ಕೋಲಾರ, ಚಿಕ್ಕಬಳ್ಳಾಪುರಕ್ಕೆ ಇದೇ ವರ್ಷವೇ ಎತ್ತಿನಹೊಳೆ ನೀರು: ಸಿಎಂ
ಬೆಂಗಳೂರು, ಸೆ.10: ಎತ್ತಿನಹೊಳೆ ಯೋಜನೆ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಇದೇ ವರ್ಷವೇ ಕುಡಿಯುವ ನೀರು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಅವರು ಇಂದು ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ಆಯೋಜಿಸಿದ್ದ " ಜನಸ್ಪಂದನ" ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆಗಳ ಆನಾವರಣ ಹಾಗೂ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಂಗ್ರೆಸ್ನವರಿಗೆ ಎತ್ತಿನಹೊಳೆ ಎಲ್ಲಿದೆ ಎಂದು ಗೊತ್ತಿಲ್ಲ. ಈ ಭಾಗಕ್ಕೆ ಕುಡಿಯುವ ನೀರಿನ ವ್ಯವಸ್ಥೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಎತ್ತಿನಹೊಳೆ ಯೋಜನೆ ಪ್ರಾರಂಭವಾಯಿತು. ಇಲ್ಲಿಗೆ ನೀರೇ ಬರುವುದಿಲ್ಲ, ಆಗುವುದಿಲ್ಲ ಎಂದಿದ್ದರು. ಈಗ ನೀರು ಬರುವಾಗ ನಾವು ಮಾಡಿದ್ದು ಎನ್ನುತ್ತಾರೆ. ಯಾವ ನಾಯಕರು ಆಗುವುದಿಲ್ಲ ಏನೆಂದು ಹೇಳಿದ್ದರೋ ಅವರು ನಾವು ಮಾಡಿದ್ದು ಎಂದು ಹೇಳುತ್ತಾರೆ. ನಿಜವಾಗಿಯೂ ಹಣವನ್ನು ಒದಗಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ. 3 ಸಾವಿರ ಕೋಟಿ ರೂ.ಗಳನ್ನು ಇದೆ ವರ್ಷ ಕೊಟ್ಟು, ಕೋಲಾರ, ಚಿಕ್ಕಬಳ್ಳಾಪುರ ಫೀಡರ್ ಕಾಮಗಾರಿಯನ್ನು ಪ್ರಾರಂಭ ಮಾಡಿ. ಇದೇ ವರ್ಷ ಎತ್ತಿನಹೊಳೆ ನೀರನ್ನು ಹರಿಸುತ್ತೇವೆ. ನಾವೇ ಪ್ರಾರಂಭ ಮಾಡಬೇಕೆಂಬುದು ದೈವೇಚ್ಛೆ. ಅದಕ್ಕೆ ಕಟಿಬದ್ಧರಾಗಿ ಕೆಲಸ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಆಡಳಿತದಲ್ಲಿದ್ದರೆ ರಾಜ್ಯವನ್ನು ನರಕಕ್ಕೆ ತಳ್ಳುತ್ತಿದ್ದರು
ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಸರಿಯಾದ ಕೋವಿಡ್ ನಿರ್ವಹಣೆಯಾಗದೆ ಚಿಕಿತ್ಸೆ, ಜನರಿಗೆ ಕೆಲಸ ಇರಲಿಲ್ಲ. ಆದರೆ ನಾಯಕರಾದ ಯಡಿಯೂರಪ್ಪನವರ ಅವಧಿಯಲ್ಲಿ ಕೋವಿಡ್ ಸರ್ಮಥ ನಿರ್ವಹಣೆ ಮಾಡಿ, ಚಿಕಿತ್ಸೆ, ಉದ್ಯೋಗವಿಲ್ಲದವರಿಗೆ ಸ್ಪಂದಿಸಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೋವಿಡ್ ಸಮರ್ಥವಾಗಿ ನಿರ್ವಹಿಸಲಾಯಿತು.ಕೇಂದ್ರ ಸರ್ಕಾರದಿಂದ 1 ಲಕ್ಷ ಕೋಟಿ ಅನುದಾನವನ್ನು ನೀಡಲಾಯಿತು. 130 ಕೋಟಿ ಜನಸಂಖ್ಯೆಗೆ 2 ಡೋಸ್ ಲಸಿಕಾಕರಣ ಸಾಧ್ಯವಾಗಿಸಲಾಯಿತು. ಕೇಂದ್ರದಲ್ಲಿ ನರೇಂದ್ರ ಮೋದಿಯವರು ಹಾಗೂ ರಾಜ್ಯದಲ್ಲಿ ಯಡಿಯೂರಪ್ಪನವರ ಆಡಳಿತ ಹಾಗೂ ದಿಟ್ಟ ನಿಲುವಿನಿಂದ ಇದು ಸಾಧ್ಯವಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದರೆ ರಾಜ್ಯವನ್ನು ನರಕಕ್ಕೆ ತಳ್ಳುತ್ತಿದ್ದರು ಎಂದು ಬೊಮ್ಮಾಯಿ ಹೇಳಿದರು.

