ವಿಡಿಯೋ; ಕೆಂಗೇರಿ-ಚಲ್ಲಘಟ್ಟ ನಮ್ಮ ಮೆಟ್ರೋ ಪ್ರಾಯೋಗಿಕ ಪರೀಕ್ಷೆ
ಬೆಂಗಳೂರು, ಜುಲೈ 30; ಬೆಂಗಳೂರಿನ ಜನರಿಗೆ ಸಿಹಿಸುದ್ದಿ. ನಮ್ಮ ಮೆಟ್ರೋ ನೇರಳೆ ವಿಸ್ತರಿತ ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರ ಆರಂಭವಾಗಿದೆ. 1.9 ಕಿ. ಮೀ. ದೂರದ ಮಾರ್ಗ ಆಗಸ್ಟ್ನಲ್ಲಿ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.
ಶನಿವಾರ ನೇರಳೆ ಮಾರ್ಗದಲ್ಲಿ ಕೆಂಗೇರಿ ಮತ್ತು ಚಲ್ಲಘಟ್ಟ ನಮ್ಮ ಮೆಟ್ರೋ ನಿಲ್ದಾಣಗಳ ನಡುವೆ 10 ಕಿ. ಮೀ. ವೇಗದಲ್ಲಿ ಮೊದಲ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ನಮ್ಮ ಮೆಟ್ರೋ ಪ್ರಾಯೋಗಿಕ ಸಂಚಾರದ ರೈಲು ಈ ಮಾರ್ಗದಲ್ಲಿ ಬೆಳಗ್ಗೆ 11.27 ರಿಂದ ಸಂಜೆ 4.15ರ ತನಕ ಸಂಚಾರ ನಡೆಸಿದೆ. ಕಾಮಗಾರಿ ಪೂರ್ಣಗೊಂಡಿದ್ದು, ಕೆಲವು ದಿನ ಪ್ರಾಯೋಗಿಕ ಸಂಚಾರ ನಡೆಸಿ, ತಾಂತ್ರಿಕ ಒಪ್ಪಿಗೆ ಪಡೆದು ಆಗಸ್ಟ್ನಲ್ಲಿ ವಾಣಿಜ್ಯ ಸಂಚಾರ ಆರಂಭಿಸುವ ಸಾಧ್ಯತೆ ಇದೆ.
ನಮ್ಮ ಮೆಟ್ರೋ ವಿಸ್ತರಿತ ಮಾರ್ಗ; ಬಿಎಂಆರ್ಸಿಎಲ್ನ ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತದ ವಿಸ್ತರಿತ ಮಾರ್ಗ ಇದಾಗಿದೆ. ಮೈಸೂರು ರಸ್ತೆಯಿಂದ ಕೆಂಗೇರಿ ತನಕ ಮಾರ್ಗವನ್ನು ವಿಸ್ತರಣೆ ಮಾಡಿ, ಸಂಚಾರ ಆರಂಭಿಸಲಾಗಿತ್ತು. ಇದೇ ಮಾರ್ಗವನ್ನು ಕೆಂಗೇರಿಯಿಂದ ಚಲ್ಲಘಟ್ಟ ತನಕ ವಿಸ್ತರಿಸಲಾಗಿದೆ. ಆದರೆ ಇದರ ಕಾಮಗಾರಿ ತಡವಾಗಿ ಪೂರ್ಣಗೊಂಡಿದೆ.
ಬಿಎಂಆರ್ಸಿಎಲ್ ಸುಮಾರು 10 ದಿನಗಳ ತನಕ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರವನ್ನು ನಡೆಸಲಿದೆ. ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಮಾರ್ಗದ ಪರಿಶೀಲನೆ ನಡೆಸಲು ಆಹ್ವಾನಿಸುವ ನಿರೀಕ್ಷೆ ಇದೆ. ಸುರಕ್ಷತಾ ಆಯುಕ್ತರ ಅಂತಿಮ ಒಪ್ಪಿಗೆ ಬಳಿಕ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.
ಇಂದು ನೇರಳೆ ಮಾರ್ಗದಲ್ಲಿ ಕೆಂಗೇರಿ ಮತ್ತು ಚಲ್ಲಘಟ್ಟ ಮೆಟ್ರೊ ನಿಲ್ದಾಣಗಳ ನಡುವೆ 10 ಕಿಮೀ ವೇಗದಲ್ಲಿ ಮೊದಲ ರೈಲು ಪ್ರಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪ್ರಯೋಗಿಕ ರೈಲು ಸಂಚಾರವು ಬೆಳಿಗ್ಗೆ 11.27 ಗಂಟೆಗೆ ಪ್ರಾರಂಭವಾಗಿದ್ದು 16.15 ಗಂಟೆಗೆ ಯಶಸ್ವಿಯಾಗಿ ಪೂರ್ಣಗೊಂಡಿದೆ. pic.twitter.com/rvcnJS1vEL
— Srivas Rajagopalan (@srivasrbmrccoi1) July 29, 2023
ಕೆ. ಆರ್. ಪುರ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಎರಡು ಮಾರ್ಗದಲ್ಲಿ ಬಿಎಂಆರ್ಸಿಎಲ್ ಒಟ್ಟಿಗೆ ಪ್ರಾಯೋಗಿಕ ಸಂಚಾರ ಆರಂಭಿಸಿದೆ. ಆದ್ದರಿಂದ ಎರಡೂ ಮಾರ್ಗವನ್ನು ಒಟ್ಟಿಗೆ ಲೋಕಾರ್ಪಣೆ ಮಾಡುವ ನಿರೀಕ್ಷೆ ಇದೆ. ಕೆ. ಆರ್. ಪುರ-ವೈಟ್ಫೀಲ್ಡ್ ನಡುವಿನ ಮೆಟ್ರೋ ವಾಣಿಜ್ಯ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ನಲ್ಲಿ ಚಾಲನೆ ಕೊಟ್ಟಿದ್ದರು.
