ಮಲ್ಲೇಶ್ವರಂ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ಡೇನಿಯಲ್ ಬಂಧನ
ಬೆಂಗಳೂರು, ಜೂನ್ 13: ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಬಳಿ ಸಂಭವಿಸಿದ್ದ ಬಾಂಬ್ ಸ್ಪೋಟದ ಪ್ರಮುಖ ಆರೋಪಿ ಡೇನಿಯಲ್ ಪ್ರಕಾಶ್ ನನ್ನು ಬೆಂಗಳೂರು ಪೊಲೀಸರು ತಮಿಳುನಾಡಿನಲ್ಲಿ ಸೋಮವಾರ ಬಂಧಿಸಿದ್ದಾರೆ.
ಬೆಂಗಳೂರಿನ ಸಿಸಿಬಿ ವಿಶೇಷ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ತಿರುನಲ್ವೇಲಿಯಲ್ಲಿ ಅಡಗಿದ್ದ ಡೇನಿಯಲ್ ಪ್ರಕಾಶ್ ನನ್ನು ವಶಕ್ಕೆ ಪಡೆಯಲಾಯಿತು. ಈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಕಾಶ್ ಕೈವಾಡ ಇರುವುದು ಸ್ಪಷ್ಟವಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.[ಬಾಂಬ್ ಸ್ಫೋಟ ಹತ್ತಿರದಿಂದ ಕೇಳಿದವರ ಅನುಭವ]

ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇನಿಯಲ್ ಪ್ರಕಾಶ್ ಸೇರಿ ಇಲ್ಲಿ ತನಕ 15 ಜನ ಶಂಕಿತರನ್ನು ಬಂಧಿಸಲಾಗಿದೆ. ಏಪ್ರಿಲ್ 17, 2013 ರಂದು ಬಿಜೆಪಿ ಕಚೇರಿ ಬಳಿ ಸಂಭವಿಸಿದ ಈ ಬಾಂಬ್ ಸ್ಫೋಟದಲ್ಲಿಸಿಇಟಿ ಕೋಚಿಂಗ್ ಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಾದ ರಕ್ಷಿತಾ ಹಾಗೂ ಲೀಶಾ ಸೇರಿದಂತೆ 16 ಮಂದಿ ಗಾಯಗೊಂಡಿದ್ದರು.[ಉಗ್ರರ ಗುರ್ತಿಸಿದ ಆಟೋಚಾಲಕ ಬಹುಮಾನ ಬೇಡವೆಂದ]
ಬಾಂಬ್ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಬಳಸಲಾಗಿತ್ತು. ತಮಿಳುನಾಡು ನೋಂದಣಿ ಸಂಖ್ಯೆಯಿರುವ ಮೋಟ ಬೈಕೊಂದನ್ನು ಕೂಡಾ ಬಳಸಲಾಗಿತ್ತು. ಬೈಕ್ ಮಾಲೀಕ ಕೂಡಾ ಪತ್ತೆಯಾಗಿದ್ದ. ಆದರೆ, ಆ ಬೈಕನ್ನು ದುಷ್ಕೃತ್ಯಕ್ಕೆ ಬಳಸುವ ಸಲುವಾಗಿ ಶಂಕಿತರು ಕದ್ದಿದ್ದರು.

2013ರ ಅಕ್ಟೋಬರ್ ನಲ್ಲಿ ಅನೇಕ ಮಂದಿ ಮೇಲೆ ಚಾರ್ಜ್ ಶೀಟ್ ಹಾಕಲಾಯಿತು. ಬಷೀರ್, ಕಿಚಾನ್ ಬುಹಾರಿ, ಸೇಟ್ ಅಜ್ಗರ್ ಅಲಿ, ರೆಹಮಥುಲ್ಲಾ, ವಲಯಿಲ್ ಹಕೀಮ್, ಸೈಯಲ್ ಸುಲೇಮಾನ್, ಸುಲೇಮಾನ್, ಝುಲ್ಫಿಕರ್ ಅಲಿ, ಮೊಹಮ್ಮದ್ ಸಲೀಂ, ಪೆನ್ನಾ ಇಸ್ಮಾಯಿಲ್, ಬಿಲಾಲ್ ಮಲೀಕ್, ಫಕ್ರುದ್ದೀನ್, ಪ್ರವೈ ಬಾಷಾ ಹಾಗೂ ಅಲಿ ಖಾನ್ ಕುಟ್ಟಿ ಅವರ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿದೆ. ತಮಿಳುನಾಡು ಮೂಲದ ಅಲ್ ಉಮ್ಮಾ ಸಂಘಟನೆಯ ಕೃತ್ಯ ಎಂದು ಕೂಡಾ ಶಂಕಿಸಲಾಗಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications