ಗುರುವಿನ ಆರೋಗ್ಯ ವಿಚಾರಿಸಿದ ಶಿಷ್ಯ- ಎಸ್ಎಂಕೆಗೆ ವಿಶ್ರಾಂತಿ ಅಗತ್ಯವೆಂದ ಡಿಕೆಶಿ
ಬೆಂಗಳೂರು, ಸೆಪ್ಟೆಂಬರ್ 26: ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಮಾಜಿ ಸಿಎಂ ಎಸ್ಎಂ ಕೃಷ್ಣ ಅವರು ಡಿಕೆಶಿವಕುಮಾರ್ ಅವರಿಗೆ ರಾಜಕೀಯ ಗುರು ಎನ್ನಬಹುದು. ಸದ್ಯ ಎಸ್ಎಂ ಕೃಷ್ಣ ಬಿಜೆಪಿ ಪಕ್ಷದಲ್ಲಿದಲ್ಲಿದ್ದರೂ ಡಿಕೆ ಶಿವಕುಮಾರ್ ತಮ್ಮ ಗುರುವನ್ನು ಭೇಟಿಯಾಗುತ್ತಾರೆ. ಇದರ ಜೊತೆಗೆ ಎಸ್ಎಂ ಕೃಷ್ಣ ಮೊಮ್ಮಗನನ್ನೇ ಡಿಕೆಶಿವಕುಮಾರ್ ಮಗಳು ವರಿಸಿದ್ದಾಳೆ. ಇದರಿಂದ ಗುರು ಶಿಷ್ಯರು ಸಂಬಂಧಿಕಾದರು. ಗುರು ಎಸ್ಎಂ ಕೃಷ್ಣರ ಕೃಪಾಶೀರ್ವಾದದಿಂದಲೇ ಡಿ.ಕೆ ಶಿವಕುಮಾರ್ ರಾಜಕೀಯದಲ್ಲಿ ಸಾಕಷ್ಟು ಏಳಿಗೆಯನ್ನು ಹೊಂದಿದ್ದಾರೆ. ಇದರಿಂದ ತಮ್ಮ ಗುರುವನ್ನು ಡಿಕೆ ಶಿವಕುಮಾರ್ ಭೇಟಿಯಾಗಿ ಆರೋಗ್ಯವನ್ನು ವಿಚಾರಿಸಿದ್ದಾರೆ.
ಮೈಸೂರಿಗೆ ತೆರಳಲು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಮಣಿಪಾಲ ಆಸ್ಪತ್ರೆಗೆ ಬೆಳಗ್ಗೆ ಭೇಟಿ ನೀಡಿದ ಶಿವಕುಮಾರ್ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್.ಎಂ. ಕೃಷ್ಣ ಅವರ ಆರೋಗ್ಯದ ಬಗ್ಗೆ ವೈದ್ಯರೊಂದಿಗೆ ಚರ್ಚೆ ನಡೆಸಿದರು. ವೈದ್ಯರು ಎಸ್ಎಂ ಕೃಷ್ಣರವವರಿಗೆ ವಿಶ್ರಾಂತಿಯನ್ನು ಪಡೆದುಕೊಳ್ಳಲು ಸೂಚನೆಯನ್ನು ನೀಡಿದ್ದಾರೆ. ಇದರಿಂದಾಗಿ ಎಸ್ಎಂಕೆ ಬಳಿಯಲ್ಲಿ ಡಿಕೆಶಿಯು ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ.

ಎಸ್ಎಂಕೆ ಪರವಾಗಿ ಡಿಕೆಶಿ ಮನವಿ
"ಎಸ್.ಎಂ ಕೃಷ್ಣ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದು, ಅವರಿಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಅವರ ವಿಶ್ರಾಂತಿಗೆ ಧಕ್ಕೆಯಾಗದಂತೆ ಸದ್ಯ ಯಾರೂ ಅವರ ಭೇಟಿಗೆ ಬರಬಾರದು" ಎಂದು ಶಿವಕುಮಾರ್ ಕೃಷ್ಣ ಅವರ ಪರವಾಗಿ ಮನವಿ ಮಾಡಿದ್ದಾರೆ.

ಸರ್ಕಾರದಲ್ಲಿ ಆಡಳಿತ ನಡೆಸುತ್ತಿಲ್ಲ
ಬಿಜೆಪಿ ಸರ್ಕಾರದಲ್ಲಿ ರೋಗಿಗಳು, ರೈತರು, ಕಾರ್ಮಿಕರಿಗೆ ರಕ್ಷಣೆ ಇಲ್ಲವಾಗಿದೆ. ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂಬಂತೆ ಅದು ವಿಫಲವಾಗಿದೆ. ಕಾನೂನು ಸಚಿವರೇ ಹೇಳಿದ್ದಾರೆ, ನಾವು ಸರ್ಕಾರದಲ್ಲಿ ಆಡಳಿತ ನಡೆಸುತ್ತಿಲ್ಲ, ಕೇವಲ ಸರ್ಕಾರವನ್ನು ತಳ್ಳುತಿದ್ದೇವೆ ಎಂದು. ಹೀಗಾಗಿ ಈ ಸರ್ಕಾರದಿಂದ ಜನರ ರಕ್ಷಣೆ ಅಸಾಧ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿನ್ನೆಯ ಆಂಬುಲೆನ್ಸ್ ಸೇವೆ ಸ್ಥಗಿತ ವಿಚಾರವಾಗಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸಿಎಂ ಆದವರು ಸರ್ಕಾರದ ಮುಖ್ಯಸ್ಥ
ಕಾಂಗ್ರೆಸ್ ಲಿಂಗಾಯತ ಸಿಎಂ ಟಾರ್ಗೆಟ್ ಮಾಡುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, "ಮುಖ್ಯಮಂತ್ರಿ ಬೊಮ್ಮಾಯಿ ಕೇವಲ ಲಿಂಗಾಯತ ಜಾತಿ ಮೇಲೆ ಸಿಎಂ ಆಗಿದ್ದಾರಾ? ಸಂವಿಧಾನದ ಪ್ರಕಾರ ಸಿಎಂ ಆಗಿದ್ದಾರೆ. ನಾವು ಸರ್ಕಾರವನ್ನು ಟಾರ್ಗೆಟ್ ಮಾಡುತ್ತಿದ್ದೇವೆ. ಸಿಎಂ ಆದವರು ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ಸರ್ಕಾರದ ವೈಫಲ್ಯಗಳನ್ನು ಇಟ್ಟುಕೊಂಡಷ್ಟೇ ಅವರನ್ನು ಗುರಿ ಮಾಡುತ್ತಿದ್ದೇವೆ. ಇದರಲ್ಲಿ ಜಾತಿ ಪ್ರಶ್ನೆಯೇ ಇಲ್ಲ" ಎಂದು ಡಿಕೆಶಿ ತಿರುಗೇಟು ನೀಡಿದರು.












Click it and Unblock the Notifications