ಪ್ರವಾಹಕ್ಕೆ ನಲುಗಿದ ತಾಯ್ನಾಡಿಗೆ ಮಿಡಿದ ಬೆಂಗಳೂರು ಕೊಡವ ಸಮಾಜ!
ಬೆಂಗಳೂರು, ಆಗಸ್ಟ್ 20: ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ಪ್ರವಾಹಕ್ಕೆ ತತ್ತರಿಸಿರುವ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ನೆರವಾಗಲು ಕೊಡವ ಸಮಾಜ ಮುಂದೆ ಬಂದಿದೆ.
ಈ ಕುರಿತು ಕೊಡವ ಸಮಾಜದ ಅಧ್ಯಕ್ಷ ರವಿ ಉತ್ತಪ್ಪ ಮಾತನಾಡಿ, ಸದ್ಯ ಮಳೆ ಕಡಿಮೆ ಆಗುತ್ತಿದೆ. ಬೇರೆ ಬೇರೆ ಕಡೆಗಳಿಂದ ಪರಿಹಾರ ಸಾಮಗ್ರಿ ಬರುತ್ತಿದೆ. ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಜಾಗದ ಸಮಸ್ಯೆ ಇದೆ. ಹಾಗಾಗಿ ಪರಿಹಾರ ಸಾಮಗ್ರಿ ಬದಲು ಪರಿಹಾರ ಫಂಡ್ ಆರಂಭಿಸಿದ್ದೇವೆ.
ಕೆನರಾ ಬ್ಯಾಂಕ್ ಖಾತೆ ತೆರೆದಿದ್ದೇವೆ. ಇನ್ನೆರಡು ತಿಂಗಳ ನಂತರ ನಾವು ಸರ್ಕಾರ ಹೊರತುಪಡಿಸಿ ಪ್ರತ್ಯೇಕವಾಗಿ ತೆರಳಿ ಸಹಾಯ ನೀಡಲಿದ್ದೇವೆ. ನಮ್ಮ ರೀತಿ ಸೇವೆ ಸಲ್ಲಿಸುತ್ತಿರುವ ಹಲವು ಸಂಘಟನೆ ಗಳು ಕೈಜೋಡಿಸಿದರೆ ಉತ್ತಮ ತಿಳಿಸಿದರು.
ಅದಾಗಲೇ ಲಕ್ಷಾಂತರ ರೂ. ಹಣ ಕೂಡ ಸಂಗ್ರಹವಾಗಿದೆ. ಅದನ್ನೂ ಒಂದು ರೂ. ಕೂಡ ದುರ್ಬಳಕೆ ಆಗದ ರೀತಿ ಸಹಾಯ ಒದಗಿಸುತ್ತೇವೆ. ನಗರದಲ್ಲಿ ವ್ಯಕ್ತಿ ಒಬ್ಬರು ಕೊಡವ ಸಮಾಜ ಹೆಸರಿನಲ್ಲಿ ತಮ್ಮ ಸ್ವಂತ ಖಾತೆಗೆ ಹಣ ಹಾಕಿಕೊಂಡು ಬಳಸಿದ್ದಾರೆ. ಅವರ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ಸಲ್ಲಿಸಲಿದ್ದೇವೆ.
ಸಾಮಗ್ರಿ ಬದಲು ಕೊಡವ ಸಮಾಜಕ್ಕೆ ಆರ್ಥಿಕ ಸಹಕಾರ ನೀಡಲು ಬಯಸುವವರು ಕೆನರಾ ಬ್ಯಾಂಕ್ ವಸಂತನಗರ ಶಾಖೆಯಲ್ಲಿ ಕೊಡವ ಸಮಾಜ ಫ್ಲಡ್ ರಿಲೀಫ್ ಫಂಡ್ ಹೆಸರಿನಲ್ಲಿ ತೆರೆದಿರುವ ಖಾತೆ ಸಂಖ್ಯೆ 1370101084312, ಐಎಫ್ಎಸ್ಸಿ ಕೋಡ್ 0001370 ಇಲ್ಲಿಗೆ ಸಂದಾಯ ಮಾಡಬಹುದು.
