ಸರ್ಕಾರಿ ಅಧಿಕಾರಿಗಳು ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುವಂತಿಲ್ಲ: ಸೂಚನೆ
ಬೆಂಗಳೂರು, ಜುಲೈ 28: ಬೆಂಗಳೂರು ನಗರ ಸೇರಿದಂತೆ ರಾಜ್ಯದ ಅಭಿವೃದ್ಧಿ, ಯೋಜನೆಗಳು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಯಾವುದೇ ಮಾಹಿತಿಯನ್ನು ಅಧಿಕೃತ ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳಿಗೆ ನೀಡದಂತೆ ಸರ್ಕಾರ ಸೂಚನೆ ನೀಡಿದೆ.
ಬೃಹತ್ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸರ್ಕಾರದ ಮಟ್ಟದಲ್ಲಿ ಅನೇಕ ವಿಷಯಗಳು ಚರ್ಚೆ ಆಗುತ್ತವೆ. ಯೋಜನೆಗಳು, ಅಭಿವೃದ್ಧಿ ಚಿಂತನೆ, ಕಾಮಗಾರಿಗಳು ಹೀಗೆ ಹತ್ತು ಹಲವು ವಿಚಾರಗಳನ್ನು ಇನ್ನು ಮುಂದೆ ಸರ್ಕಾರದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡುವಂತಿಲ್ಲ.

ಬದಲಾಗಿ ಅವೆಲ್ಲ ವಿಷಯಗಳ ವರದಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ನೀರು ಸರಬರಾಜು ಮತ್ತು ಸಂಸ್ಥೆ ಮಂಡಳಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಅಧಿಕಾರಿಗಳು ನಿತ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಚೇರಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ ಎಂದು 'ಕನ್ನಡಪ್ರಭ' ವರದಿ ಮಾಡಿದೆ.
ಡಿಕೆ ಶಿವಕುಮಾರ್ ಅವರೇ ಮಾಹಿತಿ ನೀಡುತ್ತಾರೆ
ಸರ್ಕಾರಿ ಅಧಿಕಾರಿಗಳು ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ನೀಡಿದ ಬಳಿಕ ಸಚಿವರು ಮತ್ತು ಉಪಮುಖ್ಯಮಂತ್ರಿಗಳು ಆದ ಡಿಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ಒದಗಿಸಲಿದ್ದಾರೆ.

ಹೀಗೆ ಸೂಚನೆ ನೀಡಲು ಇಲಾಖೆಯೊಂದರಲ್ಲಿ ಇತ್ತೀಚಿನ ಬೆಳವಣಿಗೆಯೊಂದು ಕಾರಣ ಎನ್ನಲಾಗಿದೆ. ಅಧಿಕಾರಿಗಳ ಹೇಳಿದ್ದು, ಮತ್ತು ಸಚಿವರು ಹೇಳಿದ್ದು ವ್ಯತಿರಿಕ್ತವಾಗಿದ ಪರಿಣಾಮ ಇರಿಸು-ಮುರಿಸು ಆಗಿದೆ. ಇಂತ ಗೊಂದಲ ಮತ್ತೆ ಮರುಕಳಿಸಿದಂತೆ ಸೂಕ್ತ ಮಾಹಿತಿ ಹೊರ ಹೊಮ್ಮಲು ಎಲ್ಲ ನಾಗರಿಕ ಸಂಸ್ಥೆಗಳಿಗೆ ಈ ರೀತಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬ್ರಾಂಡ್ ಬೆಂಗಳೂರಿಗೆ ಡಿಕೆಶಿ ಒತ್ತು
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅದರಲ್ಲೂ ಡಿಕೆ ಶಿವಕುಮಾರ್ ಅವರು ನಗರಾಭಿವೃದ್ಧಿ ಇಲಾಖೆ ವಹಿಸಿಕೊಂಡ ಮೇಲೆ ಬೆಂಗಳೂರನ್ನು ಆಕರ್ಷಕವಾಗಿಸಲು, ಬ್ರಾಂಡ್ ಬೆಂಗಳೂರು ಮಾಡಲು ಕ್ರೀಯಾಶೀಲರಾಗಿದ್ದಾರೆ. ಇದರ ಮೇಲೆಯೇ ಹೆಚ್ಚು ಗಮನ ಹರಿಸಿದ್ದಾರೆ.
ಬಹುಪಾಲು ಕಾಮಗಾರಿಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತವೆ. ಒಂದು ವೇಳೆ ಸಚಿವರಿಗೆ ತಿಳಿಯದೇ ಪಾಲಿಕೆ ಆಯುಕ್ತ, ಇನ್ನಿತರ ಹಿರಿಯ ಅಧಿಕಾರಿಳು ಮಾಹಿತಿ ನೀಡಿದರೆ, ಹೇಳಿಕೆಗಳನ್ನು ಕೊಟ್ಟರೆ ಆಭಾಸವಾಗಬಹುದು, ಇಲ್ಲವೇ ಗೊಂದಲ ಸೃಷ್ಟಿಯಾಗಬಹುದು. ಅದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.












Click it and Unblock the Notifications