ಎಲ್ಲಾ ವರ್ಗದವರಿಗೂ ಸರ್ಕಾರ ನೆರವಾಗಿದೆ
ನಮ್ಮ ಸರ್ಕಾರ ಸಂಧ್ಯಾ ಸುರಕ್ಷಾ, ವಿಧವಾ ಮಾಸಾಶನ, ಅಂಗವಿಕಲರ ಮಾಸಾಶನ ಹೆಚ್ಚಿಸಲಾಯಿತು. ವಿದ್ಯಾನಿಧಿಯನ್ನು ರೈತರು, ನೇಕಾರರು, ಮೀನುಗಾರರು, ನೇಕಾರರ ಮಕ್ಕಳಿಗೆ ನೀಡಲಾಗಿದೆ. ಇಪ್ಪತ್ತು ಲಕ್ಷ ವಿದ್ಯಾರ್ಥಿಗಲಿಗಗ 1042 ಕೋಟಿ ರೂ.ಗಳನ್ನು ನೀಡಲಾಗಿದೆ. ಕೃಷಿಗೆ ಇಂಬು ನೀಡಲಾಗಿದೆ. ರೈಶಕ್ತಿ ಯೋಜನೆ, ಯಶಸ್ವಿ ಯೋಜನೆ, ಹಾಲು ಉತ್ಪಾದಕರಿಗೆ ಕ್ಷೀರ ಸಮೃದ್ಧಿ ಇದರಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜನರಿಗೆ ಲಾಭವಾಗಲಿದೆ. ಸಮಾಜ ಕಲ್ಯಾಣದಲ್ಲಿ ಸಾಮಾಜಿಕ ಸಾಮರಸ್ಯ, ಸಮಾನತೆ ತರಲು ಎಸ್ ಸಿ ಎಸ್ ಟಿ , ಓಬಿಸಿ ಗಳಿಗೆ 5 ಮೆಗಾ ಹಾಸ್ಟೆಲ್ ಗಳನ್ನು, ವಿದ್ಯಾರ್ಥಿ ವೇತನ ಹೆಚ್ಚಿಸಿ. ಎಸ್ ಸಿ ಎಸ್ ಟಿ ಬಿಪಿಎಲ್ ಕಾರ್ಡ್ ದಾರರಿಗೆ 75 ಯೂನಿಟ್ ಉಚಿತ ವಿದ್ಯುತ್ ಯೋಜನೆ, ಮನೆ ನಿರ್ಮಾಣಕ್ಕೆ 2 ಲಕ್ಷ ಸಹಾಯ, ಐವತ್ತು ಸಾವಿರ ಎಸ್ ಸಿ ಎಸ್ ಟಿ ಮಕ್ಕಳಿಗೆ ಸ್ವಯಂ ಉದ್ಯೋಗ, 5 ಲಕ್ಷ ಸ್ತ್ರೀಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ, ವಿವೇಕಾನಂದ ಯುವಶಕ್ತಿ ಯೋಜನೆ ಯುವಕರಿಗೆ ಸ್ವಯಂ ಉದ್ಯೋಗ, ಸಮಾಜದ ಎಲ್ಲ ವರ್ಗದವರ ಸಾಮರ್ಥ್ಯವನ್ನು ಹೆಚ್ಚಿಸುವುದು ನಮ್ಮ ಗುರಿ ಎಂದರು.

