ಕೆಎಂಎಫ್ ನಂತೆ ಬ್ರಾಂಡೆಡ್ ಮಟನ್ ಸ್ಟಾಲ್ ಸ್ಥಾಪನೆ: ಸಿದ್ದರಾಮಯ್ಯ
ಬೆಂಗಳೂರು, ಸೆ. 30: ಕೆಎಂಎಫ್ ನಂದಿನಿ ಬ್ರ್ಯಾಂಡ್ ನಂತೆ ಕುರಿ ಮಾಂಸ ಎಲ್ಲೆಡೆ ಸಿಗುವಂತೆ ಮಾಡಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಯೋಜನೆ ರೂಪಿಸಿರುವ ಯೋಜನೆ ಕರ್ನಾಟಕ ಸರ್ಕಾರ ಸಂಪೂರ್ಣ ಒಪ್ಪಿಗೆ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಘೋಷಿಸಿದ್ದಾರೆ. ಈ ಮೂಲಕ ಜಿಲ್ಲೆ ಜಿಲ್ಲೆಗಳಲ್ಲಿ ಬ್ರಾಂಡೆಡ್ ಮಟನ್ ಸ್ಟಾಲ್ ಗಳನ್ನು ಸರ್ಕಾರ ಆರಂಭಿಸಲಿದೆ.
ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಕುರಿ ಮಾಂಸದ ಅಂಗಡಿಗಳನ್ನು ಆರಂಭಿಸುವುದರ ಜೊತೆಗೆ ಕುರಿಗಳ ತಳಿ ಅಭಿವೃದ್ಧಿ, ಮಾಂಸ ಮಾರಾಟ ಕೇಂದ್ರ, ಉದ್ಯೋಗ ಅವಕಾಶ ಹೆಚ್ಚಳ ಎಲ್ಲವೂ ನಮ್ಮ ಗಮನದಲ್ಲಿದೆ ಎಂದು ನಿಗಮದ ಚೇರ್ಮನ್ ಪಂಡಿತರಾವ್ ಚಿದ್ರಿ ಘೋಷಿಸಿದ್ದಾರೆ.[ಕುರಿ ಮಾಂಸ ಪ್ರಿಯರಿಗೆ ಸುದ್ದಿ: ಜಿಲ್ಲೆ ಜಿಲ್ಲೆಗಳಲ್ಲಿ ಮಟನ್ ಕೇಂದ್ರ!]

ಮಟನ್ ಭಾಗ್ಯ: ಹೆಬ್ಬಾಳದಲ್ಲಿ ಪಶು ಭವನ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕುರಿ ಮಾಂಸ ಮಾರಾಟಕ್ಕೆ ಸಹಕಾರಿ ವ್ಯವಸ್ಥೆ ತರಲು ಕೆಎಂಎಫ್ ಮಾದರಿಯಲ್ಲಿ ಮಟನ್ ಫೆಡರೇಷನ್ ಸ್ಥಾಪಿಸುವ ಅಲೋಚನೆ ಇದೆ. ಸೊಸೈಟಿ ಸ್ಥಾಪನೆಗೆ ಅಗತ್ಯ ನೀತಿ ರೂಪಿಸಿ ಎಂದು ಅಧಿಕಾರಿಗಳಿಗೆ ಸಿಎಂ ನಿರ್ದೇಶಿಸಿದರು.
ಪಶುಪಾಲನೆ, ಕುರಿಗಾಹಿಗಳಿಗಳಿಗೆ ಅವಶ್ಯವಿರುವ ಹುಲ್ಲುಗಾವಲನ್ನು ಅಭಿವೃದ್ಧಿ ಪಡಿಸುತ್ತೇವೆ ಮತ್ತು ಅವುಗಳ ಒತ್ತುವರಿ ತಡೆಯಲು ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತೇನೆ. ಕುರಿಗಾಹಿಗಳ ಕುರಿ ರಕ್ಷಣೆಗೆ ಗನ್ ನೀಡಲು ಯೋಜನೆಯೂ ಇದೆ. ಸತ್ತ ಕುರಿಗಳ ಜೊತೆಗೆ ರೋಗದಿಂದ ಸತ್ತ ಕುರಿಗಳಿಗೂ ಪರಿಹಾರ ಧನ ನೀಡಲಾಗುವುದು ಎಂದರು.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಇನ್ನಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದು, ರಾಜ್ಯದಲ್ಲಿರುವ ಸುಮಾರು 300ಕ್ಕೂ ಅಧಿಕ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘಗಳನ್ನು ಒಗ್ಗೂಡಿಸಿ, ನೋಂದಣಿಗೆ ಚಾಲನೆ ನೀಡಲು ಮುಂದಾಗಿದೆ. ಈ ಸಂಘಗಳ ಅಭಿವೃದ್ಧಿಗೆ ಸರ್ಕಾರದಿಂದ 25 ಕೋಟಿ ರು ಅನುದಾನ ಸಿಕ್ಕಿದೆ. ಸುಮಾರು 18ಕ್ಕೂ ಅಧಿಕ ಆಂಬ್ಯುಲೆನ್ಸ್ ಗಳನ್ನು ರಸ್ತೆಗಿಳಿಸಲಾಗಿದ್ದು, ಕುರಿ/ಮೇಕೆಗಳ ಆರೋಗ್ಯ ರಕ್ಷಣೆಗೆ ಕ್ರಮ ಜರುಗಿಸಲಾಗಿದೆ ನಿಗಮದ ಚೇರ್ಮನ್ ಪಂಡಿತರಾವ್ ಚಿದ್ರಿ ಹೇಳಿದ್ದಾರೆ.












Click it and Unblock the Notifications