ಗುಡ್ನ್ಯೂಸ್: ಬೆಂಗಳೂರು-ಸಿಗಂದೂರಿಗೆ KSRTC ಸ್ಲೀಪರ್ ಬಸ್ ಸೇವೆ! ಟಿಕೆಟ್ ದರ, ವೇಳಾಪಟ್ಟಿ ಹೀಗಿದೆ
ಬೆಂಗಳೂರು, ಆಗಸ್ಟ್ 22: ಬಹುನಿರೀಕ್ಷೆಯ ಮಲೆನಾಡಿನ ಸಿಗಂದೂರು ಚೌಡೇಶ್ವರಿ ದೇವಾಲಯ ಸಂಪರ್ಕಿಸುವ ಕೇಬಲ್ ಬ್ರಿಡ್ಜ್ ಉದ್ಘಾಟನೆಗೊಂಡಿದೆ. ಈಗಾಗಲೇ ಸಾಕಷ್ಟು ಭಕ್ತರು ಭೇಟಿ ನೀಡುತ್ತಿದ್ದಾರೆ. ಹೊಸ ಬ್ರಿಡ್ಜ್ ಕಣ್ತುಂಬಿಕೊಳ್ಳುತ್ತಿದ್ದಾರೆ. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನಾನ್ ಎಸಿ ಸ್ಲೀಪರ್ ಸಾರಿಗೆ ಬಸ್ ಕಾರ್ಯಾಚರಣೆ ಆರಂಭಿಸಿದೆ ಎಂದು ನಿಗಮದ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ. ಹಾಗಾದರೆ ಸಮಯ, ದಿನಾಂಕ, ಟಿಕೆಟ್ ದರ, ವೇಳಾಪಟ್ಟಿ ತಿಳಿಯಲು ಮುಂದೆ ಓದಿ..
ರಾಜ್ಯ ರಾಜಧಾನಿ ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಯ ಸಿಗಂದೂರಿಗೆ ಆಗಸ್ಟ್ 22ರಿಂದ ಈ ಮಾರ್ಗಗಳ ಮೂಲಕ ನಾನ್ ಎಸಿ ಸ್ವೀಪರ್ ಸಾರಿಗೆ ಬಸ್ ಕಾರ್ಯಾಚರಣೆ ಆರಂಭಿಸಿದೆ. ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಈ ಸೇವೆ ನೀಡಲಾಗುತ್ತಿದೆ. ಬೆಂಗಳೂರು-ಸಿಗಂದೂರು ವಯಾ ಚಿತ್ರದುರ್ಗ, ಹೊಳಲ್ಕೆರೆ, ಚನ್ನಗಿರಿ, ಶಿವಮೊಗ್ಗ ಮಾರ್ಗದಲ್ಲಿ ನಾನ್ ಎಸಿ ಸ್ವೀಪರ್ ಸಾರಿಗೆ ಸೇವೆ ನೀಡಲಿದೆ. ಈ ಊರುಗಳಲ್ಲಿ ಈ ಬಸ್ಗೆ ನಿಲುಗಡೆ ನೀಡುತ್ತದೆ.

ಪ್ರತಿ ದಿನ ಬೆಂಗಳೂರಿನಿಂದ ಬೆಂಗಳೂರಿನಿಂದ ಸಿಗಂದೂರಿಗೆ ಬಸ್ ಸೇವೆ ಲಭ್ಯವಿದೆ. ಪ್ರಯಾಣ ದರ ವಯಸ್ಕರು 950 ರೂಪಾಯಿ ನಿಗದಿ ಮಾಡಲಾಗಿದೆ. ಬೆಂಗಳೂರಿನಿಂದ ರಾತ್ರಿ 21.40 (09.40) ಗಂಟೆಗೆ ಹೊರಡಲಿದೆ. ಸಿಗಂದೂರನ್ನು ಬೆಳಗ್ಗೆ 06.00 ಗಂಟೆಗೆ ತಲುಪುತ್ತದೆ. ಅಲ್ಲಿ ಭಕ್ತರ ದೇವರ ದರ್ಶನ ಪಡೆದು ಪ್ರಯಾಣಿಕರು ರಾತ್ರಿ ಬಸ್ಗೆ ಬೆಂಗಳೂರಿಗೆ ಮರಳಿ ಬರಬಹುದು. ರಾತ್ರಿ ಸಿಗಂದೂರಿನಿಂದ 20.00 (08) ಗಂಟೆಗೆ ಹೊರುಟು, ಮರುದಿನ ಬೆಳಗ್ಗೆ 04.15 ಗಂಟೆಗೆ ಬೆಂಗಳೂರು ತಲುಪಲಿದೆ.
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ, ಜಿಲ್ಲೆಗಳ ಜನರು ಮುಂಗಾರು ಪ್ರವಾಸಕ್ಕೆಂದು ಇಲ್ಲವೇ ಮಲೆನಾಡಿನ ಭಾಗದ ದೇವರ ದರ್ಶನಕ್ಕೆ ಪ್ಲಾನ್ ಮಾಡಿದರೆ ಅಂತವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಅಲ್ಲದೇ ಒಂದು ದಿನ ಪ್ರವಾಸಕ್ಕೆ ಈ ಪ್ರಯಾಣ ಹೇಳಿ ಮಾಡಿಸಿದ್ದಾಗಿದೆ. ಯಾರಾದರೂ ಸಿಗಂದೂರಿಗೆ ತೆರಳಬೇಕೆನ್ನುವವರು ಕೂಡಲೇ KSRTC ಅಧಿಕೃತ ವೆಬ್ಸೈಟ್ಗೆ (www.ksrtc.in) ತೆರಳಿ ಮುಂಗಡ ಟಿಕೆಟ್ ಬುಕ್ಕ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 080-26252625 /7760990100, 7760990560/7760990287 ಈ ಸಂಖ್ಯೆಗೆ ಸಂಪರ್ಕಿಸಬಹುದು.












Click it and Unblock the Notifications