''ಡಬಲ್ ಎಂಜಿನ್ ಸರ್ಕಾರದಿಂದ ಕರ್ನಾಟಕಕ್ಕೆ ಕೊಡುಗೆ ಶೂನ್ಯ''
ಬೆಂಗಳೂರು, ಫೆಬ್ರವರಿ 1: ಜನಸಾಮಾನ್ಯರು ಬಳಸುವಂಥ ದಿನ ಬಳಕೆ ವಸ್ತುಗಳ ಮೇಲೆ ಸೆಸ್ ಹೆಚ್ಚಳ ಮಾಡಿ ಈಗಾಗಲೇ ಕೊರೊನಾ ಸಂಕಷ್ಟದಿಂದ ಬಳಲುತ್ತಿರುವ ಜನರ ಮೇಲೆ ಮತ್ತಷ್ಟು ಹೊರೆ ಹೆಚ್ಚಿಸಿದ ಬಜೆಟ್ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ದೇಶ ಮಾರುವ ಹಾಗೂ ಜನಸಾಮಾನ್ಯರ ಬಾಯಿಗೆ ಮಣ್ಣು ಹಾಕುವ ಬಜೆಟ್ ಇದಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಕಿಡಿಕಾರಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಸ್ವರ್ಗ ಮಾಡಲಾಗುವುದು ಎಂದು ಹೇಳಿದ್ದ ಬಿಜೆಪಿ ಸರ್ಕಾರ ಹೆದ್ದಾರಿ ಅಭಿವೃದ್ಧಿಗೆಂದು ತಮಿಳುನಾಡು, ಕೇರಳ, ಅಸ್ಸಾಂ ಸೇರಿದಂತೆ ಇತರೇ ರಾಜ್ಯಗಳಿಗೆ ಹಣ ನೀಡಿದ್ದು ಕರ್ನಾಟಕಕ್ಕೆ ಶೂನ್ಯ, ಉದ್ಯೋಗ ಸೃಷ್ಟಿಗೆ ನಯಾಪೈಸೆ ನೀಡಿಲ್ಲ ಎಂದರು.
ಜನ ವಿರೋಧಿ ಬಜೆಟ್ ಮತ್ತು ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ವಿರುದ್ದ ಫೆಬ್ರವರಿ 2ರಂದು ಬೆಳಗ್ಗೆ ಆಮ್ ಆದ್ಮಿ ಪಕ್ಷದಿಂದ ಮೌರ್ಯ ವೃತ್ತದ ಬಳಿ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ಕದಂ ಹೇಳಿದ್ದಾರೆ.

ಅಗತ್ಯ ವಸ್ತುಗಳು ದುಬಾರಿಯಾಗುತ್ತವೆ
ಕೃಷಿ ಸೆಸ್ ಹೆಸರಿನಲ್ಲಿ ಕೃಷಿಕರಿಗೆ ಅನುಕೂಲ ಮಾಡಲಾಗುವುದು ಎಂದು ಹೇಳಿ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವುದು ಎಷ್ಟು ಸರಿ, ಡೀಸೆಲ್ ಮೇಲಿನ ಸೆಸ್ ಹೆಚ್ಚಳದಿಂದ ಅಗತ್ಯ ವಸ್ತುಗಳು ದುಬಾರಿಯಾಗುತ್ತವೆ ಎನ್ನುವ ಕನಿಷ್ಟ ಜ್ಞಾನವೂ ಇಲ್ಲವೇ ಎಂದು ವ್ಯಂಗ್ಯವಾಡಿದರು.

ವಿತ್ತೀಯ ಕೊರತೆ ಪ್ರಸ್ತುತ 9.5% ಆಗಿದೆ
ಕಳೆದ ವರ್ಷದ ವಿತ್ತೀಯ ಕೊರತೆ ಶೇ 3ರಷ್ಟಿದ್ದು, ಪ್ರಸ್ತುತ 9.5% ಆಗಿದೆ. ಮುಂದಿನ ವರ್ಷಕ್ಕೆ ಅದನ್ನು 6.8% ಆಗಬಹುದು, ಈ ಕೊರತೆ ತುಂಬಲು 12 ಲಕ್ಷ ಕೋಟಿ ಸಾಲ ಮಾಡಲು ಹೊರಟಿರುವ ಸರ್ಕಾರ ದೇಶವನ್ನು, ಈ ದೇಶದ ಜನರನ್ನು ಕೂಡ ಮುಂದಿನ ದಿನಗಳಲ್ಲಿ ಸಾಲದ ಸುಳಿಗೆ ಸಿಲುಕಿಸಿ ಹುಟ್ಟಿದ ಮಗುವನ್ನು ಮಾರಾಟ ಮಾಡಲು ಹೇಸುವುದಿಲ್ಲ ಎಂದು ಹೇಳಿದರು.

ವಿದ್ಯುತ್ ಖಾಸಗೀಕರಣಕ್ಕೆ ಮುನ್ನುಡಿ ಬರೆಯಲಾಗಿದೆ
ಪ್ರಸ್ತುತ ಬಜೆಟ್ನಲ್ಲಿ ವಿದ್ಯುತ್ ಖಾಸಗೀಕರಣಕ್ಕೆ ಮುನ್ನುಡಿ ಬರೆಯಲಾಗಿದೆ. ಈ ಮೂಲಕ ಜನ ಅಗತ್ಯತೆಯ ಮೂಲಕ್ಕೆ ಕೈ ಹಾಕಲಾಗಿದೆ. ಸರ್ಕಾರದ ಕೈಯಲ್ಲಿರುವ ಖಾಲಿ ಜಾಗ, ಆಸ್ತಿಗಳ ಮಾರಾಟ ಹೀಗೆ ಹಂತ, ಹಂತವಾಗಿ ನಮ್ಮ ಭೂಮಿಯನ್ನು, ದೇಶದ ಅಮೂಲ್ಯ ಆಸ್ತಿಯನ್ನು ಖಾಸಗಿಯವರ ತೆಕ್ಕೆಗೆ ಕೊಡುವುದಕ್ಕೆ ಹೊರಟಿರುವ ಸರ್ಕಾರದ ನಡೆ ನಾಚಿಕೆಗೇಡು ಎಂದರು.

ಬ್ಯಾಂಕ್, ವಿಮೆ ಎಲ್ಲವೂ ಖಾಸಗಿ ವಶಕ್ಕೆ
ಅತಿ ದೊಡ್ಡ ಕ್ಷೇತ್ರವಾದ ವಿಮೆಯಲ್ಲಿ 74% ತನಕ ವಿದೇಶಿ ಹೂಡಿಕೆಗೆ ಅವಕಾಶ, ಸಾರ್ವಜನಿಕ ರಂಗದ ಎರಡು ಬ್ಯಾಂಕುಗಳು ಮತ್ತು ಒಂದು ಜನರಲ್ ಇನ್ಶೂರೆನ್ಸ್ ಕಂಪನಿ ಖಾಸಗೀಕರಣ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹಳೆಯ ವಾಹನಗಳನ್ನು ಗುಜುರಿಗೆ ಹಾಕಬೇಕು ಎಂದು ಹೇಳುತ್ತಿರುವ ಸರ್ಕಾರ ಮೊದಲು ತನ್ನ ಈ ಬಜೆಟ್ಅನ್ನು ಗುಜುರಿಗೆ ಎಸೆಯಲಿ ಎಂದು ಹೇಳಿದರು.












Click it and Unblock the Notifications