ಕುರುಬ ಸಮಾವೇಶದಿಂದ ಟ್ರಾಫಿಕ್ ಜಾಮ್, ಬದಲಿ ಮಾರ್ಗ ಏನಿದೆ?
ಬೆಂಗಳೂರು, ಫೆಬ್ರವರಿ 7: ರಾಷ್ಟ್ರೀಯ ಹೆದ್ದಾರಿ 4 ರ ಮಾದಾವರ ಸಮೀಪದ ಬಿಐಇಸಿಯಲ್ಲಿ ಕುರುಬ ಜನಾಂಗದ ಸಮಾವೇಶ ಜಾರಿಯಲ್ಲಿದೆ. ಈ ಸಮಾವೇಶಕ್ಕೆ ನಾಡಿನ ವಿವಿಧೆಡೆಗಳಿಂದ ಲಕ್ಷಾಂತರ ಮಂದಿ ಆಗಮಿಸುತ್ತಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.
ಕಾಗಿನೆಲೆ ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ಸಮಾವೇಶವಿದ್ದರೂ ಮುಂಜಾನೆ 8 ಗಂಟೆ ವೇಳೆಗೆ ಸಾವಿರಾರು ವಾಹನಗಳು ಸುಮಾರು 2-3 ಕಿ.ಮೀ ತನಕ ನಿಂತಲ್ಲೆ ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿದೆ. ಬೆಂಗಳೂರು -ತುಮಕೂರು ರಸ್ತೆಯ ಒಂದು ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.
ಕುರುಬ ಜನಾಂಗವನ್ನು ಪರಿಶಿಷ್ಟ ಜನಾಂಗ(ಎಸ್ಟಿ) ಎಂದು ಪರಿಗಣಿಸಿ ಸೂಕ್ತ ಮೀಸಲಾತಿ ನೀಡಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ಶ್ರೀಗಳು ಜನವರಿ 15 ರಂದು ಕಾಗಿನೆಲೆಯಿಂದ ಪಾದಯಾತ್ರೆ ಆರಂಭಿಸಿದ್ದರು. ಫೆಬ್ರವರಿ 4 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಾದಯಾತ್ರೆ ಅಂತ್ಯಗೊಂಡಿದ್ದು, ಫೆ.7ರಂದು ಮಾದಾವರದಲ್ಲಿ ಸಮಾರೋಪ ಸಮಾರಂಭ ನಡೆಯುತ್ತಿದೆ.
ಸಮಾವೇಶದ ಭದ್ರತೆಗಾಗಿ 2000 ಪೊಲೀಸರ ನಿಯೋಜನೆ ಮಾಡಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಭಾರೀ ವಾಹನಗಳಿಗೆ ಮಾರ್ಗ ಬದಲಾಯಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತಾರ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣವರ್ ಹೇಳಿದ್ದಾರೆ.
ಬೆಂಗಳೂರು ನಗರದಿಂದ ತುಮಕೂರು ರಸ್ತೆ ಕಡೆಗೆ
ಬೆಂಗಳೂರು ನಗರದಿಂದ ತುಮಕೂರು ರಸ್ತೆ ಹಾಗೂ ನೆಲಮಂಗಲ ಮೂಲಕ ಹಾಸನ ರಸ್ತೆಗೆ ತೆರಳುವವರಿಗೆ: ಮಾಗಡಿ ರಸ್ತೆ ಬಳಸಲು ಸೂಚಿಸಲಾಗಿದೆ. ಮಾರ್ಗಹೀಗಿದೆ: ಬೆಂಗಳೂರು ನಗರ -ಮಾಗಡಿ ರಸ್ತೆ - ಮಾಗಡಿ - ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಮೂಲಕ ಹಾಸನ ರಸ್ತೆ ತಲುಪಬಹುದು. ಇನ್ನೊಂದು ಮಾರ್ಗ: ಬೆಂಗಳೂರು ನಗರ -ಮಾಗಡಿ ರಸ್ತೆ - ಮಾಗಡಿ - ಗುಡೆಮಾರನಹಳ್ಳಿ ಹ್ಯಾಂಡ್ - ದಾಬಸ್ಪೇಟೆ ಮುಖಾಂತರ ತುಮಕೂರು ರಸ್ತೆ ತಲುಪಬಹುದಾಗಿದೆ.
