ಪ್ರಧಾನಿ ವಿರುದ್ಧ ಖರ್ಗೆ ಟೀಕೆ: ಆಕ್ರೋಶ ಭುಗಿಲೇಳದಂತೆ ತಡೆಯಲು ಸುರ್ಜೆವಾಲ ದಲಿತ ಪದ ಬಳಕೆ?
ಬೆಂಗಳೂರು, ಏಪ್ರಿಲ್ 27: ಪ್ರಧಾನಮಂತ್ರಿ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನೀಡಿದ್ದ ವಿವಾದಾತ್ಮಕ ಹೇಳಿಕೆ ಬಿಜೆಪಿಗೆ ಚುನಾವಣಾ ಅಸ್ತ್ರವಾಗಲಿದೆ. ಈ ವಿಚಾರ ಮನಗಂಡಿರುವ ಕಾಂಗ್ರೆಸ್ ಹೇಳಿಕೆಯು ತಮಗೆ ಮುಳ್ಳಾಗದಂತೆ ತಡೆಯಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ ಎನ್ನಲಾಗಿದೆ.
ಗುರುವಾರ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಮೋದಿ ವಿಷ ಸರ್ಪ ಎಂದೆಲ್ಲ ಟೀಕಿಸಿದರು. ಬಳಿಕ ಸಾಲು ಸಾಲು ಬಿಜೆಪಿ ನಾಯಕರ ಆಕ್ರೋಶವನ್ನು ಅವರು ಎದುರಿಸಿದರು. ಇದೀಗ ಇನ್ನಷ್ಟು ಆಕ್ರೋಶದ ಹೊಗೆ ಹೆಚ್ಚಾಗದಂತೆ ತಡೆಯಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ ಪ್ರಯತ್ನಿಸಿದ್ದಾರೆ.

ಗುರುವಾರ ಸಂಜೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲ, ಪ್ರಧಾನಿಯವರ ಜೊತೆಗೆ ಖರ್ಗೆಯವರಿಗೆ ವೈಯಕ್ತಿಕ ಯುದ್ಧವಿಲ್ಲ. ದಲಿತ ಕುಟುಂಬದಲ್ಲಿ ಜನಿಸಿದ ಮಲ್ಲಿಕಾರ್ಜುನ ಖರ್ಗೆಯವರು 60 ವರ್ಷ ರಾಜಕಾರಣದಲ್ಲಿದ್ದಾರೆ. ಅವರ ವಿರುದ್ಧ ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಆರೋಪಿಸಿದರು.
ಖರ್ಗೆ ಅವರದ್ಧ ವೈಯಕ್ತಿಕ ಯುದ್ಧವಲ್ಲ
ದಲಿತ ಬಡ ಕುಟುಂಬದಲ್ಲಿ ಹುಟ್ಟಿದ ಮಲ್ಲಿಕಾರ್ಜುನ ಖರ್ಗೆಯವರು ನಿರಂತರ ಪರಿಶ್ರಮದಿಂದ ಇಷ್ಟು ವರ್ಷ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಒಂಬತ್ತು ಭಾರಿ ಗೆದ್ದು ಜನರ ಸೇವೆ ಮಾಡಿದ್ದಾರೆ ಎಂದರು.
ಖರ್ಗೆಯವರ ಅವಿರತ ಶ್ರಮದಿಂದಲೇ ಇಂದು ಅವರು ಎಐಸಿಸಿಯ ಉನ್ನತ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಸಲುವಾಗಿ ಹೋರಾಟ ಮಾಡುತ್ತಿದ್ದಾರೆ ಹೊರತು, ಯಾರೊಂದಿಗೂ ವೈಯಕ್ತಿಕ ದ್ವೇಷವಾಗಲಿ, ಯುದ್ಧವಾಗಲಿ ಮಾಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈಗಾಗಲೇ ಪ್ರಧಾನಿ ಮೋದಿ ಕುರಿತು ನೀಡಿರುವ ಹೇಳಿಕೆ ವಿಚಾರದಲ್ಲಿ ಸ್ವತಃ ಖರ್ಗೆಯವರೇ ಸ್ಪಷ್ಟನೆ ಕೊಟ್ಟಿದ್ದಾರೆ. ತಾವು ಮೋದಿಯವರ ಕುರಿತು ವೈಯಕ್ತಿಕವಾಗಿ ಹೇಳಿಕೆ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ. 'ಬಿಜೆಪಿ ಡಿಎನ್ಎ ಕೇವಲ ದಲಿತ ವಿರೋಧಿ ಮಾತ್ರವಲ್ಲ, ಬಡವರ ವಿರೋಧಿ; ಸಹ ಆಗಿದೆ ಎಂದು ಸುರ್ಜೆವಾಲ ಗಂಭೀರ ಆರೋಪ ಮಾಡಿದರು.
ಕರ್ನಾಟಕ ಚುನಾವಣೆ ಇನ್ನೇನು ಸಮೀಸುತ್ತಿದೆ. ಈ ಹೊತ್ತಲ್ಲಿ ಖರ್ಗೆಯವರ ವಿಷ ಸರ್ಪ ಟೀಕೆ ಕಾಂಗ್ರೆಸ್ ಅನ್ನೇ ಸುತ್ತಿಕೊಳ್ಳಬಾರದು ಎಂಬ ಭಯದಿಂದ ಕೈ ಮುಖಂಡರು ಹೀಗೆ ಸಷ್ಟನೆ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ದಲಿತ ಕುಟುಂಬದ, ಖರ್ಗೆಯವರು ಹಿರಿಯರು, ಬಿಜೆಪಿ ಡಿಎನ್ಎ ದಲಿತ ವಿರೋಧಿ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ಗೆ ಹಿರಿಯ ನಾಯಕರೊಬ್ಬರು ಹೀಗೆ ಪ್ರಧಾನಿಯನ್ನು ಮನಬಂದಂತೆ ಟೀಕಿಸಿದ್ದಕ್ಕಾಗಿ ಭಾರಿ ಪ್ರತಿಫಲ ನಿರೀಕ್ಷೆಯಿಂದ ಆತಂಕಕ್ಕೀಡಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.












Click it and Unblock the Notifications