Chetan Ahimsa: 300 ಸ್ಥಾನ ಗಳಿಸದ ಬಿಜೆಪಿಗೆ ನಟ ಚೇತನ್ ಅಹಿಂಸಾ ಹೇಳಿದ್ದೇನು?
ಬೆಂಗಳೂರು, ಜೂನ್. 04: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಈಗಾಗಲೇ ಬಿಜೆಪಿ ನೇತೃತ್ವದ ಎನ್ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟಗಳ ನಡುವೆ ಸಕತ್ ಪೈಪೋಟಿ ಕಾಣಿಸುತ್ತಿದೆ. ಇನ್ನೂ ಕೂಡ ಯಾವುದೇ ಪಕ್ಷ 300 ಸ್ಥಾನಗಳನ್ನು ತನ್ನದಾಗಿಸಿಕೊಂಡಿಲ್ಲ. ಈ ಸಮಯದಲ್ಲೇ ನಟ ಚೇತನ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ.
300 ಸ್ಥಾನಗಳನ್ನು ಪಡೆದು ಸ್ವತಂತ್ರವಾಗಿ ಅಧಿಕಾರ ಹಿಡಿಯುವ ಆಸೆಯಲ್ಲಿದ್ದ ಬಿಜೆಪಿಗೆ ಮುಖಭಂಗವಾಗಿದೆ. 400 ಸ್ಥಾನಗಳನ್ನು ಗಳಸಿ ಎನ್ಡಿಎ ಅಧಿಕಾರಕ್ಕೆ ಬರಲಿದೆ ಎಂದು ಹೇಳಿಕೊಂಡಿತ್ತು. ಆದರೆ, ಅದ್ಯಾವುದು ಆಗಿಲ್ಲ. ಹೀಗಾಗಿಯೇ ನಟ ಚೇತನ್ ಅಹಿಂಸಾ 'ಇದೊಂದು ಬಿಜೆಪಿಗೆ ದೊಡ್ಡ ಪಾಠ' ಎಂದು ಹೇಳಿಕೊಂಡಿದ್ದಾರೆ.

"ನಿರೀಕ್ಷೆಯಂತೆ ಮೋದಿ 3ನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ಆದರೆ, ಸಕಾರಾತ್ಮಕವಾಗಿ, ಬಿಜೆಪಿಗೆ ಅಧಿಕಾರಕ್ಕೆ ಬರಲು ಎನ್ಡಿಎ ಅಗತ್ಯವಿದೆ. ಇದೊಂದು ಬಿಜೆಪಿಗೆ ದೊಡ್ಡ ಪಾಠ. ಇದರರ್ಥ ಬಿಜೆಪಿ ಹಿಂದುತ್ವ ಮತ್ತು 'ಒಂದು ರಾಷ್ಟ್ರ, ಒಂದು ಚುನಾವಣೆ' ಯಂತಹ ಒಕ್ಕೂಟ ವಿರೋಧಿ ನೀತಿಗಳನ್ನು ಅಷ್ಟು ಸುಲಭವಾಗಿ ಜಾರಿಗೆ ತರುವುದಿಲ್ಲ. ಇದು ಒಳ್ಳೆಯದೇ. ಇದು ಮೋದಿಯವರ ವಿಜಯವಲ್ಲ, ಪ್ರಜಾಪ್ರಭುತ್ವದ ವಿಜಯ" ಎಂದು ಹೇಳಿದ್ದಾರೆ.
ಇನ್ನು, ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿರುವ ಭೀಮ್ ಆರ್ಮಿ ಪಾರ್ಟಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರಾವಣ ಅವರಿಗೆ ಶುಭ ಹಾರೈಸಿದ್ದಾರೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಓಂ ಕುಮಾರ್ ಅವರು ಸಮಾಜವಾದಿ ಪಕ್ಷದ (ಎಸ್ಪಿ) ಮನೋಜ್ ಕುಮಾರ್ ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಸುರೇಂದ್ರ ಪಾಲ್ ಸಿಂಗ್ಗಿಂತ 1,51,473ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಚಂದ್ರಶೇಖರ್ ಆಜಾದ್ ರಾವಣ ಗೆಲುವು ದಾಖಲಿಸಿದ್ದಾರೆ.
"N.D.A. ಮತ್ತು I.N.D.I.A ಎರಡನ್ನೂ ಸೋಲಿಸಿ ಉತ್ತರ ಪ್ರದೇಶದ ನಗೀನಾ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾದ ಬಹುಜನ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರಿಗೆ ಅಭಿನಂದನೆಗಳು. ಆಜಾದ್ ಅವರ 'ಭೀಮ್ ಆರ್ಮಿ' ಕರ್ನಾಟಕದಲ್ಲಿ ಬಲವಾದ ಜಾತಿ ವಿರೋಧಿ ಕೆಲಸವನ್ನು ಮಾಡಿದೆ ಮತ್ತು ಇದು ನಮ್ಮ ಸಮಾನತಾವಾದಿ ದೃಷ್ಟಿಕೋನವನ್ನು ಮುಂದುವರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications