ಬೆಂಗಳೂರು : ಪ್ರೀತಿಸಲು ನಿರಾಕರಿಸಿದ ಗಗನಸಖಿ ಕಿವಿ ಕಟ್!
ಬೆಂಗಳೂರು, ಮೇ 16 : ಗಗನಸಖಿ ಪ್ರೀತಿಸಲು ನಿರಾಕರಿಸಿದ ಕಾರಣ ಆಕೆಯ ಕಿವಿಯನ್ನು ಕತ್ತರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆದಿದೆ.
ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಅಜಯ್ ಅಲಿಯಾದ್ ಜಾಕಿ ಗಗನಸಖಿ ಕಿವಿ ಕತ್ತರಿಸಿರುವ ಆರೋಪಿ. ಇಂಡಿಗೋ ಏರ್ಲೈನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಗಗನಸಖಿಯನ್ನು ಪ್ರೀತಿಸುವಂತೆ ಜಾಕಿ ಪೀಡಿಸುತ್ತಿದ್ದ, ಆಕೆ ನಿರಾಕರಿಸಿದ್ದಳು.
ಮೇ 12ರಂದು ಹೆಬ್ಬಾಳ ಬಳಿ ಕ್ಯಾಬ್ನಲ್ಲಿ ಗಗನಸಖಿ ಹೋಗುತ್ತಿದ್ದಾಗ ಚಾಕು ಹಿಡಿದು ಜಾಕಿ ಕಾರು ಹತ್ತಿದ್ದಾನೆ. ಚಾಲಕನಿಗೆ ಚಾಕುವಿನಿಂದ ಚುಚ್ಚಿದ ಬಳಿಕ, ಪ್ರೀತಿಸುವಂತೆ ಗಗನಸಖಿಯನ್ನು ಕೇಳಿದ್ದಾನೆ. ಆಕೆ ನಿರಾಕರಿಸಿದಾಗ ಆಕೆಯ ಕಿವಿ ಕತ್ತರಿಸಿದ್ದಾನೆ.

ಪ್ರಕರಣದ ವಿವರ : ಗಗನಸಖಿಗೆ ಫೆಬ್ರವರಿ ತಿಂಗಳಿನಿಂದ ಪ್ರೀತಿಸುವಂತೆ ಜಾಕಿ ಕಾಟ ಕೊಡುತ್ತಿದ್ದ. ಮನೆಯಲ್ಲಿ ವಿಷಯವನ್ನು ಆಕೆ ತಿಳಿಸಿದ್ದಳು. ಮನೆಯವರು ಜಾಕಿಗೆ ವಾರ್ನಿಂಗ್ ಕೊಟ್ಟಿದ್ದರು. ಇದರಿಂದ ಸಿಟ್ಟಿಗೆದ್ದ ಜಾಕಿ ಗಗನಸಖಿ ಮನೆಯ ಕಾರಿನ ಗಾಜು ಒಡೆದು ಹಾಕಿದ್ದ, ಬೈಕ್ಗೆ ಹಾನಿ ಮಾಡಿದ್ದ.
ಜಾಕಿ ವಿರುದ್ಧ ಜಾಲಹಳ್ಳಿ ಪೊಲೀಸ್ ಠಾಣೆಗೆ ಗಗನಸಖಿ ಮನೆಯವರು ದೂರು ನೀಡಿದ್ದರು. ಪೊಲೀಸರು ಜಾಕಿ ವಿರುದ್ಧ ರೌಡಿ ಶೀಟರ್ ತೆರೆದಿದ್ದರು. ಇದರಿಂದಾಗಿ ಮತ್ತಷ್ಟು ಕೋಪಗೊಂಡಿದ್ದ ಆತ, ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ.
ಮೇ 12ರಂದು ಗಗನಸಖಿ ವಿಮಾನ ನಿಲ್ದಾಣಕ್ಕೆ ಕ್ಯಾಬ್ನಲ್ಲಿ ಹೋಗುತ್ತಿದ್ದಳು. ಇದನ್ನು ತಿಳಿದ ಜಾಕಿ ಹೆಬ್ಬಾಳ ಬಳಿ ಬಲವಂತವಾಗಿ ಕಾರು ಹತ್ತಿದ್ದ. ಚಾಲಕನಿಗೆ ಬೆದರಿಸಿ ಕಾರು ಓಡಿಸುವಂತೆ ಹೇಳಿದ್ದ. ಆತ ನಿರಾಕರಿಸಿದಾಗ ಚಾಕುವಿನಿಂದ ಭುಜಕ್ಕೆ ಚುಚ್ಚಿದ್ದ.
ತನ್ನನ್ನು ಪ್ರೀತಿಸು, ಕೊಟ್ಟಿರುವ ದೂರು ವಾಪಸ್ ಪಡೆ ಎಂದು ಗಗನಸಖಿ ಮುಂದೆ ಬೇಡಿಕೆ ಇಟ್ಟಿದ್ದ. ಆಕೆ ನಿರಾಕರಿಸಿದಾಗ ಆಕೆಯ ಕಿವಿಯನ್ನು ಕತ್ತರಿಸಿದ್ದ. ಗಗನಸಖಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಾಕಿಗಾಗಿ ಹುಡುಕಾಟ ನಡೆದಿದೆ.












Click it and Unblock the Notifications