6 ತಿಂಗಳ ತೆರಿಗೆ ವಿನಾಯಿತಿಗೆ ಟೂರ್ ಟ್ರಾವೆಲ್ಸ್ ಸಂಘಟನೆಗಳ ಒತ್ತಾಯ
ಬೆಂಗಳೂರು, ಮೇ 15: ಕೋವಿಡ್ ಲಾಕ್ಡೌನ್ನಿಂದಾಗಿ ತತ್ತರಿಸಿ ಹೋಗಿರುವ ಟೂರಿಸ್ಟ್ ಬಸ್ ಗಳಿಗೆ 6 ತಿಂಗಳ ತೆರಿಗೆ ವಿನಾಯಿತಿ ಹಾಗೂ ಟ್ಯಾಕ್ಸಿ ಚಾಲಕರಿಗೆ ಘೋಷಿಸಿರುವ 5 ಸಾವಿರ ರೂಪಾಯಿಗಳ ಪರಿಹಾರವನ್ನು ಟೂರಿಸ್ಟ್ ಬಸ್ ಚಾಲಕರಿಗೂ ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ ಸಂಘದ ಪದಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಈ ಒತ್ತಾಯ ಕೇಳಿ ಬಂದಿದೆ.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಕೆ ರಾಧಾಕೃಷ್ಣ ಹೊಳ್ಳ, ಇಂದು ಕೋವಿಡ್ ನಿಂದ ಪ್ರಪಂಚದ ಎಲ್ಲಾ ಉದ್ಯಮದ ರೀತಿಯಲ್ಲಿ ನಮ್ಮ ಉದ್ಯಮ ಅತಿ ಹೆಚ್ಚು ಬಾಧಿತವಾಗಿದ್ದು, ಏಪ್ರಿಲ್ನಿಂದ ಜುಲೈವರೆಗೆ ಪ್ರವಾಸೋದ್ಯಮ ತತ್ತರಿಸಿ ಹೋಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲಿ ಸಹಾಯಕ್ಕೆ ಬರೆದೆ ಇರುವುದು ಶೋಚನೀಯ ಮತ್ತು ಖಂಡನೀಯ ಎಂದರು.

ಯಾವುದೇ ಬೆಳವಣಿಗೆ ಕಾಣುವ ಅವಕಾಶಗಳಿಲ್ಲ
''lockdown ಮುಕ್ತ ಆದರೂ ಇನ್ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಪ್ರವಾಸೋದ್ಯಮ ಇನ್ನೂ ಎರಡು ವರ್ಷಗಳ ಕಾಲ ಯಾವುದೇ ಬೆಳವಣಿಗೆ ಕಾಣುವ ಅವಕಾಶಗಳಿಲ್ಲ, ಬಸ್ ಮಾಲೀಕರು, ಬ್ಯಾಂಕ್ ಹಣ ಮರುಪಾವತಿ, ಸಂಬಳ, ಬಾಡಿಗೆ ಈ ರೀತಿಯಲ್ಲಿ ಕೂಡಲೇ ಬೇಕಾದ ಹಲವು ತೊಂದರೆಗಳು ಇರುವುದರಿಂದ ಸರ್ಕಾರ ಈ ಸಮಯದಲ್ಲಿ ಖಾಸಗಿ ಬಸ್ ಉದ್ಯಮದ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ'' ಎಂದು ರಾಧಾಕೃಷ್ಣ ಹೊಳ್ಳ ಹೇಳಿದರು.

