ವೋಟಿಗಾಗಿ ಮಾತ್ರ ಹಿಂದೂ, ಹೆಗಡೆಗೆ ಕೃಷ್ಣ ಬೈರೆಗೌಡ ತಿರುಗೇಟು
ಬೆಂಗಳೂರು, ನವೆಂಬರ್ 18 : 'ವೋಟಿಗಾಗಿ ಯಾರು ಬೇಕೋ ಅವರ ಬೂಟ್ ಸಹ ನೆಕ್ಕುವ ಸ್ಥಿತಿಗೆ ಸಿದ್ದರಾಮಯ್ಯ ತಲುಪಿದ್ದಾರೆ' ಎನ್ನುವ ಕೇಂದ್ರ ಕೌಶಲ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಅವರ ಅಸಭ್ಯ ಮಾತುಗಳನ್ನು ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ ಖಂಡಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, " ಬಿಜೆಪಿ ನಾಯಕರು ಸಂಸ್ಕಾರವನ್ನೇ ಮರೆತು ಮಾತನಾಡುತ್ತಿದ್ದಾರೆ. ಬಿಜೆಪಿ ಹಿಂದೂ ಧರ್ಮವನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದು, ಕೇವಲ ಹೆಸರಿಗೆ ಮಾತ್ರ ಹಿಂದೂ ಎಂದು ಹೇಳಿಕೊಳ್ಳುತ್ತಿದೆ. ಆದರೆ ಹಿಂದೂಗಳ ಸಂಸ್ಕೃತಿಯನ್ನು ಅದು ಪಾಲನೆ ಮಾಡುವುದಿಲ್ಲ" ಎಂದು ಕಿಡಿಕಾರಿದರು.

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಸಿದ್ದರಾಮಯ್ಯ ಅವರ ವಿರುದ್ಧ ನೀಡಿರುವ ಹೇಳಿಕೆಗಳು ಅವರ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಇಂತಹವರಿಗೆ ಮಂತ್ರಿಗಿರಿ ನೀಡಿದೆ. ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುವಾಗ ಏನು ಮಾತನಾಡುತ್ತಿದ್ದೇನೆ ಎಂಬುದರ ಬಗ್ಗೆ ಅರಿವಿರಬೇಕು ಎಂದು ತಿರುಗೇಟು ನೀಡಿದರು.
"ಸಿದ್ದರಾಮಯ್ಯ ವೋಟಿನ ಆಸೆಗೆ ಏನಬೇಕಾದ್ರು ಮಾಡುತ್ತಾರೆ. ವೋಟಿಗಾಗಿ ಯಾರು ಬೇಕೋ ಅವರ ಬೂಟ್ ಸಹ ನೆಕ್ಕುವ ಸ್ಥಿತಿಗೆ ತಲುಪಿದ್ದಾರೆ" ಎಂದು ಅನಂತಕುಮಾರ್ ಹೆಗಡೆ ಅವರು ಶುಕ್ರವಾರ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.












Click it and Unblock the Notifications