರುವಾಗಿತ್ತು ಖರ್ಗೆ ಮತ್ತು ಸಿದ್ದು ನಡುವಣ ಹಗ್ಗಜಗ್ಗಾಟ.

ಅವಕಾಶ ಸಿಕ್ಕಿದಾಗಲೆಲ್ಲಾ ರಾಜ್ಯದ ಮುಖ್ಯಮಂತ್ರಿಯಾಗಲು ತಮಗೂ ಅರ್ಹತೆಯಿದೆ ಎಂಬುದನ್ನು ಸಿದ್ದರಾಮಯ್ಯ ಕಿವಿಗೆ ಬೀಳುವಂತೆ ಖರ್ಗೆ ಜೋರಾಗಿಯೇ ಹೇಳುತ್ತಿದ್ದರು. ಅದರಲ್ಲೂ ಮೊನ್ನೆ ಲೋಕಸಭೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ತನ್ನ ಸಾರ್ವಭೌಮತ್ವನ್ನು ಕಳೆದುಕೊಳ್ಳುತ್ತಿದ್ದಂತೆ ಸಿದ್ದರಾಮಯ್ಯಗೆ ಖರ್ಗೆ ಮಗ್ಗಲುಮುಳ್ಳಾಗುವುದು ದಿಟ ಎಂದೇ ಎಣಿಸಲಾಗಿತ್ತು. ಆದರೆ ಸದ್ಯಕ್ಕೆ ಸಿದ್ದುಗೆ ಖರ್ಗೆ ಭಯ ದೂರವಾಗಿದ್ದು, ಹಾಫ್ ಖುಷ್ ಆಗಿದ್ದಾರೆ.
ಹಾಗಾದರೆ ಸಿದ್ದು ಫುಲ್ ಖುಷ್ ಆಗಿಲ್ಲವೋ, ಅವರೇಕೆ ಅರ್ಧಕ್ಕೇ ತೃಪ್ತಿಪಟ್ಟಿಕೊಳ್ಳಬೇಕು ಅಂದರೆ ಖರ್ಗೆಯಷ್ಟೇ ಸಿದ್ದುಗೆ ಕಂಟಕವಾಗಿರುವವರು ಡಾ. ಜಿ ಪರಮೇಶ್ವರ್ ಎಂಬ ಮತ್ತೊಬ್ಬ ಬಲಿಷ್ಠ ನಾಯಕ. ಹಾಗಾಗಿಯೇ ಸಿದ್ದು ಇನ್ನೂ ಹಾಫ್ ಖುಷ್ ಆಗಿರುವುದು. ಇದರಿಂದ ಪಾರಾಗಬೇಕೆಂದರೆ ಸದ್ಯಕ್ಕೆ ಪರಮೇಶ್ವರ್ ಅವರಿಗೆ ಡಿಸಿಎಂ ಪೋಸ್ಟ್ ಕೊಡುವುದೊಂದೇ ದಾರಿ. ಇದು ರಾಜಕೀಯದ ಮಾತು. ನೋಡೋಣ, ಇನ್ನೂ ಏನೇನಾಗುತ್ತದೋ?












Click it and Unblock the Notifications