ಬೆಂಗಳೂರು : ಮುಷ್ಕರ ವಾಪಸ್ ಪಡೆದ ಲಾರಿ ಮಾಲೀಕರು
ಬೆಂಗಳೂರು, ಜ.16 : ಬೆಂಗಳೂರು ನಗರದೊಳಗೆ ಬೆಳಗಿನ ಹೊತ್ತು ಲಾರಿಗಳ ಸಂಚಾರಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿ ಲಾರಿ ಮಾಲೀಕರ ಸಂಘ ನಡೆಸಬೇಕಿದ್ದ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ. ಲಾರಿಗಳ ಸಂಚಾರಕ್ಕೆ ಅನುಮತಿ ನೀಡುವುದಾಗಿ ಪೊಲೀಸರು ಭರವಸೆ ನೀಡಿರುವ ಹಿನ್ನಲೆಯಲ್ಲಿ ಮುಷ್ಕರ ವಾಪಸ್ ಪಡೆಯಲಾಗಿದೆ.
ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್ ಷಣ್ಮುಗಪ್ಪ ಅವರು, ಜನವರಿ 16ರಿಂದ ಲಾರಿ ಮಾಲೀಕರು ಮುಷ್ಕರ ನಡೆಸಲು ತೀರ್ಮಾನಿಸಿದ್ದರು. ಆದರೆ,ಮುಷ್ಕರವನ್ನು ವಾಪಸ್ ಪಡೆಯಲಾಗಿದೆ ಎಂದು ಹೇಳಿದ್ದಾರೆ. [ಜ.16ರಿಂದ ಬೆಂಗಳೂರಿನಲ್ಲಿ ಲಾರಿ ಮುಷ್ಕರ]

ಶುಕ್ರವಾರ ಹೆಚ್ಚುವರಿ ಪೊಲೀಸ್ ಆಯುಕ್ತರೊಂದಿಗೆ ಲಾರಿ ಮಾಲೀಕರು ಮತ್ತು ಏಜೆಂಟ್ಸ್ ಒಕ್ಕೂಟಗಳ ಸಂಘದ ಪದಾಧಿಕಾರಿಗಳು ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ನಗರ ಪ್ರದೇಶಿಸಲು ಲಾರಿಗಳಿಗೆ ವಿಧಿಸಿದ್ದ ನಿರ್ಬಂಧವನ್ನು ಸಡಿಲಗೊಳಿಸಲು ಪೊಲೀಸರು ಒಪ್ಪಿಗೆ ನೀಡಿದ್ದಾರೆ. [ಲಾರಿಗಳು ಹಗಲು ಬೆಂಗಳೂರು ಪ್ರವೇಶಿಸುವಂತಿಲ್ಲ]
ಬೆಳಗ್ಗೆ 11 ರಿಂದ ಸಂಜೆ 4ರ ವರೆಗೆ ನಗರ ಪ್ರದೇಶಕ್ಕೆ ಲಾರಿಗಳು ಪ್ರವೇಶಿಸಲು ಅನುಮತಿ ನೀಡುವುದಾಗಿ ಪೊಲೀಸರು ಮಾಲೀಕರಿಗೆ ಭರವಸೆ ನೀಡಿದ್ದಾರೆ. ಆದ್ದರಿಂದ ಇಂದು ಮಧ್ಯರಾತ್ರಿಯಿಂದ ನಡೆಸಬೇಕಿದ್ದ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ.
ಡಿ.22ರಂದು ಆದೇಶ ಹೊರಡಿಸಿದ್ದ ಬೆಂಗಳೂರು ನಗರ ಪೊಲೀಸರು, ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಮೂರು ಟನ್ಗಿಂತ ಹೆಚ್ಚು ಭಾರದ ಸರಕು ಸಾಗಿಸುವ ವಾಹನಗಳ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದರು. ರಾತ್ರಿ 10ರ ನಂತರ ಬೆಳಗ್ಗೆ 6 ಗಂಟೆಯೊಳಗೆ ನಗರದೊಳಗೆ ಲಾರಿಗಳು ಸಂಚರಿಸಬಹುದಾಗಿದೆ ಎಂದು ಹೇಳಿದ್ದರು. ಇದನ್ನು ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು.












Click it and Unblock the Notifications