ಕೆಂಗೇರಿ-ಚಲ್ಲಘಟ್ಟ ಮಾರ್ಗದ ದೂರ ಸುಮಾರು 2 ಕಿ. ಮೀ. ಆಗಿದೆ. 2021ರ ಆಗಸ್ಟ್ನಲ್ಲಿ ಮೈಸೂರು ರಸ್ತೆ-ಕೆಂಗೇರಿ ನಡುವಿನ ಮೆಟ್ರೋ ರೈಲಿನ ಸಂಚಾರ ಆರಂಭವಾಯಿತು. ಚಲ್ಲಘಟ್ಟವನ್ನು ಈ ಯೋಜನೆಗೆ ತಡವಾಗಿ ಸೇರಿಸಲಾಯಿತು, ಕಾಮಗಾರಿಯೂ ಸಹ ವಿಳಂಬವಾಯಿತು.
ಸುಮಾರು 33 ಕೋಟಿ ರೂ. ವೆಚ್ಚದಲ್ಲಿ ಚಲ್ಲಘಟ್ಟ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ನಮ್ಮ ಮೆಟ್ರೋ 1 ಮತ್ತು 2ನೇ ಹಂತದ ಯೋಜನೆಯಲ್ಲಿಯೇ ಇದು ಅತಿ ಚಿಕ್ಕ ನಿಲ್ದಾಣವಾಗಿದೆ. 2017ರಲ್ಲಿಯೇ ಸಿವಿಲ್ ಕಾಮಗಾರಿ ಆರಂಭವಾಗಿತ್ತು. 2019ಕ್ಕೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇತ್ತು.
ಆದರೆ ನೈಸ್ ರಸ್ತೆಯ ಮೇಲೆ 56 ಮೀಟರ್ ಎತ್ತರದ ಪಿಲ್ಲರ್ ನಿರ್ಮಾಣ, ಕೋವಿಡ್ ಪರಿಸ್ಥಿತಿ, ಭೂ ಸ್ವಾಧೀನ ಮುಂತಾದ ಕಾರಣಗಳಿಗಾಗಿ ಈ ಮಾರ್ಗ ನಿರ್ಮಾಣ ತಡವಾಯಿತು. ನಾಡಪ್ರಭು ಕೆಂಪೇಗೌಡ ಬಡವಾಣೆಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸ ಮಾಡುವವರಿಗೆ ಈ ಮೆಟ್ರೋ ವರದಾನವಾಗಿದೆ.
ರಾಮನಗರ, ಬಿಡದಿ, ಮೈಸೂರು ರಸ್ತೆಯ ಕಡೆ ಸಾಗುವ ಜನರು ಸಹ ಯಾವುದೇ ಸಂಚಾರ ದಟ್ಟಣೆಯಲ್ಲಿ ಸಿಲುಕದೇ ಸಂಚಾರ ಮಾಡಬಹುದಾಗಿದೆ. ಕೊಮ್ಮಘಟ್ಟ ಸುತ್ತಲೂ ಬಿಡಿಎ ಫ್ಲಾಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಈಗ ಮೆಟ್ರೋ ಸಂಚಾರ ಆರಂಭವಾದರೆ ಇಲ್ಲಿಗೆ ತಲುಪಲು ಸಹಾಯಕವಾಗಲಿದೆ.
ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತದಲ್ಲಿ ಮೈಸೂರು ರಸ್ತೆ ತನಕ ಮೆಟ್ರೋ ರೈಲು ಸಂಚಾರ ನಡೆಸುತ್ತಿತ್ತು. ಬಳಿಕ ವಿಸ್ತರಿತ ಮಾರ್ಗದಲ್ಲಿ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ಟರ್ಮಿನಲ್, ಕೆಂಗೇರಿ ತನಕ ರೈಲು ಓಡಲು ಆರಂಭಿಸಿತು. ಈಗ ಚಲ್ಲಘಟ್ಟ ತನಕ ಸಂಚಾರ ನಡೆಸಲಿದೆ.












Click it and Unblock the Notifications