ಮೂರು ತಾಲ್ಲೂಕು ಸ್ಯಾಟಿಲೈಟ್ ಟೌನ್ ಆಗಿ ಅಭಿವೃದ್ಧಿ
ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಹೊಸ ಟೌನ್ ಶಿಪ್ ಗಾಗಿ ಈಗಾಗಲೇ ಕೆಲಸ ಪ್ರಾರಂಭ ಮಾಡಿದ್ದೇವೆ. ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿಗಳನ್ನು ಬೆಂಗಳೂರಿನ ಸ್ಯಾಟಿಲೈಟ್ ಟೌನ್ ಆಗಿ ಅಭಿವೃದ್ಧಿ ಮಾಡುವ ತೀರ್ಮಾನ ಮಾಡಿದ್ದೇವೆ. ಭವಿಷ್ಯದ ಬೆಂಗಳೂರು ಈ ಮೂರು ನಗರಗಳಲ್ಲಿ ಇವೆ.ಇವುಗಳನ್ನು ಮಹಾನಗರಗಳನ್ನಾಗಿ ಪರಿವರ್ತಿಸಿ, ಎಲ್ಲಾ ವ್ಯವಸ್ಥೆ ಗಳನ್ನು ಕಲ್ಪಿಸಿ, ಸಮಗ್ರ ಅಭಿವೃದ್ಧಿಯನ್ನು ಮಾಸ್ಟರ್ ಪ್ಲಾನ್ ಮೂಲಕ ಮಾಡಲಿದ್ದೇವೆ.ಈ ದೂರದೃಷ್ಟಿಯಿಂದ ಕೆಲಸ ಮಾಡಲಾಗುತ್ತಿದೆ ಎಂದರು.

ನವ ಕರ್ನಾಟಕದಿಂದ ನವ ಭಾರತ
ಹೊಸ ಶಿಕ್ಷಣ ನೀತಿ, ಸೆಮಿಕಂಡಕ್ಟರ್ ನೀತಿ, ಕೈಗಾರಿಕಾ ನೀತಿ, ಆರ್.ಅಂಡ್ ಡಿ ನೀತಿ, ಉದ್ಯೋಗ. ನೀತಿ, ಇವುಗಳ ಮೂಲಕ ಅತಿ ಹೆಚ್ಚು ಉದ್ಯೋಗ ಕರ್ನಾಟಕದಲ್ಲಿ ಸೃಷ್ಟಿ ಯಾಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಎಲ್ಲಾ ರಂಗಗಳಲ್ಲಿ ಕರ್ನಾಟಕ ಮುಂದೆ ಬರಬೇಕು ಎನ್ನುವ ಇಚ್ಛೆಯಿಂದ ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ನಮ್ಮ ಗುರಿ. ಇದಕ್ಕೆ ನಿಮ್ಮ ಬೆಂಬಲ ಮತ್ತು ಆಶೀರ್ವಾದ ಇರಲಿ ಎಂದರು.
ಡಬಲ್ ಇಂಜಿನ್ ಸರ್ಕಾರ ನರೇಂದ್ರ ಮೋದಿಯವರ ಆಶೀರ್ವಾದದಿಂದ ಕೇಂದ್ರದ ಹಲವಾರು ಯೋಜನೆಗಳನ್ನು ಸಮಗ್ರವಾಗಿ ಜನ ರಿಗೆ ಮುಟ್ಟಿಸಿ ಅವರ ಆಶಯದಂತೆ ಡಬಲ್ ಇಂಜಿನ್ ಸರ್ಕಾರದ ಲಾಭವನ್ನು ಕರ್ನಾಟಕದ ಜನತೆಗೆ ಮುಟ್ಟಿಸಿ, ವರದಿಯನ್ನು ಸಲ್ಲಿಸುತ್ತೇವೆ. ಆಡಳಿತ ಮಾಡಲು ನಾವು ಯೋಗ್ಯರು ಎನ್ನುವುದನ್ನು ಸಾಬೀತು ಮಾಡಿ, ನಿಮ್ಮ ಪ್ರೀತಿ ವಿಶ್ವಾಸ ಗಳಿಸಲು ಆತ್ಮ ವಿಶ್ವಾಸ ದಿಂದ ನಿಮ್ಮ ಮುಂದೆ ಬಂದು ನಿಲ್ಲುತ್ತೇವೆ. ಆಶೀರ್ವಾದ ಮಾಡಿ ಎಂದರು. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ನಮ್ಮ ಗುರಿ. ಹೆಜ್ಜೆಗೆ ಹೆಜ್ಜೆ , ಹೆಗಲಿಗೆ ಹೆಗಲು ನೀಡಿ ಎಂದು ಕರೆ ನೀಡಿದರು. ಜನಸ್ಪ ದನೆಯನ್ನು ವಿಜಯೋತ್ಸವವಾಗಿ ಪರಿವರ್ತಿಸೋಣ. ಇಲ್ಲಿಂದ ಶಕ್ತಿಯನ್ನು ಇಮ್ಮಡಿಗೊಳಿಸಿಕೊಂಡು ಅದಮ್ಯ ಶಕ್ತಿಯಿಂದ ಕರ್ನಾಟಕದ ಜನರ ಸೇವೆ ಮಾಡಲು ಸಂಕಲ್ಪ ಮಾಡಿದ್ದೇನೆ ಎಂದರು.












Click it and Unblock the Notifications