ವಿಶ್ವದ ಬೃಹತ್ ಗಾಂಧಿ ಪ್ರತಿಮೆ ಬೆಂಗಳೂರಿನಲ್ಲಿ
ಬೆಂಗಳೂರು, ಜೂ. 6 : ರಾಜ್ಯ ಸರ್ಕಾರದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ ಮತ್ತು ವಿಕಾಸಸೌಧ ನಡುವೆ ಧ್ಯಾನಾಸಕ್ತ ಮಹಾತ್ಮಗಾಂಧಿ ಅವರ ಕಂಚಿನ ಪ್ರತಿಮೆ ಸ್ಥಾಪನೆಯಾಗಲಿದೆ. ಶುಕ್ರವಾರ ಸಿಎಂ ಸಿದ್ದರಾಮಯ್ಯ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ವಿಶ್ವದ ಅತಿದೊಡ್ಡ ಧ್ಯಾನಾಸಕ್ತ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಪ್ರತಿಮೆ ಇದಾಗಿದ್ದು, 13 ಅಡಿ ಎತ್ತರದ ಪೀಠ ಹಾಗೂ ಅದರ ಮೇಲೆ 27 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪನೆಯಾಗಲಿದೆ. ಇದಕ್ಕಾಗಿ ಸುಮಾರು 11 ಕೋಟಿ ವೆಚ್ಚವಾಗಲಿದೆ. [ವಿಧಾನಸೌಧ ಮುಂದೆ ಗಾಂಧೀಜಿ ಕಂಚಿನ ಪ್ರತಿಮೆ]

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಈ ಬಗ್ಗೆ ವಿವರ ನೀಡಿದ್ದು, ದೆಹಲಿಯ ಸಂಸತ್ ಭವನದಲ್ಲಿರು ಗಾಂಧಿ ಪ್ರತಿಮೆಯ ಪ್ರತಿಕೃತಿ ಇದಾಗಿದ್ದು, ಆ ಪ್ರತಿಮೆ ನಿರ್ಮಿಸಿದ ದೆಹಲಿ ಮೂಲದ ಸುತಾರ್ ಆರ್ಟ್ಸ್ ಕಂಪನಿ ಇಲ್ಲಿಯೂ ಪ್ರತಿಮೆ ನಿರ್ಮಾಣ ಮಾಡಲಿದೆ ಎಂದು ಹೇಳಿದರು.
ಶುಕ್ರವಾರ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಮೆ ಸ್ಥಾಪನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅ.2ರ ಗಾಂಧಿ ಜಯಂತಿಯಂದು ಈ ಪ್ರತಿಮೆ ಅನಾವರಣಗೊಳ್ಳಲಿದೆ. ಪ್ರತಿಮೆ ನಿರ್ಮಾಣ ಕೆಲಸ ಘಾಜಿಯಾಬಾದ್ ನಲ್ಲಿ ನಡೆಯಲಿದೆ.
ಈಗಾಗಲೇ ಆಂಧ್ರಪ್ರದೇಶ, ಗುಜರಾತ್ ರಾಜ್ಯಗಳ ವಿಧಾನಮಂಡಲ ಆವರಣದಲ್ಲಿ ಧ್ಯಾನಾಸಕ್ತ ಗಾಂಧಿ ಪ್ರತಿಮೆ ಅನಾವರಣಗೊಳಿಸಲಾಗಿದೆ. ಅದೇ ರೀತಿಯ ಪ್ರತಿಮೆಯನ್ನು ವಿಧಾನಸೌಧ-ವಿಕಾಸಸೌಧ ನಡುವೆ ಸ್ಥಾಪಿಸಬೇಕು ಎಂದು 2011 ರಲ್ಲಿ ಪ್ರಸ್ತಾಪಿಸಲಾಗಿತ್ತು.
ವಿಧಾನಸೌಧ-ವಿಕಾಸಸೌಧ ಕಟ್ಟಡಗಳು 66 ಅಡಿ ಎತ್ತರ ಇವೆ. ಎರಡೂ ಕಟ್ಟಡಗಳ ನಡುವಿನ ಅಂತರ 200 ಅಡಿ. ಇವೆಲ್ಲವನ್ನೂ ಅಧ್ಯಯನ ನಡೆಸಿ ವಾಸ್ತು ಶಿಲ್ಪಿಗಳ ಸಲಹೆಯಂತೆ 27 ಅಡಿ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಶಂಕರಮೂರ್ತಿ ಹೇಳಿದರು.












Click it and Unblock the Notifications