ಇಲ್ಲಿಗೆ ಆನ್ಲೈನ್ ಮೂಲಕ ಇಲ್ಲವೇ ಚೆಕ್ ರೂಪದಲ್ಲಿ ನೀಡಬಹುದು. ಈಗಾಗಲೇ 30 ಲಕ್ಷ ರೂ.ಗಿಂತ ಹೆಚ್ಚು ಹಣ ಚೆಕ್ ರೂಪದಲ್ಲಿ ಬಂದಿದೆ. ಆನ್ ಲೈನ್ ಮೂಲಕ ಬಂದ ಹಣದ ಮಾಹಿತಿ ಸಿಗಬೇಕು ಎಂದರು. ಸಮಾಜ ಬಾಂಧವರು ಸಂಗ್ರಹಿಸಿ ಸುಮಾರು ಎಲ್ಲಾ ಆಹಾರ ಸಾಮಗ್ರಿ ಹಾಗೂ ವಸ್ತುಗಳನ್ನು 48ಟ್ರಕ್ಗಳಷ್ಟು ಕಳುಹಿಸಲಾಗಿದ್ದು ಇನ್ನು 15-16ಟ್ರಕ್ಗಳಷ್ಟು ಕಳುಹಿಸಲಾಗುತ್ತದೆ. ಸಮಾಜ ಬಾಂಧವರು ಪ್ರತಿಯೊಬ್ಬರಿಗೂ ನೆರವು ನೀಡಲು ಮುಂದಾಗಿದ್ದೇವೆ ಕಳುಹಿಸಿರುವ ಸಾಮಗ್ರಿಗಳು ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.
ಕೊಡಗಿನಲ್ಲಿ ಉಂಟಾಗಿರುವ ಭೀಕರ ಪ್ರವಾಹ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಅಸ್ತಿ ನಷ್ಟ ಸಂಭವಿಸಿದೆ. ಕುಡಿಯುವ ನೀರು,ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಡಿಕೇರಿ ಹಾಗೂ ಮಂಗಳೂರು ರಸ್ತೆ ಸಂಪೂರ್ಣ ಬಂದ್ ಆಗಿದೆ.
ವೀರರಾಜಪೇಟೆ, ಗೋಣಿಕೊಪ್ಪ ಸೇರಿದಂತೆ ಹಲವು ಕಡೆ ಪ್ರವಾಹ ಉಂಟಾಗಿದೆ. ಕೊಡಗಿನ ಇತಿಹಾಸದಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ.
ತೋಟ ಸಂಪೂರ್ಣ ನಾಶವಾಗಿದೆ. ಇನ್ನೂ ಕೂಡ ಜನರು ನೀರಿನ ಮಧ್ಯೆ ಸಿಲುಕಿಕೊಂಡಿದ್ದಾರೆ. ಹೀಗಾಗಿ ಕೊಡಗು ಜಿಲ್ಲಾ ನೆರೆ ಸಂತ್ರಸ್ತರಿಗೆ ನೆರವು ಆಗಲು ಕೊಡವ ಸಮಾಜ ಮುಂದಾಗಿದೆ. ಬೆಂಗಳೂರಿನ ಜನ ತಮ್ಮ ಕೈಯಲ್ಲಿ ಅದ ಸಹಾಯ ಮಾಡಿದ್ದಾರೆ.
ಪರಿಹಾರ ಸಾಮಾಗ್ರಿಗಳನ್ನು 48 ಟ್ರಕ್ ಮೂಲಕ ಕೊಡಗು ತಲುಪಿಸಿದ್ದೇವೆ. ಪ್ರತಿಯೊಬ್ಬರಿಗೂ ವಸ್ತುಗಳು ತಲುಪುವಂತೆ ಕೊಡವ ಸಮಾಜದ ನೋಡಿಕೊಂಡಿದೆ. ಮುತ್ತಮ್ಮ, ಜಾಜಿ ತಿಮ್ಮಯ್ಯ ಸೇರಿದಂತೆ ಹಲವರು ತಮಗಾದ ನಷ್ಟದ ವಿವರವನ್ನು ನೀಡಿದರು. ತಮಗಾದ ನಷ್ಟವನ್ನು ಎಳೆಎಳೆಯಾಗಿ ವಿವರಿಸಿದರು. ಉಪಾಧ್ಯಕ್ಷೆ ಮೀರಾ ಜೆ. ಕುಮಾರ್, ಗೌರವ ಕಾರ್ಯದರ್ಶಿ ಸಿ. ಕೆ. ಸುಬ್ಬಯ್ಯ ಮತ್ತಿತರರು ಉಪಸ್ಥಿತರಿದ್ದರು.
