ಲೋಕಾಯುಕ್ತದ ಮುಂದೆ ಸಿಎಂ ಸಿದ್ದು ವಿರುದ್ಧದ 43 ದೂರು ಬಾಕಿ
ಬೆಂಗಳೂರು, ಮೇ 24: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ನಲವತ್ಮೂರು ದೂರುಗಳು ಲೋಕಾಯುಕ್ತದ ಮುಂದೆ ಬಾಕಿಯುಳಿದಿವೆ. ಈ ಎಲ್ಲ ದೂರುಗಳು ವಿವಿಧ ಹಂತಗಳಲ್ಲಿ ಬಾಕಿಯಿದ್ದು, ಮಾಹಿತಿ ಹಕ್ಕು ಕಾಯ್ದೆ ಅಡಿ ಹಾಕಿದ್ದ ಅರ್ಜಿಗೆ ಉತ್ತರವಾಗಿ ಲೋಕಾಯುಕ್ತ ಕಚೇರಿಯು ಈ ಮಾಹಿತಿ ನೀಡಿದೆ.
ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಾಗೂ ದುಬಾರಿ ವಾಚ್ ಗೆ ಸಂಬಂಧಿಸಿದ ಹಾಗೆಯೇ ಹೆಚ್ಚಿನ ದೂರುಗಳು ದಾಖಲಾಗಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ಅವರ ವಿರುದ್ಧ ಒಟ್ಟು ಐವತ್ತಾರು ದೂರುಗಳು ದಾಖಲಾಗಿವೆ. ಹದಿಮೂರು ಪ್ರಕರಣಗಳಲ್ಲಿ ಸಾಕ್ಷ್ಯಾಧಾರದ ಕೊರತೆ ಕಾರಣಕ್ಕೆ ಮುಕ್ತಾಯವಾಗಿವೆ. ಆ ಪೈಕಿ ಒಂದು ಪ್ರಕರಣ ಹಾಗೇ ಕೈಬಿಡಲಾಗಿದೆ.

ರಾಮಮೂರ್ತಿ ಗೌಡ ಎಂಬುವವರೇ ಸಿದ್ದರಾಮಯ್ಯ ವಿರುದ್ಧ ಹದಿಮೂರು ದೂರುಗಳನ್ನು ದಾಖಲಿಸಿದ್ದು, ಆರ್ ಟಿಐ ಅಡಿಯಲ್ಲಿ ಪ್ರಕರಣದ ಸದ್ಯದ ಸ್ಥಿತಿಯ ಬಗ್ಗೆ ಕೇಳಿದ್ದಾರೆ. ಇನ್ನು ಇಪ್ಪತ್ತೆರಡು ದೂರುಗಳು ಪ್ರಾಥಮಿಕ ಹಂತದಲ್ಲಿವೆ. ಇನ್ನು ಸಿದ್ದಲಿಂಗೇಗೌಡ ಎಂಬಾತ ಸಿದ್ದರಾಮಯ್ಯ್ ವಿರುದ್ಧ ಮೂವತ್ತೊಂದು ದೂರು ದಾಖಲಿಸಿದ್ದಾರೆ.
ಹಲವು ದೂರುಗಳು ಇಲಾಖೆ ಹಂತದಲ್ಲೇ ಇವೆ. ಈ ಇಲಾಖೆಗಳು ಲೋಕಾಯುಕ್ತ ಕೇಳಿರುವ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಬೇಕಿದೆ.












Click it and Unblock the Notifications