ರಾಜಭವನದಲ್ಲಿ ಹಸಿ ಕಸ ಸಂಸ್ಕರಣೆ, ಕಾಂಪೋಸ್ಟ್ ತಯಾರು
ಬೆಂಗಳೂರು, ಜೂನ್ 04 : ಕರ್ನಾಟಕದ ರಾಜಭವನ ಇನ್ನು ಮುಂದೆ ಹಸಿ ಕಸ ವಿಲೇವಾರಿಗೆ ಬಿಬಿಎಂಪಿಯನ್ನು ಅವಲಂಬಿಸುವುದಿಲ್ಲ. ರಾಜಭವನದ ಕಸ ಆವರಣದ ಗಿಡಗಳಿಗೆ ಕಾಂಪೋಸ್ಟ್ ಆಗಿ ಪೂರೈಕೆಯಾಗಲಿದೆ.
'ನಮ್ಮ ಕಸ ಜಮ್ಮ ಜವಾಬ್ದಾರಿ' ಎಂಬ ಕಾರ್ಯಕ್ರಮಕ್ಕೆ ವಿಶ್ವಪರಿಸರ ದಿನವಾದ ಜೂನ್ 5ರಂದು ಚಾಲನೆ ಸಿಗಲಿದೆ. ಈ ಕಾರ್ಯಕ್ರಮದ ಅಂಗವಾಗಿ ರಾಜಭವನದಲ್ಲಿ ಹಸಿ ಕಸವನ್ನು ಸಂಸ್ಕರಣೆ ಮಾಡುವ ಘಟಕ ಆರಂಭವಾಗಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಸಿ ಕಸದ ಸಂಸ್ಕರಣಾ ಘಟಕ ಆರಂಭಿಸಲು ರಾಜಭವನಕ್ಕೆ ಸಹಕಾರ ನೀಡಿದೆ. ರಾಜಭವನದಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಕಾಂಪೋಸ್ಟ್ ಮಾಡಿ ಅಲ್ಲಿನ ಗಿಡಗಳಿಗೆ ಹಾಕಲಾಗುತ್ತದೆ. ಒಣ ಕಸವನ್ನು ಮಾತ್ರ ಹೊರಗೆ ಕಳಿಸಲಾಗುತ್ತದೆ.

ರಾಜಭವನದ ಆವರಣದಲ್ಲಿ ಕಚೇರಿ ಸಿಬ್ಬಂದಿ, ತೋಟದ ಕೆಲಸಗಾರರು ಸೇರಿ 50 ಮನೆಗಳಿವೆ. ಪ್ರತಿದಿನ 50 ಕೆಜಿಯಷ್ಟು ಹಸಿ ಕಸ ಸಂಗ್ರಹವಾಗುತ್ತದೆ. ಯಾವುದೇ ಹಸಿ ಕಸವನ್ನು ರಾಜಭವನದ ಹೊರಗೆ ಕಳಿಸದಿರಲು ಸಿಬ್ಬಂದಿಗಳು ತೀರ್ಮಾನಿಸಿದ್ದಾರೆ. ಕಸ ವಿಂಗಡನೆ ಬಗ್ಗೆ ಬಿಬಿಎಂಪಿ ತರಬೇತಿ ಸಹ ನೀಡಿದೆ.
15 ರಿಂದ 20 ಕೆಜಿ ಕಾಂಪೋಸ್ಟ್ ತಯಾರು ಮಾಡುವ ಎರಡು ಡ್ರಮ್ಗಳನ್ನು ರಾಜಭವನದ ಆವರಣದಲ್ಲಿ ಆಳವಡಿಸಲಾಗುತ್ತದೆ. ನಗರದ ವಾರ್ಡ್ಗಳಲ್ಲಿ ಕಾಂಪೋಸ್ಟ್ ತಯಾರು ಮಾಡುವ ಮಾದರಿಯಲ್ಲಿ ಕಸವನ್ನು ಸಂಸ್ಕರಣೆ ಮಾಡಿ ಕಾಂಪೋಸ್ಟ್ ಮಾಡಲಾಗುತ್ತದೆ.
ರಾಜಭವನದ ಸುತ್ತಲೂ ಇರುವ ಉದ್ಯಾನದಿಂದ ಉಂಟಾಗುವ ಸುಮಾರು 100 ಕೆಜಿ ಕಸಿ ಕಸವನ್ನು ತೋಟಗಾರಿಕಾ ಇಲಾಖೆ ಸಂಗ್ರಹ ಮಾಡಲಿದ್ದು, ಅದರಿಂದ ಕಾಂಪೋಸ್ಟ್ ತಯಾರಿಸಿ ಕಬ್ಬನ್ ಉದ್ಯಾನಕ್ಕೆ ಬಳಕೆ ಮಾಡಿಕೊಳ್ಳಲಿದೆ.
'ನಮ್ಮ ಕಸ ನಮ್ಮ ಜವಾಬ್ದಾರಿ' ಎಂಬ ಕಾರ್ಯಕ್ರಮ ರೂಪಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಬಿಬಿಎಂಪಿಗೆ ಸೂಚನೆ ನೀಡಿದೆ. ಉಪ ಲೋಕಾಯುಕ್ತ ಸುಭಾಷ್ ಬಿ.ಆಡಿ ಅವರು ಈ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡಲಿದ್ದಾರೆ.












Click it and Unblock the Notifications