ಮಲತಾಯಿ ಧೋರಣೆ ಅನುಸರಿಸುತ್ತಿದೆ
ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜ್ ಶರ್ಮಾ ಮಾತನಾಡಿ, ''ಸರ್ಕಾರ ಹಿಂದಿನಿಂದಲೂ ಖಾಸಗಿ ಬಸ್ ಉದ್ಯಮದ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಾಗ ನಮ್ಮ ನ್ನು ಹಾಲು ಕೊಡವ ಕಾಮಧೇನುವನ್ನು ತಮಗೆ ಬೇಕಾದ ರೀತಿಯಲ್ಲಿ ತೆರಿಗೆಯನ್ನು ಹೆಚ್ಚಿಸಿಕೊಂಡು ಬಂದಿದೆ. ಒಮ್ಮೆಯೂ ಸಹ ಈ ಉದ್ದಿಮೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ತೆರಿಗೆ ಕಟ್ಟಲು ಸಾಧ್ಯವೇ ಎಂದು ಯೋಚಿಸುವ ಸೌಜನ್ಯವನ್ನೂ ತೋರಿರುವುದಿಲ್ಲ. ಖಾಸಗಿ ಬಸ್ ಮಾಲೀಕತ್ವವನ್ನು ವಿರೋಧಿ ಸುತ್ತಲೇ ಬಂದಿರುವ ಸರ್ಕಾರ, ತನ್ನ ಸ್ವಾಮ್ಯ ದಲ್ಲಿರುವ ಸಾರಿಗೆ ಸಂಸ್ಥೆಗಳು ಯಾವುದೇ ತೆರಿಗೆ ಕಟ್ಟದೆ ಹೆಚ್ಚಿನ ಸವಲತ್ತುಗಳನ್ನು ಪಡೆದುಕೊಂಡರು ಸಹ ನಷ್ಟದಲ್ಲಿರುವುದು ಕಾಣಬಹುದಾಗಿದೆ'' ಎಂದರು.

ಮನವಿ ಪತ್ರವನ್ನು ಸಲ್ಲಿಸಲಾಗುವುದು
ಸೋಮುವಾರ ಸಾರಿಗೆ ಸಚಿವರಿಗೆ ಸಂಘದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಗುವುದು. ಈ ಬೇಡಿಕೆಗಳಿಗೆ ಮುಂದಿನ ಗುರುವಾರದ ಒಳಗಾಗಿ ಸಕಾರಾತ್ಮಕವಾಗಿ ಸ್ಪಂದನೆ ನೀಡದಿದ್ದಲ್ಲಿ ಸಾರಿಗೆ ಆಯುಕ್ತರ ಕಚೇರಿ ಮುಂದೆ ನಮ್ಮ ವಾಹನಗಳನ್ನು ತಂದು ಧರಣಿ ನಡೆಸುವುದಾಗಿ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.

ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು
6 ತಿಂಗಳ ಅವಧಿಯ ರಸ್ತೆ ತೆರಿಗೆ ವಿನಾಯಿತಿ, ನಂತರದ 6 ತಿಂಗಳ ಅವಧಿಯಲ್ಲಿ 50% ತೆರಿಗೆ ವಿನಾಯಿತಿ, ಮುಂಗಡ ತೆರಿಗೆ ಕಟ್ಟಲು ಈಗಿರುವ 15 ದಿನಗಳ ರಿಯಾಯಿತಿ ಅವಧಿಯನ್ನು 30 ದಿನಗಳಿಗೆ ವಿಸ್ತರಣೆ. (ಈ ವರ್ಷಕ್ಕೆ ಮಾತ್ರ ಸೀಮಿತ ಆಗುವಂತೆ.), ಈಗಾಗಲೇ ಸರ್ಕಾರ ನೀಡಿರುವ ಚಾಲಕರ 5000 ರೂಗಳ ಪರಿಹಾರಕ್ಕೆ, ಬಸ್ ಚಾಲಕರನ್ನು ಸೇರಿಸಲು ವಿನಂತಿ. ಅಂತರ್ ರಾಜ್ಯ ತೆರಿಗೆ ಮುಕ್ತ ಒಪ್ಪಂದಕ್ಕೆ ಸಹಿ,( ರೆಸಿಪ್ರೋಕಲ್ ಅಗ್ರೀಮ್ಮೆಂಟ್) ಎಂಬ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.












Click it and Unblock the Notifications