ತುಮಕೂರು ಮೂಲಕ ಹೈದರಾಬಾದ್ ರಸ್ತೆ
ಈ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಬದಲಿ ಮಾರ್ಗ ಕಲ್ಪಿಸಿದ್ದಾರೆ. ತುಮಕೂರು ಮೂಲಕ ಹೈದರಾಬಾದ್ ರಸ್ತೆ ತಲುಪಬೇಕಾದರೆ ದಾಬಸ್ಪೇಟೆಯಿಂದ ದೊಡ್ಡಬಳ್ಳಾಪುರದ ಕಡೆಗೆ ವಾಹನ ತಿರುಗಿಸಿ ನಂತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೂಲಕ ತಲುಪಬಹುದಾಗಿದೆ.
ಇದೇ ರೀತಿ ಹೈದರಾಬಾದ್ ರಸ್ತೆಯಿಂದ ತುಮಕೂರು ರಸ್ತೆ ಪ್ರವೇಶಿಸುವವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ - ದೊಡ್ಡಬಳ್ಳಾಪುರ - ಡಾಬಸ್ಪೇಟೆ ಮಾರ್ಗವಾಗಿ ತುಮಕೂರು ರಸ್ತೆಯನ್ನು ತಲುಪಬೇಕು.
ತುಮಕೂರು ರಸ್ತೆಯಿಂದ ಮೈಸೂರು ರಸ್ತೆ ಮಾರ್ಗ
ತುಮಕೂರು ರಸ್ತೆಯಿಂದ ಹೊಸೂರು ಹಾಗೂ ಮೈಸೂರು ರಸ್ತೆ ಮಾರ್ಗ ಪ್ರವೇಶಿಸಲು ಬಯಸುವ ವಾಹನ ಸವಾರರು ದಾಬಸ್ಪೇಟೆಯಿಂದ ಮಾಗಡಿ ಕಡೆಗೆ ತೆರಳಿ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್, ಮಾಗಡಿ - ಮಾಗಡಿ ರಸ್ತೆ ನೈಸ್ ರಸ್ತೆ ಮೂಲಕ ಹೊಸೂರು, ಮೈಸೂರು ರಸ್ತೆಯನ್ನು ಸಂಪರ್ಕಿಸಬಹುದು.
Recommended Video
ಹೊಸೂರು ರಸ್ತೆಯಿಂದ ತುಮಕೂರು ರಸ್ತೆ ಪ್ರವೇಶ
ಮೈಸೂರು ಹಾಗೂ ಹೊಸೂರು ರಸ್ತೆಯಿಂದ ತುಮಕೂರು ರಸ್ತೆ ಪ್ರವೇಶಿಸಲು ಬಯಸುವವರು ನೈಸ್ ಜಂಕ್ಷನ್ - ಮಾಗಡಿ ರಸ್ತೆ ನೈಸ್ ರಸ್ತೆ - ಮಾಗಡಿ - ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ - ಡಾಬಸ್ಪೇಟೆ ಮಾರ್ಗವಾಗಿ ತುಮಕೂರು ತಲುಪಬೇಕು. ಬೆಂಗಳೂರಿಗೆ ನೇರ ತಲುಪಬೇಕಾದ ಭಾರೀ ವಾಹನಗಳು ಸಂಜೆಯವರೆಗೂ ದಾಬಸ್ಪೇಟೆ ಪಾರ್ಕಿಂಗ್ ಸ್ಥಳದಲ್ಲಿ ಕಾಯಬೇಕಾಗಿದ್ದು, ಸಮಾವೇಶ ಮುಗಿದ ಬಳಿಕ ನಗರ ಪ್ರವೇಶ ಅವಕಾಶ ಸಿಗಲಿದೆ.