Canara Bank
Account number: 1370101084312
IFSC code:0001370

ಪ್ರವಾಹದಲ್ಲಿ ಬದುಕುಳಿದು ಬಂದ ವೃದ್ಧೆಯ ಅಳಲು
ಒಂದು ಎಕರೆ ಕಾಫಿ ತೋಟ ಮತ್ತು ಅರ್ಧ ಎಕರೆ ಪ್ರದೇಶದಲ್ಲಿ ಏಲಕ್ಕಿ ಬೆಳೆಯುತ್ತಿದ್ದೆವು, ಪ್ರವಾಹದ ಬಳಿಕ ನೋಡಿದರೆ ಅಲ್ಲಿ ತೋಟವಾಗಲಿ, ಗದ್ದೆಯಾಗಲಿ ಈ ಮೊದಲು ಇದ್ದ ಯಾವುದೇ ಕುರುಹು ಇಲ್ಲದಂತೆ ನಾಶವಾಗಿದೆ. ಬೆಂಗಳೂರಿಗೆ ಮಗಳ ಮನೆಗೆ ಬಂದಿದ್ದೇನೆ, ನನ್ನ ನೋಡಿಕೊಳ್ಳಲು ಕೂಡ ಯಾರೂ ಇಲ್ಲ ಒಂಟಿಯಾಗಿ ವಾಸಿಸುತ್ತಿದ್ದೆ ಈಗ ಮನೆಯೂ ನಾಶವಾಗಿದೆ ಎಲ್ಲಿಗೆ ಹೋಗಲಿ ಎಂದು ತಿಳಿಯದೆ ಇಲ್ಲಿಗೆ ಬಂದಿದ್ದೇನೆ.
ಐವತ್ತಕ್ಕೂ ಹೆಚ್ಚು ವರ್ಷ ಆಯ್ತು ಅಲ್ಲಿ ಜೀವನ ನಡೆಸ್ತಾ, ಇನ್ನು ಆ ನೆನಪುಗಳೊಂದಿಗೆ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದ್ದು ಇಂತಹ ಕಷ್ಟ ಯಾರಿಗೂ ಬರುವುದು ಬೇಡ ಎಂದು ಸೂರಲಬ್ಬಿಯ ಮುತ್ತಮ್ಮ ತಮ್ಮ ಅಳಲು ತೋಡಿಕೊಂಡರು.

ಸರ್ಕಾರಿ ಗೋಮಾಳ ಜಾಗ ಸಾಕಷ್ಟಿದೆ
ಸರ್ಕಾರ ಗುಡ್ಡಗಾಡು ಪ್ರದೇಶದಲ್ಲಿ ಬಡವರಿಗೆ ಸೈಟ್ ಹಂಚಿಕೆ ಮಾಡ್ತಾರೆ. ಹೀಗಾಗಿ ಸರ್ಕಾರ ಇನ್ನುಮುಂದೆಬಡಬಗ್ಗರಿಗೆ ಸೈಟ್ ಹಂಚಿಕೆ ಮಾಡುವ ಸಂದರ್ಭದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಸೈಟ್ ಹಂಚಿಕೆ ಮಾಡದಿರುವಂತೆ ಸರ್ಕಾರಕ್ಕೆ ಮನವಿ ಮಾಡಲಾಯಿತು.

ಹೊರಗಿನವರಿಂದಲೇ ಕೊಡಗಿನವರಿಗೆ ಸಂಕಟ
ಕೊಡಗಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ ಆದರೆ ಕೊಡಗಿನಲ್ಲಿ ವಾಸಿಸುವವರು ಕೇವಲ ಒಂದೂವರೆ ಲಕ್ಷ ಮಂದಿ, ಕೊಡವ ಸಮಾಜದ ಜನಸಂಖ್ಯೆ ಇರುವುದೇ ಒಂದು ಲಕ್ಷ ಅದರಲ್ಲಿ ಸುಮಾರು ಐವತ್ತು ಸಾವಿರ ಜನ ಕೊಡಗಿನಲ್ಲಿ ನೆಲೆಸಿದ್ದರೆ ಇನ್ನುಳಿದವರು ದೇಶ ವಿದೇಶಗಳಲ್ಲಿ ನೆಲೆಸಿದ್ದಾರೆ. ರಿಯಲ್ ಎಸ್ಟೇಟ್ ದಂಧೆಯಿಂದಾಗಿ ವಾರಕ್ಕೆ 2ರಿಂದ ಮೂರು ಲಕ್ಷ ಮಂದಿ ಭೇಟಿ ನೀಡುತ್ತಾರೆ ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

15 ಮಂದಿ ಕಣ್ಮರೆ
15 ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದು, ನಾಲ್ವರ ಶವ ಸಿಕ್ಕಿದೆ. ಎಲ್ಲರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಸಂಪೂರ್ಣ ವಿವರ ಸಿಗಲಿದೆ. ಕೊಡವರಿಗೆ ಇತಿಹಾಸದಲ್ಲೇ ಈ ಸಮಸ್ಯೆ ಎದುರಾಗಿದೆ. ಏಕೆ ಇಷ್ಟೊಂದು ನಷ್ಟವಾಯಿತು. ಹೇಗೆ ಆಯಿತು ಎನ್ನುವುದನ್ನು ತಜ್ಞರು ವಿವರಿಸಬೇಕು ಎಂದು ವಿವರಿಸಿದರು.

ಕೊಡವ ಸಮಾಜದ ಖಾತೆ ಎಂದು ಮೋಸ ಹೋಗದಂತೆ ಮನವಿ
ಕೊಡ ಸಮಾಜವರು ಕೆನರಾ ಬ್ಯಾಂಕ್ನಲ್ಲಿ ಖಾತೆ ತೆರೆದು ಕೊಡವ ಸಮುದಾಯ ಸೇರಿದಂತೆ ಪ್ರತಿಯೊಬ್ಬರಲ್ಲಿಯೂ ಮನವಿ ಮಾಡುತ್ತಿದೆ ಆದರೆ ಯಾರ ವಯಕ್ತಿಕ ಖಾತೆಗೂ ಹಣ ಜಮಾ ಮಾಡದಂತೆ ಮನವಿ ಮಾಡಿದ್ದಾರೆ,ಈಗಾಗಲೇ ಪದ್ಮನಾಭನಗರದಲ್ಲಿ ಕೊಡವ ಸಮಾಜದ ಹೆಸರು ಹೇಳಿಕೊಂಡು ಎಸ್ಬಿಐ ವಯಕ್ತಿಕ ಖಾತೆಗೆ ಲಕ್ಷ ರೂ ಜಮಾ ಮಾಡಿಸಿ ತಕ್ಷಣವೇ ಆ ಹಣವನ್ನು ಬಿಡಿಸಿಕೊಂಡು ವಯಕ್ತಿಕವಾಗಿ ಖರ್ಚು ಮಾಡಿರುವ ವ್ಯಕ್ತಿಯ ವಿರುದ್ಧ ದೂರು ನೀಡಲಾಗಿದೆ. ಹೀಗೆ ಯಾರೋ ತಮ್ಮ ಸಮಾಜದ ಹೆಸರು ಹೇಳಿಕೊಂಡು ಬಂದರೆ ಅಂತವರಿಗೆ ಹಣ ನೀಡಬೇಡಿ, ಸಮಾಜದ ಖಾತೆಗೆ ಹಣ ವರ್ಗಾಯಿಸಿ ಎಂದು ಮನವಿ ಮಾಡಿದರು.












Click it and Unblock the Notifications